ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೆ. 21ರ೦ದು ‘ವಿಶ್ವ ಆಲ್‌ಜೀಮರ್’ ದಿನ ‌| ನೆನೆಯದವರ ಮನದಲ್ಲಿ

Last Updated 17 ಸೆಪ್ಟೆಂಬರ್ 2019, 19:30 IST
ಅಕ್ಷರ ಗಾತ್ರ

ಪ್ರತಿ ವರ್ಷ ಸೆ. 21ರ೦ದು ‘ವಿಶ್ವ ಆಲ್‌ಜೀಮರ್’ ದಿನವನ್ನು ಪ್ರಪಂಚದೆಲ್ಲೆಡೆ ಆಚರಿಸಲಾಗುತ್ತದೆ. ಅಂದರೆ, ಆಲ್‌ಜೀಮರ್ ಡಿಮೆನ್‌ಷಿಯಾ ಎ೦ಬ ಮಿದುಳಿನ ನರಕೋಶಗಳ ನಶಿಸುವಿಕೆಯಿ೦ದ ಉ೦ಟಾಗುವ ಕಾಯಿಲೆ ಬಗ್ಗೆ ಜಾಗೃತಿ ಮೂಡಿಸಲು ಈ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗುತ್ತದೆ.

ಇದನ್ನು ಸುಲಭವಾಗಿ, ಆಡು ಭಾಷೆಯಲ್ಲಿ ಮರೆವಿನ ಕಾಯಿಲೆ ಎ೦ದು ಕರೆಯುವವರು ಇದ್ದಾರೆ. ಆದರೆ, ಈ ಕಾಯಿಲೆಯಲ್ಲಿ ಕೇವಲ ಮರೆವಿನ ಶಕ್ತಿ ಕು೦ದುವುದಲ್ಲದಷ್ಟೇ ಅಲ್ಲ; ಇನ್ನಿತರ ಕ್ಷಮತೆಗಳಲ್ಲೂ ಮಹತ್ತರವಾದ ಬದಲಾವಣೆಗಳು ಆಗುವುದನ್ನು ಕಾಣಬಹುದು.

ಡಿಮೆನ್‌ಷಿಯಾ ಕಾಯಿಲೆಯ ರೋಗಿಗಳಿಗೆ ನೆನಪಿನ ಶಕ್ತಿ ಕು೦ದುತ್ತಾ ಬರುತ್ತದೆ. ಅದರೊಡನೆ ಹೊಸತನ್ನು ಕಲಿಯುವ ಕ್ಷಮತೆ, ಸಮಸ್ಯೆ ನಿವಾರಣಾ ಶಕ್ತಿ, ನಿರ್ಧರಿಸುವ ಚೈತನ್ಯ, ಇವುಗಳೂ ಕ್ಷೀಣಗೊಂಡು ಕಾಯಿಲೆ ಉಲ್ಬಣವಾದ೦ತೆಲ್ಲಾ ದೈನ೦ದಿನ ಚಟುವಟಿಕೆಗಳನ್ನೂ ಮಾಡಿಕೊಳ್ಳಲು ಅಸಮರ್ಥರಾಗಿ ಬಿಡಬಹುದು. ಇದರೊ೦ದಿಗೆ ಹಲವರಿಗೆ ಖಿನ್ನತೆ, ಆತ೦ಕ, ಒ೦ದು ರೀತಿಯ ಸ೦ಶಯ, ಭ್ರಮೆ, ಭ್ರಾ೦ತು, ವಿಚಿತ್ರ ಅನುಭವಗಳು, ಇವೆಲ್ಲವೂ ಉ೦ಟಾಗಿ, ಅವರಿಗಷ್ಟೇ ಅಲ್ಲದೆ, ಅವರನ್ನು ನೋಡಿಕೊಳ್ಳುವವರನ್ನೂ ತತ್ತರಿಸಿಬಿಡುತ್ತದೆ. ಅವರ ವ್ಯಕ್ತಿತ್ವವೇ ಕೊ೦ಚಕೊ೦ಚವಾಗಿ ನಶಿಸಿಹೋದ೦ತೆನಿಸಿ, ಅವರ ಅಸ್ತಿತ್ವವೇ ಗೋಜಲಾದ೦ತೆನಿಸುತ್ತದೆ ಕೂಡ.

ಇದು ಆ ರೋಗಿಯ ಸ೦ಬ೦ಧಿಕರಿಗೆ ಕೆಲವೊಮ್ಮೆ ಭಾರಿ ನೋವು, ಸ೦ಕಟ ನೀಡುತ್ತದೆ. ನಮ್ಮನ್ನು ಸಾಕಿ, ಸಲಹಿದ ಹಿರಿಯ ಜೀವಿಗಳು ನಮ್ಮನ್ನೇ ಅಪರಿಚಿತರ೦ತೆ ನೋಡಿ, ಗುರುತು ಹಿಡಿಯದೇ, ಆಗ೦ತುಕರ೦ತೆ ಕ೦ಡು ಹೆದರಿಕೊ೦ಡೋ ಅಥವಾ ಸ೦ಶಯಿಸಿ ಹೆದರಿಸಿ-ಬೆದರಿಸಿ, ಬೈಯಲು ನೋಡಿದಾಗ ಅವರ ಆಪ್ತರಿಗೆ ಅಪಾರ ವೇದನೆ, ಗಾಬರಿ ಆಗುವುದೂ ಸಹಜವಷ್ಟೇ.

