ಬೆಂಗಳೂರು: ಆರ್ಥಿಕ ಕಷ್ಟದ ಕಾರಣ ಈ ವರ್ಷ ಅನುದಾನರಹಿತ ಶಿಕ್ಷಣ ಸಂಸ್ಥೆಗಳನ್ನು ಅನುದಾನಕ್ಕೆ ಒಳಪಡಿಸುವಂತಿಲ್ಲ ಹಾಗೂ ಅನುದಾನಿತ ಸಂಸ್ಥೆಗಳ ಖಾಲಿ ಹುದ್ದೆ ತುಂಬುವಂತಿಲ್ಲ ಎಂದು ಸೂಚಿಸಿ ಹಣಕಾಸು ಇಲಾಖೆಯ ಮುಖ್ಯ ಕಾರ್ಯದರ್ಶಿಐ.ಎಸ್.ಎನ್.ಪ್ರಸಾದ್ ಸುತ್ತೋಲೆ ಹೊರಡಿಸಿದ್ದಾರೆ.
ಪ್ರಸಕ್ತ ಸಾಲಿನಲ್ಲಿ ಯಾವುದೇವಿದ್ಯಾಸಂಸ್ಥೆಗಳನ್ನು ವೇತನಾನುದಾನಕ್ಕೆ ಒಳಪಡಿಸುವಂತಿಲ್ಲ. ನಿವೃತ್ತಿ, ನಿಧನ, ರಾಜೀನಾಮೆ ಸೇರಿದಂತೆ ಯಾವುದೇ ಕಾರಣಗಳಿಂದ ಖಾಲಿಯಾಗುವ ಹುದ್ದೆಗಳನ್ನು ಭರ್ತಿ ಮಾಡುವಂತಿಲ್ಲ ಎಂದು ಸುತ್ತೋಲೆ ಸೂಚಿಸಿದೆ.
ಸರ್ಕಾರದ ವಿವಿಧ ಇಲಾಖೆಗಳ ಅಡಿಯಲ್ಲಿ ಬರುವ ಎಲ್ಲ ಅನುದಾನಿತ ಶಿಕ್ಷಣ ಸಂಸ್ಥೆ ಮತ್ತು ವಸತಿ ನಿಲಯಗಳಿಗೆ ಈ ನಿಯಮಅನ್ವಯಿಸುತ್ತವೆ. ಈಗಾಗಲೇ ವೇತನಾನುದಾನಕ್ಕೆ ಒಳಪಡಿಸಲು ಸ್ವೀಕೃತಗೊಂಡಿರುವ ಮತ್ತು ಸ್ವೀಕೃತಗೊಳ್ಳುವ ಅನುದಾನಿತ ಶಿಕ್ಷಣ ಸಂಸ್ಥೆಗಳೂ ಸೇರಿದಂತೆ ಎಲ್ಲ ಅನುದಾನಿತ ಸಂಸ್ಥೆಗಳಿಗೂ ಅನ್ವಯಿಸುತ್ತದೆ ಎಂದು ಸುತ್ತೋಲೆಯಲ್ಲಿ ಸ್ಪಷ್ಟಪಡಿಸಲಾಗಿದೆ.