<p>'ನಾವು ಏನನ್ನು ಬಿತ್ತುತ್ತೇವೋ ಅದನ್ನೇ ಪಡೆಯುತ್ತೇವೆ' ಎಂಬ ಮಾತು ಇವತ್ತಿನ ಪಶ್ಚಿಮ ಬಂಗಾಳದ ರಾಜಕೀಯಕ್ಕೆ ನೂರಕ್ಕೆ ನೂರು ಅನ್ವರ್ಥವಾಗುತ್ತಿದೆ. ಅದಿಲ್ಲದಿದ್ದರೆ ಒಂದು ಕಾಲದಲ್ಲಿ ಇದೇ ಬಿಜೆಪಿ ಹಾಗೂ ಸಂಘಪರಿವಾರದ ನಾಯಕರುಗಳಿಂದ ‘ಬಂಗಾಳದ ದುರ್ಗೆ’ ಎಂದು ಬಾಯ್ತುಂಬ ಹೊಗಳಿಸಿಕೊಂಡಿದ್ದ ಮಮತಾ ಬ್ಯಾನರ್ಜಿ ಎಂಬ ಮಹಾ ಹಠಮಾರಿ–ಜಗಳಗಂಟಿ ನಾಯಕಿ, ಅದೇ ಬಿಜೆಪಿಯಿಂದ ಇಂಥದ್ದೊಂದು ಹೀನಾಯ ರಾಜಕೀಯ ಪತನ ಕಾಣುವ ಪ್ರಮೇಯವೇ ಇರಲಿಲ್ಲ.</p><p>ಮಮತಾರ ರಾಜಕೀಯ ಜೀವನ ಆರಂಭವಾದದ್ದೇ ಹೋರಾಟದ ‘ಗರ್ವ’ದಿಂದ. ಆದರೆ ಪತನದತ್ತ ಸಾಗಿದ್ದು ಅಧಿಕಾರದ ‘ಅಹಂಕಾರ‘ದಿಂದ. ಹಾಗೆಂದು ದೀದಿಯ ಪತನ ಆಗಿಹೋಯಿತು ಎಂದುಕೊಳ್ಳಬೇಕಿಲ್ಲ. ಆಕೆ ಹಾಗೆ ಸುಮ್ಮನಾಗುವ ಕುಳವೂ ಅಲ್ಲ. ಆದರೆ, ಬಂಗಾಳದಲ್ಲಿ ಚುಕ್ಕಾಣಿ ಹಿಡಿದು ಇದೀಗ ಅದನ್ನು ಕಳಕೊಂಡಲ್ಲಿಯವರೆಗಿನ ಅವಧಿ ಒಂದು ವಿಶಿಷ್ಟ ಅಧ್ಯಾಯದಂತಿದೆ. ಬಂಗಾಳದಲ್ಲಿ ಬೇರೂರಿ ಕುಳಿತಿದ್ದ ಕಮ್ಯುನಿಸ್ಟ್ ಸಾಮ್ರಾಜ್ಯವನ್ನು ಉರುಳಿಸಲು ಬಳಸಿದ ಅವೇ ಆಯುಧಗಳೇ ಇಂದು ಅವರ ವಿರುದ್ಧವೇ ಬಳಕೆಯಾದರೆ ಅದಕ್ಕೆ ಕಾರಣ 'ಸ್ವಯಂಕೃತ ಅಪರಾಧ’.</p><p>ನಿಜಕ್ಕೂ ದೀದಿ ಪತನ ಆರಂಭವಾದದ್ದು ಯಾವಾಗ ಎಂಬುದನ್ನು ವಿಶ್ಲೇಷಿಸಲು ಹೊರಟರೆ, ಅದು ಹೋಗಿ ನಿಲ್ಲುವುದು ಪಂಚಾಯತ್ ಮಟ್ಟಕ್ಕೆ. ಯಾವ ಪ್ರಜಾಪ್ರಭುತ್ವದ ಭದ್ರ ಊರುಗೋಲನ್ನು ಲಾಠಿಯಾಗಿ ಎತ್ತಿ ಹಿಡಿದು ಝಳಪಿಸುತ್ತ ಎಡಪಕ್ಷಗಳ ವಿರುದ್ಧ ರೋಷಾವೇಶ ತೋರಿ ಅಧಿಕಾರಕ್ಕೇರಿದ್ದರೋ, ಅದೇ ಪ್ರಜಾಪ್ರಭುತ್ವದ ಕಗ್ಗೊಲೆಗೆ 'ಪಂಚಾಯತ್’ ಮಟ್ಟದಲ್ಲಿ ನಾಂದಿ ಹಾಡಿದ್ದರು ಮಮತಾ.</p><p><strong>ಪಂಚಾಯತ್ ಚುನಾವಣೆಯೇ ದೀದಿಯ ಮೊದಲ ತಪ್ಪು:</strong></p><p>ಅದು 2018ರ ಪಂಚಾಯತ್ ಚುನಾವಣೆಯ ಸಮಯ. ಎಡಪಂಥೀಯರನ್ನು ಮಲಗಿಸಿ ಸಿಎಂ ಗಾದಿಗೇರಿ ಎರಡನೇ ಅವಧಿಯನ್ನು ಅನುಭವಿಸುತ್ತಿದ್ದ ಮಮತಾಗೆ ತಮ್ಮೆದುರು ‘ವಿರೋಧ ಪಕ್ಷ’ ಅಸ್ತಿತ್ವದಲ್ಲಿರುವುದು ಅಸಹನೀಯವೆನಿಸಲಾರಂಭಿಸಿತ್ತು. ಅದನ್ನು ನಿವಾಳಿಸಲು ಅವರು ಅನುಸರಿಸಿದ್ದು ಮತ್ತದೇ ಎಡಪಕ್ಷಗಳ ಹಾದಿಯನ್ನೇ. ತಮ್ಮ ಪಕ್ಷದ ‘ಗೂಂಡಾ’ಗಳನ್ನು ಬಿಟ್ಟು ಬೆದರಿಸಿ ಸರಿ ಸುಮಾರು ಶೇ 34 ಸ್ಥಾನಗಳಲ್ಲಿ ಪ್ರತಿ ಪಕ್ಷದ ಅಭ್ಯರ್ಥಿಗಳು ನಾಮಪತ್ರವನ್ನೇ ಸಲ್ಲಿಸದಂತೆ ತಡೆದರು. ಇದು ಬಂಗಾಳದ ಜನರಲ್ಲಿ ವಿಚಿತ್ರ ಆಕ್ರೋಶ ಮೂಡಿಸಿದ್ದು ಸುಳ್ಳಲ್ಲ.</p><p>ಎಡಪಂಥೀಯರು ಮತ್ತು ಕಾಂಗ್ರೆಸ್ ಅನ್ನು ನಿರ್ನಾಮ ಮಾಡುವ ಭರದಲ್ಲಿ ಮಮತಾ ಬೆಳೆಸಿಕೊಂಡ ಅಪಾಯಕಾರಿ ಮನಃಸ್ಥಿತಿಯೆಂದರೆ, ತನಗೆ ವಿರೋಧಿಗಳೇ ಇರಬಾರದೆಂಬುದು. ಹೀಗಾಗಿ ಬಂಗಾಳದಲ್ಲಿ ಪ್ರಬಲ ವಿರೋಧ ಪಕ್ಷವೇ ಇಲ್ಲದೇ, ನಿರ್ವಾತ ಸೃಷ್ಟಿಯಾಗಿಬಿಟ್ಟಿತು. ಹಾಗೆ ಮಮತಾ ಸೃಷ್ಟಿಸಿದ ನಿರ್ವಾತವೇ ಬಂಗಾಳಕ್ಕೆ ಬಿಜೆಪಿಯನ್ನು ಆಹ್ವಾನಿಸಿದಂತಾಗಿತ್ತು.</p><p>ಮಮತಾ ತೀರಾ ಹಠಮಾರಿ ಎನ್ನುವುದು ಬಂಗಾಳಿಗಳಿಗೆ ಗೊತ್ತಿತ್ತು. ಆದರೆ, ಅದನ್ನು ಛಲವೆಂದು ಭಾವಿಸಿದ್ದ ಮಂದಿಗೆ ದೀದಿಯ ಅಂಥ ಮುಖದ ಹಿಂದೆ ಸರ್ವಾಧಿಕಾರದ ಹಪಾಹಪಿಯಿದೆ ಎಂಬುದು ಗೊತ್ತಾಗಲಾರಂಭಿಸುತ್ತಿದ್ದಂತೆ ಪರ್ಯಾಯಕ್ಕಾಗಿ ಹುಡುಕತೊಡಗಿದರು. ಆದರೆ ಅಷ್ಟರಲ್ಲಾಗಲೇ ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಎಡಪಕ್ಷಗಳು ನಿರ್ಮೂಲನವಾಗಿಬಿಟ್ಟಿದ್ದವು. ಸಹಜವಾಗಿ ಬಿಜೆಪಿಯತ್ತ ಮತದಾರರ ಮುಖಹೊರಳಿತ್ತು.</p><p><strong>ದೋಸ್ತ್ ಆಗಿದ್ದ ಬಂಗಾಳದ ‘ದುರ್ಗೆ‘ ದುಶ್ಮನ್ ಆದ ಬಗೆ..</strong></p><p>ಇಲ್ಲಿ ಗಮನಿಸಬೇಕಾದ ವಿಶೇಷವೆಂದರೆ ಇದೇ ಬಿಜೆಪಿಗೆ ಒಂದು ಕಾಲದಲ್ಲಿ ಮಮತಾರ ಟಿಎಂಸಿ ಅತ್ಯಾಪ್ತ ಮಿತ್ರಪಕ್ಷ. ಕೇವಲ ಹದಿನೈದು ವರ್ಷಗಳ ಹಿಂದಿನವರೆಗೂ ಬಿಜೆಪಿ (ಜನಸಂಘ)ಗೆ ತನ್ನ ಸಂಸ್ಥಾಪಕರ ತವರಲ್ಲಿ ಕಾಲೂರಲೂ ಹಿಡಿ ಜಾಗವಿರಲಿಲ್ಲ. ಅಷ್ಟು ಹೆಮ್ಮರವಾಗಿ ವ್ಯಾಪಿಸಿಕೊಂಡಿತ್ತು ಎಡಪಕ್ಷದ ಸಿದ್ಧಾಂತ. ಇಂಥ ಸನ್ನಿವೇಶದಲ್ಲಿ ಆರ್ಎಸ್ಎಸ್ ಮತ್ತು ಬಿಜೆಪಿ ನಾಯಕರ ಪಾಲಿಗೆ ಮಮತಾ ಎಂದರೆ ಸಾಕ್ಷಾತ್ ‘ಬಂಗಾಳದ ದುರ್ಗಾ’ ಆಗಿ ಕಂಡರು. ತಮ್ಮಿಂದ ಒಕ್ಕಲೆಬ್ಬಿಸಲಾಗದ ಎಡಪಂಥೀಯರ ವಿರುದ್ಧದ ಹೋರಾಟಕ್ಕೆ ಬಿಜೆಪಿ, ಬಳಸಿಕೊಂಡದ್ದು ಮಮತಾರನ್ನೇ. ಹೀಗಾಗಿ ಸುದೀರ್ಘ ಅವಧಿಯವರೆಗೆ ಬಿಜೆಪಿ ನೇತೃತ್ವದ ಎನ್ಡಿಎದ ಭಾಗವಾಗಿತ್ತು ಟಿಎಂಸಿ.</p><p>ವಾಜಪೇಯಿ ಸರ್ಕಾರದಲ್ಲಿ ಮಮತಾ ರೈಲ್ವೆಯಂಥ ಪ್ರಮುಖ ಖಾತೆಯ ಹೊಣೆಯನ್ನೂ ಹೊತ್ತಿದ್ದರು. ಆದರೆ ಒಮ್ಮೆ ಬಂಗಾಳದಲ್ಲಿ ಅಧಿಕಾರಕ್ಕೇರುತ್ತಿದ್ದಂತೆ ಪಕ್ಕಾ ಎಡಪಕ್ಷಗಳ ನಾಯಕರಂತೆಯೇ ಮುಸ್ಲಿಂ ಮತ ಬ್ಯಾಂಕ್ ಭದ್ರಪಡಿಸಿಕೊಳ್ಳಲು ಮುಂದಾದ ದೀದಿ ತೆಗೆದುಕೊಂಡ ನಿರ್ಧಾರಗಳು, ಅದೇ ಸಂಘ ಪರಿವಾರ ಮತ್ತು ಬಿಜೆಪಿಯ ಪಾಲಿಗೆ ‘ಹಿಂದೂ ವಿರೋಧಿ’ಯಾಗಿ ಕಾಣತೊಡಗಿದ್ದು ಸಹಜ.</p><p>ಯಾವಾಗ ಗೋಧ್ರೋತ್ತರ ಗಲಭೆ ಆರಂಭವಾಯಿತೋ, ಮಮತಾ ಎನ್ಡಿಎದಿಂದ ದೂರವಾದರು. ಮಾತ್ರವಲ್ಲ, ನರೇಂದ್ರ ಮೋದಿಯವರು ಪ್ರಧಾನಿಯಾದ ಮೇಲಂತೂ ಅವರ ವಿರೋಧಿ ಪಾಳೆಯದ ಪ್ರಭಲ ನಾಯಕಿಯಾದದ್ದು, ರಾಜಕೀಯದ ಸಹಜ ನಡೆ. ಆದರೆ ಮೋದಿ ವಿರೋಧದ ಭರದಲ್ಲಿ ಬಂಗಾಳದ ಪಾರಂಪರಿಕ ದುರ್ಗಾ ವಿಗ್ರಹ ವಿಸರ್ಜನೆಗೆ ನಿರ್ಬಂಧ ಹೇರಿ ಮೊಹರಂ ಮೆರವಣಿಗೆಗೆ ಅವಕಾಶ ನೀಡಿದ್ದು ಮತ್ತು ಮಸೀದಿಯ ಇಮಾಮ್ಗಳಿಗೆ ಭತ್ಯೆ ಘೋಷಿಸಿದ್ದು ಹಿಂದೂ ಮತದಾರರಲ್ಲಿ ಅಸಮಾಧಾನ ಮೂಡಿಸಿತು. ಮಮತಾ ಅವರ ಈ 'ಅತಿ ಓಲೈಕೆ'ಯನ್ನು ಬಿಜೆಪಿ ತನ್ನ 'ಹಿಂದೂತ್ವ' ರಾಜಕಾರಣಕ್ಕೆ ಬಂಡವಾಳ ಮಾಡಿಕೊಂಡಿತು. ಇದರಿಂದಾಗಿ ಬಂಗಾಳದ ರಾಜಕೀಯ ಸಂಪೂರ್ಣವಾಗಿ ಧ್ರುವೀಕರಣಗೊಂಡಿತು.</p><p><strong>ಆಪ್ತರು, ಬಂಧುಗಳ ಸ್ವೇಚ್ಛೆ–ಭ್ರಷ್ಟಾಚಾರ:</strong></p><p>ಟಿಎಂಸಿಯಲ್ಲಿ ಮಮತಾ ನಂತರ ಯಾರು ಎಂಬ ಪ್ರಶ್ನೆ ಬಂದಾಗ, ಅವರು ತಮ್ಮ ಸೋದರಳಿಯ ಅಭಿಷೇಕ್ ಬ್ಯಾನರ್ಜಿ ಅವರನ್ನು ಮುನ್ನೆಲೆಗೆ ತಂದರು. ಇದು ಸಹಜವಾಗಿ ಮುಕುಲ್ ರಾಯ್, ಸುವೇಂದು ಅಧಿಕಾರಿಯಂತಹ, ಟಿಎಂಸಿಯನ್ನು ಬೇರುಮಟ್ಟದಿಂದ ಕಟ್ಟಿದ್ದ ಹಿರಿಯ ನಾಯಕರಲ್ಲಿ ಅಸಹನೆಯನ್ನು ಮೂಡಿಸಿತು. ಇವರೆಲ್ಲರೂ ಅಭಿಷೇಕ್ ಬೆಳವಣಿಗೆಯಿಂದ ಬೇಸತ್ತು ಪಕ್ಷ ತೊರೆದರು. ಸುವೇಂದು ಅಧಿಕಾರಿ ಅವರು ನಂದಿಗ್ರಾಮದಲ್ಲಿ ಮಮತಾ ಅವರನ್ನೇ ಸೋಲಿಸಿದ್ದು ಮಮತಾ ಅವರ ಅಹಂಕಾರಕ್ಕೆ ಬಿದ್ದ ದೊಡ್ಡ ಏಟು.</p><p>ಇನ್ನು ಭ್ರಷ್ಟಾಚಾರದ ವಿಚಾರ. ಆರಂಭದಲ್ಲಿ ಮಮತಾ ಅವರ 'ಹವಾಯಿ ಚಪ್ಪಲಿ ಮತ್ತು ಅಚ್ಚ ಬಿಳಿಯ ಕಾಟನ್ ಸೀರೆ' ಅವರ ಪ್ರಾಮಾಣಿಕತೆಯ ಸಂಕೇತವಾಗಿತ್ತು. ಮಮತಾರ ಸರಳತೆ ಹಾಗೂ ಸಾಮಾನ್ಯ ಬದುಕು ಇಂದಿಗೂ ಪ್ರಸಂಶೆಗೆ ಪಾತ್ರವಾಗುತ್ತದೆ. ಆದರೆ ಅಂಥ ‘ಸರಳತೆ’ಯ ಹಿಂದೆ ಅವರದೇ ಪಕ್ಷದ ನಾಯಕರ ಹಗರಣಗಳು ಮತ್ತು ದೀದಿಯ ಬಂಧುಗಳ ಅಹಮಿಕೆ, ದೌರ್ಜನ್ಯಗಳಿದ್ದವು. ಇವು ಸದ್ದಿಲ್ಲದೇ ಅವರ ಪತನಕ್ಕೆ ಅಡಿಪಾಯ ಹಾಕಿದ್ದು ಸುಳ್ಳಲ್ಲ. ಶಾರದಾ ಮತ್ತು ರೋಸ್ ವ್ಯಾಲಿ ಹಗರಣದಂಥವು ಬಡ ಜನರ ಉಳಿತಾಯದ ಹಣ ಲೂಟಿಗೆ ಸಾಕ್ಷಿಯಾಯಿತು. ಮಾತ್ರವಲ್ಲ, ಪ್ರಕರಣದಲ್ಲಿ ತಪ್ಪಿತಸ್ಥರನ್ನು ರಕ್ಷಿಸಲು ಮಮತಾ ಅವರು ಧರಣಿ ಕುಳಿತಿದ್ದು ಅವರ ಇಮೇಜ್ಗೆ ಧಕ್ಕೆ ತಂದಿತು.</p><p>ಅದರ ಬೆನ್ನಲ್ಲೇ ಬೆಳಕಿಗೆ ಬಂದದ್ದು ನೇಮಕ ಹಗರಣ (SSC Scam). ಶಿಕ್ಷಕರ ನೇಮಕದಲ್ಲಿ ನಡೆದ ಸಾವಿರಾರು ಕೋಟಿ ಹಗರಣ ಮತ್ತು ಪಾರ್ಥ ಚಟರ್ಜಿ ಅವರ ಮನೆಯಲ್ಲಿ ಪತ್ತೆಯಾದ ನಗದು ರಾಶಿ, ಬಂಗಾಳದ ವಿದ್ಯಾವಂತ ಯುವಜನತೆಯನ್ನು ಮಮತಾ ವಿರುದ್ಧ ತಿರುಗಿಬೀಳುವಂತೆ ಮಾಡಿತು.</p><p><strong>ಜನನಾಯಕಿ ಆಗಬೇಕಾಗಿದ್ದ ಮಮತಾ ಸರ್ವಾಧಿಕಾರಿಯಾದದ್ದು </strong></p><p>ಇವನ್ನು ಹದ್ದುಬಸ್ತಿನಲ್ಲಿಡಲು ಮಮತಾ ಕೈಗೊಂಡಿದ್ದು ದೌರ್ಜನ್ಯದ ಕ್ರಮ. ಎಡಪಕ್ಷಗಳು ನಡೆಸಿಕೊಂಡು ಬಂದಿದ್ದ ಹಿಂಸಾಚಾರದ ಸಂಸ್ಕೃತಿಯನ್ನೇ ಮಮತಾ ಸಹ ಮುಂದುವರಿಸಿದರು. ಬಂಗಾಳದಲ್ಲಿ ರಾಜಕೀಯ ಕೊಲೆಗಳು ಮಾಮೂಲಿಯಾದವು. ಎಡಪಕ್ಷದ ಕಾರ್ಯಕರ್ತರನ್ನು ಕೊಂದಂತೆಯೇ ಬಿಜೆಪಿಯ ಕಾರ್ಯಕರ್ತರ ಮೇಲೆ ದಾಳಿ ನಡೆಸಲಾಯಿತು. ಅದರಲ್ಲೂ ಚುನಾವಣೋತ್ತರ ಹಿಂಸಾಚಾರವು ಮಮತಾ ಅವರಿಗೆ ‘ಸರ್ವಾಧಿಕಾರಿ‘ ಎಂಬ ಪಟ್ಟ ತಂದುಕೊಟ್ಟಿತು. ಕೇಂದ್ರದ ತನಿಖಾ ಸಂಸ್ಥೆಗಳಾದ CBI ಮತ್ತು ED ಪ್ರವೇಶಿಸಲು ಇದು ಸುಲಭ ದಾರಿಯಾಯಿತು.</p><p>ಮಮತಾ ಬ್ಯಾನರ್ಜಿ ಅವರು ಕಮ್ಯುನಿಸ್ಟರ ವಿರುದ್ಧ ಹೋರಾಡಿ ಅಧಿಕಾರಕ್ಕೆ ಬಂದಾಗ ಅವರು ಚಲಾವಣೆಗೆ ತಂದದ್ದು ‘ಪರಿಬೋರ್ತನ್‘ (ಬದಲಾವಣೆ) ಎಂಬ ಪದವನ್ನು. ಆದರೆ ಅವರು ತಂದ ‘ಬದಲಾವಣೆ’ ಕೇವಲ ಮುಖಗಳಿಗೆ ಸೀಮಿತವಾಗಿತ್ತೇ ವಿನಾ ವ್ಯವಸ್ಥೆಗೆ ಅದು ಅನ್ವಯವಾಗಲೇ ಇಲ್ಲ. ಕಮ್ಯುನಿಸ್ಟರು ಬಳಸಿದ್ದ ಅದೇ ದಬ್ಬಾಳಿಕೆ ಮನಃಸ್ಥತಿಯನ್ನೇ ಮಮತಾ ಕೂಡ ಬಳಸಿದರು. ಯಾವ ದಬ್ಬಾಳಿಕೆಯಿಂದ ಜನ ಬೇಸತ್ತಿದ್ದರೋ ಅದೇ ಮುಖವನ್ನು ಮಮತಾ ಸಹ ಪ್ರದರ್ಶಿಸುತ್ತ ಅಧಿಕಾರ ದುರ್ಬಳಕೆಗೆ ಇಳಿದರೋ, ಸಹಜವಾಗಿ ಆಕೆಯ ಪತನದ ದಾರಿ ತೆರೆದುಕೊಳ್ಳತೊಡಗಿತ್ತು.</p><p>ಸಿಪಿಎಂ ಭದ್ರಕೋಟೆಯಾಗಿದ್ದ 'ಕೇಡರ್' (ಕಾರ್ಯಕರ್ತರ ಪಡೆ) ಅಂದು ಭಯದಿಂದ ಅಥವಾ ಅನಿವಾರ್ಯದಿಂದ ಟಿಎಂಸಿ ಸೇರಿತ್ತು. ಆದರೆ ಈಗ ಅದೇ ಶಿಸ್ತಿನ ಪಡೆ ಬಿಜೆಪಿಯತ್ತ ವಾಲಿದ್ದರಲ್ಲಿ ಅಚ್ಚರಿ ಕಾಣುತ್ತಿಲ್ಲ.</p><p>ಈಗ ಅವರು 'ಇಂಡಿಯಾ' ಮೈತ್ರಿಕೂಟದ ಒಳಗೂ ಇಲ್ಲ, ಹೊರಗೂ ಇಲ್ಲದಂತಹ ಸ್ಥಿತಿಯಲ್ಲಿದ್ದಾರೆ. ಏಕೆಂದರೆ ಉಪರಾಷ್ಟ್ರಪತಿ ಚುನಾವಣೆಯಲ್ಲಿ ತಟಸ್ಥರಾಗಿದ್ದು ಮತ್ತು ಆರ್ಎಸ್ಎಸ್ ಬಗ್ಗೆ ಸಾಫ್ಟ್ ಕಾರ್ನರ್ ತೋರಿಸಿದ್ದು ವಿರೋಧ ಪಕ್ಷಗಳ ಒಕ್ಕೂಟದಲ್ಲಿ ಅವರ ಬಗ್ಗೆ ಸಂಶಯ ಮೂಡಿಸಿತು. ಒಂದು ಕಡೆ ಬಿಜೆಪಿಯನ್ನು ವಿರೋಧಿಸುತ್ತಲೇ, ಮತ್ತೊಂದು ಕಡೆ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಅವರಿಗೆ ಅನುಕೂಲ ಮಾಡಿಕೊಡುವ ನಡೆಗಳು ಅವರ ರಾಜಕೀಯ ಅಸ್ಥಿರತೆಯ ಪ್ರತೀಕವಾಗಿ ಕಾಣತೊಡಗಿತ್ತು. ‘ಸ್ವಯಂ ಲಾಭಕ್ಕಾಗಿ, ಅಧಿಕಾರಕ್ಕಾಗಿ ಮಮತಾ ಏನನ್ನು ಬೇಕಾದರೂ ಮಾಡುತ್ತಾರೆ. ಆಕೆಗೊಂದು ಸಿದ್ಧಾಂತವೇ ಇಲ್ಲ’ ಎಂಬ ಅನಿಸಿಕೆ ದಟ್ಟವಾಯಿತು. ಹೀಗಾಗಿ ರಾಷ್ಟ್ರೀಯ ಮಟ್ಟದ ಮಹತ್ವಾಕಾಂಕ್ಷೆಯು ಅವರ ಪ್ರಾದೇಶಿಕ ಹಿಡಿತವನ್ನೂ ಸಡಿಲಗೊಳಿಸಿದೆ. ಇದು ಮಮತಾ ಅವರ 'ರಾಜಕೀಯ ಸ್ವಯಂಕೃತ ಅಪರಾಧ'ವಲ್ಲದೆ ಮತ್ತೇನೂ ಅಲ್ಲ.