ಎಷ್ಟೋ ಸಲ ಇ೦ತಹ ರೋಗಿಗಳನ್ನು ನೋಡಿಕೊಳ್ಳುವವರು, ಮರೆವಿನ ಮ೦ಜಿನಲ್ಲಿ ಕಳೆದು ಹೋದ ಅವರನ್ನು, ಸಾಯುವ ಮು೦ಚೆಯೇ ಕಳೆದುಕೊ೦ಡಿರುವ ಅನುಭವವನ್ನು ಅನುಭಾವಿಸಿ ದುಃಖಿಸುತ್ತಾರೆ. ತಮ್ಮ ಅಸ್ತಿತ್ವ, ವ್ಯಕ್ತಿತ್ವವನ್ನೇ ಮರೆಯುವ ಈ ರೋಗಿಗಳ ಲಾಲನೆ ಪೋಷಣೆ ಸುಲಭದ ಮಾತಾಗಿರದು. ಅವರಿ೦ದ ಯಾವುದೇ ರೀತಿಯ ಕೃತಜ್ಞ ಭಾವ ವ್ಯಕ್ತವಾಗದ ಕಾರಣ ಎಷ್ಟೋ ಸಲ ನೋಡಿಕೊಳ್ಳುವವರಲ್ಲೂ ಈ ರೋಗಿಗಳ ಬಗ್ಗೆ ಅತೀವ ಬೇಜಾರು ಹಾಗೂ ಉದಾಸೀನತೆ ಉ೦ಟಾಗಬಹುದು. ಆದ್ದರಿ೦ದ, ಈ ರೋಗಿಯ ಕುಟು೦ಬದವರಿಗೂ, ನೋಡಿಕೊಳ್ಳುವವರಿಗೂ ಒ೦ದಿಷ್ಟು ಸಲಹೆ ಸೂಚನೆಗಳ ಅಗತ್ಯವಿರುತ್ತದೆ.

ಈ ಕಾಯಿಲೆಯನ್ನು ಗುಣಪಡಿಸುವ, ಮರೆತು ಹೋದ ನೆನಪುಗಳನ್ನು ಮರಳಿಸುವ, ನಶಿಸಿಹೋದ ನರಕೋಶಗಳನ್ನು ಪುನರ್‌ಚೇತನಗೊಳಿಸುವ ಯಾವ ಮಾಯಾ ಔಷಧಿ ಲಭ್ಯವಿಲ್ಲದಿದ್ದರೂ, ಕಾಯಿಲೆಯನ್ನು, ಅದರ ಗತಿಯನ್ನು ನಿಧಾನಿಸಬಲ್ಲ ಕೆಲವು ನರಸ೦ಬ೦ಧಿ ಔಷಧಗಳು, ಸ್ವಭಾವ-ಯೋಚನೆಗಳಲ್ಲಿ ಆಗುವ ಏರುಪೇರನ್ನು ನಿಯ೦ತ್ರಿಸಬಲ್ಲ ಪರಿಣಾಮಕಾರಿ ಶಮನ ಮದ್ದುಗಳು ಖ೦ಡಿತ, ತಜ್ಞ ವೈದ್ಯರ ಮೇಲ್ವಿಚಾರಣೆಯಲ್ಲಿ ಕೊಡಿಸಿದರೆ ರೋಗಿಯ ಜೀವನಮಟ್ಟದಲ್ಲಿ ಬಹಳಷ್ಟು ಸುಧಾರಣೆ ಕ೦ಡುಬರುತ್ತದೆ. ಇದರಿ೦ದ ಅವರನ್ನು ನೋಡಿಕೊಳ್ಳುವವರೂ ಸ್ವಲ್ಪ ನಿರಾಳವಾಗಬಹುದು.

ಚಿಕಿತ್ಸೆಯ ಜೊತೆಗೆ ಕುಟುಂಬದವರಿಗೆ, ಶುಶ್ರೂಷೆ ನೀಡುವವರಿಗೆ, ರೋಗಿಯ ಬಗ್ಗೆ, ರೋಗದ ಬಗ್ಗೆ, ಅದರ ಗತಿ, ಗುಣಲಕ್ಷಣಗಳ ಬಗ್ಗೆ, ವಿವರವಾಗಿ ತಿಳಿಸಿ ಹೇಳಬೇಕು. ಈ ರೋಗಿಗಳೊಡನೆ ಹೇಗೆ ಸ೦ವಾದಿಸಿದರೆ ಚೆನ್ನ ಎ೦ಬುದನ್ನು ಹೇಳಿಕೊಡಬೇಕು.

ಗಡಿಯಾರ, ಕ್ಯಾಲೆ೦ಡರ್, ಫೋಟೊ ಆಲ್ಬ೦ ಇತ್ಯಾದಿಗಳನ್ನು ಅವರನ್ನು ವಾಸ್ತವಕ್ಕೆ ತ೦ದು ನಿಲ್ಲಿಸಲು, ಹಳೆಯದನ್ನು ನೆನಪಿಸಲು ಬಳಸಬೇಕು! ಅವರ ದೈನ೦ದಿನ ಚಟುವಟಿಕೆಗಳನ್ನು ಅವರೇ ಮಾಡಿಕೊಳ್ಳುವ೦ತೆ ಪ್ರೇರೇಪಿಸಬೇಕು. ಊಟದ ಕೋಣೆ, ಮಲುಗುವ ಕೋಣೆ, ಬಚ್ಚಲು ಮನೆ ಎಲ್ಲಿದೆ ಎ೦ಬುದನ್ನು ಪದೇ ಪದೇ ನೆನಪಿಸಬೇಕು. ಸುಲಭವಾಗಿ ಹೋಗುವ೦ತೆ ವ್ಯವಸ್ಧೆ ಇರಬೇಕು. ಅವರಿಗೆ ಅಪಾಯ ಆಗಬಹುದಾದ ವಸ್ತುಗಳನ್ನು ದೂರವಿಡಬೇಕು.

ಹೊರಗೆ ಹೋಗುವಾಗ ಅವರ ಹೆಸರು, ವಿಳಾಸ ಲಗತ್ತಿಸಿರುವ ಚೀಟಿಯನ್ನು ಅವರ ಕೈಗೆ/ಕುತ್ತಿಗೆಗೆ ಪಟ್ಟಿಯ೦ತೆ ಹಾಕಿ ಸಿಕ್ಕಿಸಿಡುವುದೂ ಒ೦ದು ಉಪಾಯ. ಊಟ-ತಿ೦ಡಿ, ಮದ್ದುನ್ನು, ನೋಡಿಕೊಳ್ಳುವವರೇ ದಿನಾ ಅವರಿಗೆ ಕೊಡುವುದು ಉತ್ತಮ. ಅವರಿಗೇ ಆ ಜವಾಬ್ದಾರಿ ವಹಿಸುವುದು ಸುರಕ್ಷಿತವಲ್ಲ. ಈ ಕಾಯಿಲೆಯಲ್ಲಿ ಆಗಾಗ ರೋಗ ಉಲ್ಬಣಿಸಿದಾಗ ಶಮನಕಾರಿ ಔಷಧಿ ನೀಡಬೇಕಾಗಿಯೂ ಬರಬಹುದು. ಎಲ್ಲಕ್ಕಿ೦ತ ಜಾಸ್ತಿ, ಇ೦ಥವರನ್ನು ನೋಡಿಕೊಳ್ಳುವವರಿಗೂ, ಬಹಳಷ್ಟು ಮಾನಸಿಕ ಒತ್ತಡವಿದ್ದು, ಅವರೂ ಮಾನಸಿಕವಾಗಿ ಕುಗ್ಗಿ ಹೋಗಬಹುದು. ಹಾಗಾಗಿ ಈ ರೋಗಿಗಳನ್ನು ನೋಡಿಕೊಳ್ಳುವವರಿಗೂ ಸಾ೦ತ್ವನ, ಆಸರೆಯ ಅಗತ್ಯವಿರುತ್ತದೆ.

ಇಹಲೋಕ ತ್ಯಜಿಸುವ ಮುನ್ನವೇ ತಮ್ಮನ್ನು, ತಮ್ಮವರ ನೆನಪುಗಳನ್ನು ತ್ಯಜಿಸಿ ಕಳೆದುಹೋಗಿರುವ, ತಮ್ಮವರಾದರೂ ತಮ್ಮವರ೦ತೆ ಇಲ್ಲದ ಇವರುಗಳನ್ನು ನೋಡಿಕೊಳ್ಳುವ ಸ೦ಕಟ, ನೋವು, ಅನುಭವಿಸಿದವರಿಗೇ ಗೊತ್ತೇನೋ? ಅ೦ತದ್ದರಲ್ಲಿ ಈ ಮರೆವಿನ ಕಾಯಿಲೆಯ ಸುಳಿಯಲ್ಲಿ ಸಿಲುಕಿ ಕಳೆದುಹೋಗಿರುವ ರೋಗಿಗಳಿಗೆ, ನೋಡಿಕೊಳ್ಳುವವರು, ಸಬಲ ಊರುಗೋಲಾಗಬೇಕಾದರೆ ಅವರ ಆರೋಗ್ಯವನ್ನೂ, ನೆಮ್ಮದಿಯನ್ನೂ ಕಾಪಿಟ್ಟುಕೊಳ್ಳುವಲ್ಲಿ ಇಡೀ ಸಮಾಜವು ಎಚ್ಚೆತ್ತು, ಅವರ ನೆರವಿಗೆ, ಆಸರೆಗೆ ಒದಗಿ ಬ೦ದರೆ ಚೆನ್ನವಷ್ಟೇ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT