ಕನಕಪುರ: ತಾಲ್ಲೂಕಿನ ಚೀಲಂದವಾಡಿ ಅರಣ್ಯ ವಲಯ ವ್ಯಾಪ್ತಿಯ ಶೆಟ್ಟಿ ಕೆರೆಯಲ್ಲಿ ಆನೆ ಮುಳುಗಿ ಸಾವನ್ನಪ್ಪಿದೆ.
ಸುಮಾರು 18 ವರ್ಷದ ಹೆಣ್ಣಾನೆ ಸಾವಿಗೀಡಾಗಿದೆ. ಭಾನುವಾರ ರಾತ್ರಿ ಆನೆ ಮೃತಪಟ್ಟಿದ್ದು ಸೋಮವಾರ ಬೆಳಿಗ್ಗೆ ನೀರಿನಲ್ಲಿ ಅದರ ಮೃತದೇಹ ತೇಲುತ್ತಿರುವುದನ್ನು ದನ ಮೇಯಿಸಲು ಹೋದವರು ಗಮನಿಸಿದ್ದಾರೆ. ತಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.
ಸಹಾಯಕ ವಲಯ ಸಂರಕ್ಷಣಾಧಿಕಾರಿ ಕೆ.ಡಿ.ಶ್ರೀನಿವಾಸಯ್ಯ, ವಲಯ ಅರಣ್ಯಾಧಿಕಾರಿ ಕಿರಣ್ ಕುಮಾರ್, ಉಪ ವಲಯ ಅರಣ್ಯಾಧಿಕಾರಿ ಶಿವಕುಮಾರ್ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು.
ಡಾ. ತಾಹೀರ್ ಅವರಿಂದ ಮರಣೋತ್ತರ ಪರೀಕ್ಷೆ ಮಾಡಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
‘ಹೆಣ್ಣಾನೆ ಸಾಯುವುದಕ್ಕೂ ಮುನ್ನ ಮರಿಗೆ ಜನ್ಮ ನೀಡಿದೆ. ಹೆರಿಗೆ ಸಂದರ್ಭದಲ್ಲಿ ನಿತ್ರಾಣಗೊಂಡಿದ್ದ ಆನೆ ಕೆರೆಯಲ್ಲಿ ನೀರು ಕುಡಿಯಲು ಹೋಗಿ ಮೇಲೆ ಬರದೆ ಅಲ್ಲೇ ಸಾವನಪ್ಪಿರಬಹುದು. ಜನಿಸಿದ ಮರಿ ಆನೆಯು ಬೇರೆ ಆನೆಗಳೊಂದಿಗೆ ಕಾಡಿಗೆ ಸೇರಿಕೊಂಡಿದೆ’ ಎಂದು ವನ್ಯಜೀವಿ ವಲಯ ಅರಣ್ಯಾಧಿಕಾರಿ ಕಿರಣ್ಕುಮಾರ್
ಹೇಳಿದ್ದಾರೆ.