ಬಸವಕಲ್ಯಾಣ:` ಮೂಢನಂಬಿಕೆ, ಕಂದಾಚಾರ ವಿರೋಧಿಸಿ ಪ್ರಗತಿಪರ ವಿಚಾರಧಾರೆ ಹೊಂದಿದ್ದ ಬಸವಾದಿ ಶರಣರು ಜನಸಾಮಾನ್ಯರಲ್ಲಿ ಅರಿವು ಮೂಡಿಸಲು ಪ್ರಯತ್ನಿಸಿದ್ದರು' ಎಂದು ಹರಳಯ್ಯ ಪೀಠದ ಸಂಚಾಲಕಿ ಡಾ.ಗಂಗಾಂಬಿಕಾ ಪಾಟೀಲ ಹೇಳಿದರು.
ಇಲ್ಲಿನ ಶರಣ ಹರಳಯ್ಯ ಗವಿಯಲ್ಲಿ ಈಚೆಗೆ ಆಯೋಜಿಸಿದ್ದ ಮಾಸಿಕ ಶರಣು ಶರಣಾರ್ಥಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮಹಿಳೆ ಸ್ವತಂತ್ರಳಲ್ಲ ಎಂದು ಸನಾತನ ಧರ್ಮ ಸಾರಿದಾಗ ಬಸವಣ್ಣನವರು ಮಹಿಳೆಯರಿಗೆ ಸ್ವಾತಂತ್ರ್ಯ ನೀಡಿದ್ದರು. ಸಾಮಾಜಿಕ, ಆರ್ಥಿಕ ಮತ್ತು ಧಾರ್ಮಿಕ ಕ್ಷೇತ್ರದಲ್ಲಿ ಪ್ರಗತಿ ಸಾಧಿಸಿದ್ದರು. ಶರಣರ ನಡೆ ನುಡಿ ಒಂದಾಗಿತ್ತು. ಆದ್ದರಿಂದಲೇ ಅವರು ರಚಿಸಿದ ವಚನಗಳು ಇಂದಿಗೂ ಪ್ರಸ್ತುತವಾಗಿವೆ. ವಚನ ತತ್ವದಂತೆ ನಡೆಯುವುದು ಎಲ್ಲರ ಜವಾಬ್ದಾರಿಯಾಗಿದೆ' ಎಂದರು.
ಪ್ರಾಧ್ಯಾಪಕ ಡಾ.ಚಿತ್ರಶೇಖರ ಚಿರಳ್ಳಿ ಮಾತನಾಡಿ, `ಬಸವಣ್ಣನವರು ಅಸ್ಪೃಶ್ಯತೆ ಹೋಗಲಾಡಿಸಲು ಯತ್ನಿಸಿ ಅಂತರ ಜಾತಿ ವಿವಾಹ ಮಾಡಿಸಿದರು. ಬಸವಧರ್ಮ ಸ್ವೀಕರಿಸುವಲ್ಲಿ ಮೇಲು–ಕೀಳು ಎಂಬ ಭೇದವಿಲ್ಲ ಎಂದು ಸಾರಿದರು. ಇದಕ್ಕಾಗಿ 12 ನೇ ಶತಮಾನದಲ್ಲಿ ಇಲ್ಲಿ ದೊಡ್ಡ ಕ್ರಾಂತಿಯೇ ನಡೆಯಿತು. ಬಿಜ್ಜಳನ ಸೈನ್ಯ ಹಾಗೂ ವೈದಿಕರು ಒಂದೆಡೆ ಸೇರಿಕೊಂಡು ಶರಣರ ವಿರುದ್ಧ ಹೋರಾಡಿದರು' ಎಂದು ವಿವರಿಸಿದರು.
ಡಾ.ಸಂಗೀತಾ ಮಂಠಾಳೆ, ಜಯಶ್ರೀ ಬಿರಾದಾರ ಮಾತನಾಡಿದರು. ವೈದ್ಯೆ ಡಾ.ಜ್ಯೋತಿ ಖಂಡ್ರೆ ಉದ್ಘಾಟಿಸಿದರು. ಬಸವೇಶ್ವರ ದೇವಸ್ಥಾನ ಸಮಿತಿ ಸದಸ್ಯ ಕಾಶಪ್ಪ ಸಕ್ಕರಬಾವಿ ಅಧ್ಯಕ್ಷತೆ ವಹಿಸಿದ್ದರು. ಹರಳಯ್ಯ ಸಮಾಜದ ಮುಖಂಡ ಚಂದ್ರಕಾಂತ ಜಾಧವ, ಶಿವಮ್ಮಾ ಹೊಳಕುಂದೆ ಉಪಸ್ಥಿತರಿದ್ದರು.