ಪರಶುರಾಂಪುರ: ಸರ್ಕಾರಿ ಶಾಲೆಗಳೆಂದರೆ ಮೂಗು ಮುರಿಯುವವರ ನಡುವೆ ಆಶಾಕಿರಣ ಹುಟ್ಟಿಸುವಂತಿದೆ ಈ ಶಾಲೆ. ಈ ಶಾಲೆಯ ಅಚ್ಚುಕಟ್ಟುತನಕ್ಕೆ ಮಾರು ಹೋಗಿ ಗ್ರಾಮಸ್ಥರು ತಮ್ಮ ಮಕ್ಕಳನ್ನು ಈ ಶಾಲೆಗೆ ಕಳುಹಿಸಲು ಮುಂದಾಗಿದ್ದಾರೆ.
ಇದು ಚಿತ್ರದುರ್ಗ ಜಿಲ್ಲೆಯ ಪರಶುರಾಂಪುರದ ನಲ್ಲೂರಹಳ್ಳಿ ಶಾಲೆ. ಶಿಕ್ಷಕರ ಪರಿಶ್ರಮದಿಂದಾಗಿ ಜಿಲ್ಲಾ ಮಟ್ಟದಲ್ಲಿ ಶಾಲೆ ಗುರುತಿಸಿಕೊಂಡಿದೆ.1996ರಲ್ಲಿ ಸ್ಥಾಪನೆಯಾದ ಈ ಶಾಲೆಯ ಅವರಣವೆಲ್ಲಾ ಜಾಲಿಗಿಡಗಳಿಂದ ಕೂಡಿತ್ತು. ಪೊಲೀಸ್ ಕೆಲಸ ಬಿಟ್ಟು ಶಿಕ್ಷಕ ವೃತ್ತಿಯನ್ನು ಆಯ್ಕೆ ಮಾಡಿಕೊಂಡಿದ್ದ ಬಸವರಾಜ್ ಈ ಶಾಲೆಯ ವಾತಾವರಣ ಕಂಡು ದಿಗಿಲು ಬಿದ್ದಿದ್ದರಂತೆ. ಮತ್ತೆ ಪೊಲೀಸ್ ಕೆಲಸಕ್ಕೆ ವಾಪಸ್ ಹೋಗಲು ಮನಸ್ಸು ಮಾಡಿದ್ದರಂತೆ. ಶಾಲೆಯ ದುಃಸ್ಥಿತಿಯನ್ನು ಕಂಡು ಅರ್ಧಕ್ಕೆ ಬಿಟ್ಟು ಹೋಗಲಾರದ ಅವರು ಶಾಲೆಗೆ ಉತ್ತಮ ಪರಿಸರ ಕಲ್ಪಿಸಿ ಇತರರಿಗೆ ಮಾದರಿಯಾಗಿದ್ದಾರೆ.
ಕೈತೋಟ: ಶಾಲೆಯ ಆವರಣದಲ್ಲಿ 20 ತೆಂಗಿನ ಮರಗಳು, 20 ತೇಗದ ಮರಗಳು ಸೇರಿ ಮಾವು, ಪಪ್ಪಾಯ, ನುಗ್ಗೆ, ನೆಲ್ಲಿ, ನೇರಳೆ, ಬಾದಾಮಿ, ಸಿಲ್ವರ್ ಮುಂತಾದ ಮರಗಳಿವೆ. ಹಾಗಾಗಿ ಹಚ್ಚ ಹಸಿರಿನ ವಾತಾವರಣವಿದೆ.
ಶಿಕ್ಷಣ ಇಲಾಖೆಯ ಸಹಕಾರವಿಲ್ಲದೇ, ಗ್ರಾಮಸ್ಥರ ಪ್ರೋತ್ಸಾಹವಿಲ್ಲದೇ ಈ ಮಟ್ಟಕ್ಕೆ ಶಾಲೆ ಬೆಳೆಯಲು ಸಾಧ್ಯವಿಲ್ಲ ಎನ್ನುತ್ತಾರೆ ಮುಖ್ಯಶಿಕ್ಷಕ ಬಸವರಾಜ್.
ಶಾಲೆಗೆ ಸಂದ ಗೌರವಗಳು: ಹಸಿರ ಪರಿಸರ ಪರಿಗಣಿಸಿ ಇಲಾಖೆ ಶಾಲೆಗೆ 2015-16ನೇ ಸಾಲಿನಲ್ಲಿ ಜಿಲ್ಲಾ ಮಟ್ಟದ ಉತ್ತಮ ಹಳದಿ ಶಾಲೆ ಪ್ರಶಸ್ತಿ, 2016-17ನೇ ಸಾಲಿನಲ್ಲಿ ಜಿಲ್ಲಾ ಮಟ್ಟದ ಹಸಿರು ಶಾಲೆ ಪ್ರಶಸ್ತಿ ದೊರೆತಿದೆ.