ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳಲ್ಲಿ ಸೃಜನಶೀಲತೆ ಅರಳಿಸುವುದು ಹೇಗೆ?

Last Updated 19 ಫೆಬ್ರುವರಿ 2019, 19:45 IST
ಅಕ್ಷರ ಗಾತ್ರ

ಕುತೂಹಲಭರಿತ ಕಣ್ಣುಗಳು, ಪ್ರತಿಯೊಂದರಲ್ಲೂ ಹೊಸತನ್ನು ಹುಡುಕುವ ಆಸಕ್ತಿ, ಎಲ್ಲವನ್ನೂ ಪ್ರಶ್ನಿಸಿ ಉತ್ತರ ತಿಳಿಯುವ ಮನೋಭಾವ, ಜೊತೆಗೆ ಸದಾ ಲವಲವಿಕೆಯಿಂದ ಇದ್ದ ಹುಡುಗ ಅನೂಪ್. ಕೇವಲ 4 ವರ್ಷದವನಾಗಿದ್ದಾಗಲೇ ತನ್ನ ತಾಯಿಯ ಬಳಿ ಭೂಮಿಯ ಮೇಲೆ ಮೊದಲು ಯಾರಮ್ಮ ಬಂದಿದ್ದು ಅಮ್ಮನಾ? ಮಗುವಾ? ಎಂಬಂತಹ ಪ್ರಶ್ನೆಗಳನ್ನು ಕೇಳಿದ್ದ. ಅಪಾರ ಯೋಚನಾಶಕ್ತಿ, ಕಲ್ಪನಾಶಕ್ತಿ, ಎಷ್ಟೇ ಬೈದರೂ ತನ್ನ ಪ್ರಶ್ನೆಗೆ ಉತ್ತರ ಸಿಗುವವರೆಗೂ ಪಟ್ಟುಹಿಡಿದು ಕೂರುತ್ತಿದ್ದ ಪರಿ, ಅವನ ತಂದೆ ತಾಯಿಗಳಲ್ಲಿ ಅವನ ಮುಂದಿನ ಭವಿಷ್ಯದ ಬಗ್ಗೆ ಮತ್ತಷ್ಟು ಕನಸುಗಳನ್ನು ಕಾಣುವುದಕ್ಕೆ ಪ್ರೇರಣೆಯಂತಿದ್ದವು.

ಆದರೆ ಮುಂದಿನ ಏಳೆಂಟು ವರ್ಷಗಳಲ್ಲಿ ಎಲ್ಲವೂ ಬದಲಾಗತೊಡಗಿತು. ಕುತೂಹಲವಿದ್ದ ಕಣ್ಣುಗಳಲ್ಲಿ ಈಗ ಭಯ ಮನೆಮಾಡಿತ್ತು. ಪ್ರಶ್ನೆಗಳನ್ನು ಕೇಳುವುದನ್ನೇ ಮರೆತು ಸದಾ ಶಾಲಾ ಪುಸ್ತಕಗಳನ್ನು ಓದುವುದರಲ್ಲಿಯೇ ಮಗ್ನನಾಗಿರುತ್ತಾನೆ. ಎಷ್ಟೇ ಓದಿದರೂ ಅಂಕಗಳು ಮಾತ್ರ ಅಷ್ಟಕ್ಕಷ್ಟೆ ಬರುವುದನ್ನು ನೋಡಿ ಅವನ ತಂದೆ ತಾಯಿಯೂ ಮಗನ ಭವಿಷ್ಯದೆಡೆಗಿನ ಕನಸು ಕಾಣುವುದನ್ನು ಕೈಬಿಟ್ಟಿದ್ದಾರೆ.

ಇದು ಅನೂಪ್ ಹಾಗೂ ಅವನ ತಂದೆ ತಾಯಿಯೊಬ್ಬರ ಸಮಸ್ಯೆಯಲ್ಲ. ಎಂಥದ್ದೇ ಪ್ರತಿಷ್ಠಿತ ಶಾಲೆಗೆ ಸೇರಿಸಿದರೂ ಅಷ್ಟು ಚೂಟಿಯಾಗಿದ್ದ ತಮ್ಮ ಮಗು ಯಾಕೆ ಹೀಗಾಯಿತು ಎನ್ನುವುದು ಬಹುಪಾಲು ಪೋಷಕರ ಮುಂದಿರುವ ಪ್ರಶ್ನೆ. ಪುಸ್ತಕದ ಹುಳುವಾಗಿ, ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆದು ಒಂದೊಳ್ಳೆ ಗ್ರೇಡ್ ತೆಗೆದುಕೊಂಡರೆ ಮಾತ್ರ ಸಮಾಧಾನ ಪಡುವ ಪೋಷಕರು ಹಲವಾರು. ಕಳೆದುಹೋಗಿರುವ ತಮ್ಮ ಮಗುವಿನಲ್ಲಿದ್ದ ಸೃಜನಶೀಲತೆ, ಕ್ರಿಯಾತ್ಮಕ ಮತ್ತು ಕುತೂಹಲ ಮನೋಭಾವ ಕಾಣದಿರುವುದನ್ನು ಮರೆತೇಬಿಡುತ್ತಾರೆ. ಉತ್ತರ ಹುಡುಕುವ ಪ್ರಯತ್ನವನ್ನು ಮಾಡುವುದಿಲ್ಲ. ಹಾಗಾಗಿಯೇ ಶೇ 99ರಷ್ಟು ಮಕ್ಕಳು ತಮ್ಮ 4ನೇ ವರ್ಷದಲ್ಲಿ ಸ್ವಂತವಾಗಿ ಯೋಚಿಸಿದರೆ 14ನೇ ವರ್ಷ ತಲುಪುವುದರೊಳಗೆ ಅಂತಹ ಮಕ್ಕಳ ಸಂಖ್ಯೆ ಶೇ 2ರಷ್ಟಕ್ಕೆ ಇಳಿದಿರುತ್ತದೆ. ಇದಕ್ಕೆ ಕಾರಣ ನಮ್ಮ ಶಿಕ್ಷಣ ವ್ಯವಸ್ಥೆ ಎಂದರೆ ತಪ್ಪಲ್ಲ.

ಹೌದು ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿನ ಒಂದಿಷ್ಟು ಅಂಶಗಳನ್ನು ನೋಡುವುದಾದರೆ ಎಲ್ಲಿ ಎಡವುತ್ತಿದ್ದೇವೆ ಎಂಬುದನ್ನು ಗಮನಿಸಬಹುದು. ಉದಾಹರಣೆಗೆ ನಮ್ಮೆಲ್ಲರ ಮನೆಯಲ್ಲಿರುವ ಟಿವಿ, ಕಾರುಗಳನ್ನೇ ಗಮನಿಸಿ. 100 ವರ್ಷಗಳ ಹಿಂದೆ ಇದ್ದ ದೊಡ್ಡ ಪೆಟ್ಟಿಗೆಗಳಿಗೂ ಈಗಿರುವ ಎಲ್‌ಇಡಿ, ಹೆಚ್‌ಡಿ ಟಿವಿಗಳು ಹಾಗೂ ಹೊಸ ತಂತ್ರಜ್ಞಾನಗಳಿರುವ ಕಾರುಗಳನ್ನು ಗಮನಿಸಿ. ಇಷ್ಟೆಲ್ಲಾ ಬದಲಾವಣೆ ಸಾಧ್ಯವಾಗಿರುವುದು ವಿಜ್ಞಾನಕ್ಷೇತ್ರದಲ್ಲಿ ಆಗಿರುವ ಹೊಸ ಅವಿಷ್ಕಾರಗಳಿಂದ. ನಮ್ಮ ಜೀವನಶೈಲಿಯಲ್ಲಿಯೂ ಸಾಕಷ್ಟು ಬದಲಾವಣೆಗಳಾಗಿವೆ. ಹಾಗಾದರೆ ಶಿಕ್ಷಣದಲ್ಲಿ ತಂತ್ರಜ್ಞಾನದ ಅಳವಡಿಕೆ ಒಂದಿಷ್ಟಾಗಿರುವುದು ಬಿಟ್ಟರೆ ಕೂತು ಕೇಳುವ ಕ್ಲಾಸ್‌ರೂಂ ಮಾದರಿ ಕಲಿಕೆ ಈಗಲೂ ಇದೆ.

ಕೈಗಾರಿಕೀಕರಣಕ್ಕೆ ಪೂರಕವಾಗುವಂತಹ ಶಿಕ್ಷಣ

ಕೈಗಾರಿಕಾ ಕ್ರಾಂತಿಯಾದಾಗ ಅವರಿಗೆ ಬೇಕಾದದ್ದು ಕೊಟ್ಟ ಸೂಚನೆಗಳನ್ನು ಸರಿಯಾಗಿ ಮಾಡುವ ಕೆಲಸಗಾರರು. ಕೆಲಸಗಾರರ ಆಲೋಚನೆಗೆ, ಸೃಜನಶೀಲತೆಗೆ ಯಾವುದೇ ಜಾಗವಿಲ್ಲ. ಅದೇ ರೀತಿಯಾದ ವ್ಯವಸ್ಥೆಯನ್ನೇ ನಾವು ಶಾಲೆಗಳಲ್ಲೂ ನೋಡಬಹುದು. ಉದಾಹರಣೆಗೆ- ಕುಳಿತುಕೊಳ್ಳಿ, ಗಣಿತ ಪುಸ್ತಕದ ಪುಟ 43ನ್ನು ತೆರೆಯಿರಿ, ಪ್ರಶ್ನೆ ಸಂಖ್ಯೆ 6, ಗಲಾಟೆ ಮಾಡಬೇಡಿ.

ಪ್ರತಿ ಮಕ್ಕಳನ್ನು ಗ್ರೇಡ್‌ಗಳಿಂದ, ಬ್ಯಾಡ್ಜ್‌ಗಳಿಂದ ಅಳೆಯುತ್ತೇವೆ. ಹೇಳಿಕೊಟ್ಟದ್ದನ್ನು ಅಷ್ಟೇ ಅಚ್ಚುಕಟ್ಟಾಗಿ ಮಾಡಿದವರಿಗೆ ಉತ್ತಮ ಗ್ರೇಡ್‌ಗಳು. ಎ ಫಾರ್ ಅಂದ ತಕ್ಷಣ ಎಲ್ಲರೂ ಹೇಳುವುದು ಆ್ಯಪಲ್ಲೇ. ಎ ಇಂದ ಶುರುವಾಗುವ ನೂರಾರು ಪದಗಳಿದ್ದರೂ ಅದೇ. ಏಕೆಂದರೆ ನಾವೆಲ್ಲ ಚಿಕ್ಕವರಿದ್ದಾಗ ಹೇಳಿಕೊಟ್ಟಿದ್ದು ಅದನ್ನೆ. ಅದರ ಬದಲು ಶಿಕ್ಷಕರು ಪ್ರತಿ ಮಗುವಿಗೂ ಅದರದೇ ಉತ್ತರ ನೀಡಲು ಅವಕಾಶ ಕೊಟ್ಟಿದ್ದರೆ ಬಹುಶಃ ಪ್ರತಿ ಮಗುವೂ ಒಂದೊಂದು ಉದಾಹರಣೆ ಕೊಡುತ್ತಿತ್ತು.

ಉತ್ಸಾಹದ ಕೊರತೆ

ವಿಷಯದಲ್ಲಿ ಆಸಕ್ತಿಯಿದ್ದಾಗ ಮಾತ್ರ ಕಲಿಕೆಯಲ್ಲಿ ಪ್ರಗತಿ ಸಾಧ್ಯ. ಆದರೆ ಶಾಲೆಗಳಲ್ಲಿ ಸಾಮಾನ್ಯವಾಗಿ ಒಂದೇ ವಿಷಯವನ್ನು ಏಕಕಾಲಕ್ಕೆ ಎಲ್ಲ ಮಕ್ಕಳಿಗೂ ಕಲಿಸಲಾಗುತ್ತದೆ. ಮಗುವಿನ ಅಭಿರುಚಿಗೆ ಇಲ್ಲಿ ಯಾವುದೇ ಅವಕಾಶವಿಲ್ಲ. ಹಾಗಾಗಿ ವಿಷಯದ ಬಗ್ಗೆ ಅಭಿರುಚಿಯಿರುವ ಮಗು ಹೆಚ್ಚಿನದನ್ನು ಕಲಿತರೆ, ಆಸಕ್ತಿಯಿಲ್ಲದ ಮಗು ತಾನಾಗಿಯೇ ನಿರುತ್ಸಾಹವನ್ನು ತೋರುತ್ತದೆ. ಅದನ್ನು ಗುರುತಿಸುವಲ್ಲಿ ನಾವೂ ಎಡವುತ್ತೇವೆ. ಎಲ್ಲ ವಿಷಯಗಳಲ್ಲೂ ಹೆಚ್ಚು ಅಂಕ ಪಡೆದು ಉತ್ತೀರ್ಣರಾಗುವುದೇ ಜೀವನದ ಮಾನದಂಡವಲ್ಲ. ಯಶಸ್ಸನ್ನು ಕಂಡ ಅನೇಕರು ತಮ್ಮ ಶಾಲಾದಿನಗಳಲ್ಲಿ ರ‍್ಯಾಂಕ್ ಪಡೆದವರಲ್ಲ, ಉದಾಹರಣೆಗೆ ಸಚಿನ್ ತೆಂಡುಲ್ಕರ್, ಡಾ. ರಾಜ್‌ಕುಮಾರ್.

ಕಲಿಸುವಿಕೆ

ದಿನದಲ್ಲಿ ಕನಿಷ್ಠ 5 ಗಂಟೆಗಳಾದರೂ ಮಕ್ಕಳು ಪಾಠವನ್ನು ಕೇಳುತ್ತಾರೆ. ಶಾಲೆಗಳಲ್ಲಿ ಪ್ರತಿ ನಿಮಿಷವೂ ವ್ಯರ್ಥವಾಗದಂತೆ ವ್ಯವಸ್ಥಿತವಾಗಿ ವೇಳಾಪಟ್ಟಿಯನ್ನು ರೂಪಿಸಲಾಗಿರುತ್ತದೆ. ಬೋಧಿಸಿದ ವಿಷಯಗಳನ್ನು ಅರ್ಥೈಸಿಕೊಳ್ಳಲಾದರೂ ಸ್ವಲ್ಪ ಕಾಲಾವಕಾಶ ಬೇಕಲ್ಲವೆ?. ತರಗತಿಯಲ್ಲಿನ ಮಕ್ಕಳ ಬುದ್ದಿಮತ್ತೆಯ ಪ್ರಮಾಣದಲ್ಲಿ ವ್ಯತ್ಯಾಸವಿರುತ್ತದೆ. ಒಂದು ಮಗುವಿಗೆ ಶೇಕಡಾ 75ರಷ್ಟು ಅರ್ಥವಾದರೆ ಮತ್ತೊಂದು ಮಗು ಶೇಕಡಾ 100ರಷ್ಟನ್ನು ಕಲಿಯಬಹುದು. ಇನ್ನೊಂದು ಮಗುವಿಗೆ ಏನೂ ಅರ್ಥವಾಗದೆ ಅದರ ಕಲಿಕೆ ಸೊನ್ನೆಯಾಗಿರಬಹುದು. ಹಾಗೆಂದ ಮಾತ್ರಕ್ಕೆ ಆ ಮಗು ದಡ್ಡನಲ್ಲ, ಸ್ವಲ್ಪ ನಿಧಾನವಿರಬಹುದು ಅಷ್ಟೆ.

ಬೆಳೆಯುವ ಮಗುವಿನ ಬದಲಾವಣೆಗೆ ಈ ಮೇಲಿನ ಅಂಶಗಳು ಕಾರಣವಿರಬಹುದು. ಅತಿವೇಗವಾಗಿ ಬೆಳೆಯುತ್ತಿರುವ ಆಧುನಿಕ ಜಗತ್ತಿನಲ್ಲಿ, ಸ್ಪರ್ಧಿಸುವ ಸಲುವಾಗಿ ನಮ್ಮ ಮಕ್ಕಳನ್ನು ಒಂದೊಳ್ಳೆ ಶಾಲೆಗೆ ಸೇರಿಸಿ ಅತ್ಯುತ್ತಮ ಶಿಕ್ಷಣ ಕೊಡಿಸುವ ಹಂಬಲ ಎಲ್ಲ ಪೋಷಕರದ್ದು. ಈ ನಿಟ್ಟಿನಲ್ಲಿ ಸ್ವಂತ ಆಲೋಚನೆ, ಕ್ರಿಯಾಶೀಲತೆ, ಸೃಜನಶೀಲತೆಯನ್ನು ಬಲಿಕೊಡುವುದು ಎಷ್ಟು ಸರಿ?

ಕಲಿಕೆಯ ವಿಧಾನ

ಪ್ರತಿಯೊಂದು ಮಗುವು ಮತ್ತೊಂದು ಮಗುವಿಗಿಂತ ಅನನ್ಯ ಮತ್ತು ವಿಭಿನ್ನ, ಇದನ್ನು ನಾವು ಕಲಿಸುವಿಕೆಯಲ್ಲಿ ಪರಿಗಣಿಸುವುದೇ ಇಲ್ಲ. ಒಂದೇ ಬಗೆಯಾದ ಕಲಿಕಾ ವಿಧಾನ ಹಾಗೂ ಸಾಧನಗಳು ಎಲ್ಲ ಮಕ್ಕಳಿಗೂ ಸಲ್ಲದು. ಕೆಲವು ಮಕ್ಕಳು ಕೇಳುವಿಕೆಯಿಂದ ಹೆಚ್ಚು ಕಲಿತರೆ ಉಳಿದವರು ಹೆಚ್ಚಾಗಿ ಬರೆಯುವುದರಿಂದ ಅಥವಾ ವಿಡಿಯೊಗಳನ್ನು ನೋಡುವುದರ ಮೂಲಕ ಕಲಿಯಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT