ವಿಶ್ಯ ನೃತ್ಯ ದಿನದ ಅಂಗವಾಗಿ ಭವಾನಿ ಪ್ರಸನ್ನಾಲಯ ಹಾಗೂ ಭವಂ ನೃತ್ಯಾಲಯವು ಈಚೆಗೆ ನಗರದಲ್ಲಿ ಮೂರು ದಿನಗಳ ಕಾಲ ಭರತನಾಟ್ಯ ಕಾರ್ಯಾಗಾರ ಆಯೋಜಿಸಿತ್ತು. 8 ವರ್ಷಕ್ಕಿಂತ ಮೇಲ್ಪಟ್ಟ ನೂರಾರು ಅಭ್ಯರ್ಥಿಗಳು ಶಿಬಿರದಲ್ಲಿ ಪಾಲ್ಗೊಂಡು ಅದರ ಲಾಭ ಪಡೆದರು.
ಖ್ಯಾತ ಭರತನಾಟ್ಯ ಕಲಾವಿದೆ ಹಾಗೂ ಶಿವಾಲಿ ನೃತ್ಯ ಶಿರೋಮಣಿ ಹಾಗೂ ಭಾರತಿ ನಾಟ್ಯಮಣಿ ಪ್ರಶಸ್ತಿ ಪುರಸ್ಕೃತರಾದ ಭವಾನಿ ಅನಂತರಾಮನ್ ಅವರು ಸಂಪನ್ಮೂಲ ವ್ಯಕ್ತಿಯಾಗಿ ಶಿಬಿರದಲ್ಲಿ ಪಾಲ್ಗೊಂಡು ತಮ್ಮ ವಿಶಿಷ್ಟ ಶೈಲಿಯ ನೃತ್ಯ ನಿರ್ದೇಶನದ ತಂತ್ರಗಳ ಬಗ್ಗೆ ಶಿಬಿರಾರ್ಥಿಗಳಿಗೆ ತಿಳಿಸಿಕೊಟ್ಟರು.
ಭರತನಾಟ್ಯದ ಪ್ರಕಾರಗಳಾದ ಪುಷ್ಪಾಂಜಲಿ, ಮಿಶ್ರ ಅಲರಿಪು ಹಾಗೂ ಪದಂ ಬಗ್ಗೆ ಭವಾನಿ ಅನಂತರಾಮನ್ ಅವರೇ ಶಿಬಿರಾರ್ಥಿಗಳಿಗೆ ಮಾಹಿತಿ ನೀಡಿದರು. ಅವರ ಶಿಷ್ಯಂದಿರಾದ ದೀಪಾ ಭರತ್ ಹಾಗೂ ಅನಿತಾ ರಾಜಗೋಪಾಲನ್ ಭರತನಾಟ್ಯ ಪ್ರದರ್ಶನ ನೀಡುವುದರ ಮೂಲಕ ಶಿಬಿರಕ್ಕೆ ಮೆರುಗು ತಂದುಕೊಟ್ಟರು.
ಭರತನಾಟ್ಯ ಪ್ರವೇಶಕ್ಕೂ ಮುನ್ನ ಯಾವ ರೀತಿ ಸಿದ್ಧತೆ ನಡೆಸಬೇಕು ಹಾಗೂ ದೇಹವನ್ನು ಹೇಗೆ ಸಮತೋಲನದಲ್ಲಿರಿಸಬೇಕು ಎಂಬುದರ ಬಗ್ಗೆಯೂ ಹೇಳಿಕೊಡಲಾಯಿತು. ಸಂವಾದವನ್ನೂ ಭವಾನಿ ಅವರು ನಡೆಸಿಕೊಟ್ಟರು. ಇದೇ ವೇಳೆ ಹರಿಣಿ ವಿ. ಶಂಕರ್ ಅವರ ರಂಗಪ್ರವೇಶವೂ ಜರುಗಿತು.