</p><p><strong>ದೀದಿ ಸ್ಥಿತಿ ಬಿಜೆಪಿಗೆ ಎಚ್ಚರಿಕೆಯ ಗಂಟೆ</strong></p><p>ಒಟ್ಟಾರೆಯಾಗಿ ರಾಜಕೀಯದ ‘ಬೂಮರಾಂಗ್‘ ಪರಿಣಾಮವು ಸ್ಪಷ್ಟವಾಗಿ ಎದ್ದು ಕಾಣುತ್ತಿದೆ. ರಾಜಕೀಯದಲ್ಲಿ ಅತಿಯಾದ ಸೇಡು, ಅಹಂಕಾರ, ದೌರ್ಜನ್ಯ, ಭ್ರಷ್ಟಾಚಾರ ಇಂಥವುಗಳು ಯಾವತ್ತಿಗೂ ಅಪಾಯಕಾರಿ. ಬಿಹಾರ, ಉತ್ತರಪ್ರದೇಶದಂಥ ರಾಜ್ಯಗಳಲ್ಲಿ ಇದು ಸಾಕಷ್ಟು ಬಾರಿ ಸಾಬೀತಾಗಿದೆ. ‘ದೀದಿ’ ಎಂಬ ಜನಪ್ರಿಯ ಸಂಬೋಧನೆ ಗಳಿಸಿದ್ದ ಮಮತಾ ಬ್ಯಾನರ್ಜಿ ಸಹ ಇದೇ ಸಾಲಿಗೆ ಸೇರಿದ್ದು ದುರದೃಷ್ಟಕರ.</p><p>ಕೊನೆಯಲ್ಲಿ ಹೇಳಲೇಬೇಕಾದ್ದು, ಇತಿಹಾಸದ ಪಾಠ ಈಗ ಬಿಜೆಪಿಗೂ ಅನ್ವಯವಾಗುತ್ತಿದೆ. ರಾಜಕೀಯ ಮಹತ್ವಾಕಾಂಕ್ಷೆ ತಪ್ಪಲ್ಲ. ಆದರೆ ಪ್ರತಿಪಕ್ಷಗಳೇ ಇರಬಾರದು ಎಂಬ ಮನಃಸ್ಥಿತಿಗೆ ಎಲ್ಲೋ ಒಂದು ಕಡೆ ಬಿಜೆಪಿಯೂ ಹೊರತಾಗಿಲ್ಲ. ರಚನಾತ್ಮಕ ಪ್ರತಿಪಕ್ಷ ಪ್ರಜಾಪ್ರಭುತ್ವದ ಮೂಲಭೂತ ಅಗತ್ಯ. ಇವತ್ತು ದೇಶದಾದ್ಯಂತ ಬಹುತೇಕ ಎಲ್ಲೆಡೆ ಯಾವುದಾದರೊಂದು ರೀತಿಯಲ್ಲಿ ಅಧಿಕಾರ ಹಿಡಿಯಬೇಕೆಂಬ ಧೋರಣೆಯಲ್ಲಿರುವ ಭಾಜಪಕ್ಕೆ ತಕ್ಷಣಕ್ಕೆ ಬೇಕಿರುವುದು ಅದರ ಎದುರೊಂದು ವಸ್ತುನಿಷ್ಠ ಪ್ರತಿಪಕ್ಷ. ಅದನ್ನು ಮನಗಂಡರೆ ಬಂಗಾಳದಲ್ಲಿ ಕಾಂಗ್ರೆಸ್, ಎಡಪಕ್ಷಗಳು, ಟಿಎಂಸಿ ನಂತರ ಇದೀಗ ಅಧಿಕಾರದ ಪಾಳಿಗೆ ಬಂದಿರುವ ಬಿಜೆಪಿ ಸಹ ಮತ್ತೊಂದು ಸುದೀರ್ಘ ಅಧಿಕಾರ ನಡೆಸಬಹುದು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>'ನಾವು ಏನನ್ನು ಬಿತ್ತುತ್ತೇವೋ ಅದನ್ನೇ ಪಡೆಯುತ್ತೇವೆ' ಎಂಬ ಮಾತು ಇವತ್ತಿನ ಪಶ್ಚಿಮ ಬಂಗಾಳದ ರಾಜಕೀಯಕ್ಕೆ ನೂರಕ್ಕೆ ನೂರು ಅನ್ವರ್ಥವಾಗುತ್ತಿದೆ. ಅದಿಲ್ಲದಿದ್ದರೆ ಒಂದು ಕಾಲದಲ್ಲಿ ಇದೇ ಬಿಜೆಪಿ ಹಾಗೂ ಸಂಘಪರಿವಾರದ ನಾಯಕರುಗಳಿಂದ ‘ಬಂಗಾಳದ ದುರ್ಗೆ’ ಎಂದು ಬಾಯ್ತುಂಬ ಹೊಗಳಿಸಿಕೊಂಡಿದ್ದ ಮಮತಾ ಬ್ಯಾನರ್ಜಿ ಎಂಬ ಮಹಾ ಹಠಮಾರಿ–ಜಗಳಗಂಟಿ ನಾಯಕಿ, ಅದೇ ಬಿಜೆಪಿಯಿಂದ ಇಂಥದ್ದೊಂದು ಹೀನಾಯ ರಾಜಕೀಯ ಪತನ ಕಾಣುವ ಪ್ರಮೇಯವೇ ಇರಲಿಲ್ಲ.</p><p>ಮಮತಾರ ರಾಜಕೀಯ ಜೀವನ ಆರಂಭವಾದದ್ದೇ ಹೋರಾಟದ ‘ಗರ್ವ’ದಿಂದ. ಆದರೆ ಪತನದತ್ತ ಸಾಗಿದ್ದು ಅಧಿಕಾರದ ‘ಅಹಂಕಾರ‘ದಿಂದ. ಹಾಗೆಂದು ದೀದಿಯ ಪತನ ಆಗಿಹೋಯಿತು ಎಂದುಕೊಳ್ಳಬೇಕಿಲ್ಲ. ಆಕೆ ಹಾಗೆ ಸುಮ್ಮನಾಗುವ ಕುಳವೂ ಅಲ್ಲ. ಆದರೆ, ಬಂಗಾಳದಲ್ಲಿ ಚುಕ್ಕಾಣಿ ಹಿಡಿದು ಇದೀಗ ಅದನ್ನು ಕಳಕೊಂಡಲ್ಲಿಯವರೆಗಿನ ಅವಧಿ ಒಂದು ವಿಶಿಷ್ಟ ಅಧ್ಯಾಯದಂತಿದೆ. ಬಂಗಾಳದಲ್ಲಿ ಬೇರೂರಿ ಕುಳಿತಿದ್ದ ಕಮ್ಯುನಿಸ್ಟ್ ಸಾಮ್ರಾಜ್ಯವನ್ನು ಉರುಳಿಸಲು ಬಳಸಿದ ಅವೇ ಆಯುಧಗಳೇ ಇಂದು ಅವರ ವಿರುದ್ಧವೇ ಬಳಕೆಯಾದರೆ ಅದಕ್ಕೆ ಕಾರಣ 'ಸ್ವಯಂಕೃತ ಅಪರಾಧ’.</p><p>ನಿಜಕ್ಕೂ ದೀದಿ ಪತನ ಆರಂಭವಾದದ್ದು ಯಾವಾಗ ಎಂಬುದನ್ನು ವಿಶ್ಲೇಷಿಸಲು ಹೊರಟರೆ, ಅದು ಹೋಗಿ ನಿಲ್ಲುವುದು ಪಂಚಾಯತ್ ಮಟ್ಟಕ್ಕೆ. ಯಾವ ಪ್ರಜಾಪ್ರಭುತ್ವದ ಭದ್ರ ಊರುಗೋಲನ್ನು ಲಾಠಿಯಾಗಿ ಎತ್ತಿ ಹಿಡಿದು ಝಳಪಿಸುತ್ತ ಎಡಪಕ್ಷಗಳ ವಿರುದ್ಧ ರೋಷಾವೇಶ ತೋರಿ ಅಧಿಕಾರಕ್ಕೇರಿದ್ದರೋ, ಅದೇ ಪ್ರಜಾಪ್ರಭುತ್ವದ ಕಗ್ಗೊಲೆಗೆ 'ಪಂಚಾಯತ್’ ಮಟ್ಟದಲ್ಲಿ ನಾಂದಿ ಹಾಡಿದ್ದರು ಮಮತಾ.</p><p><strong>ಪಂಚಾಯತ್ ಚುನಾವಣೆಯೇ ದೀದಿಯ ಮೊದಲ ತಪ್ಪು:</strong></p><p>ಅದು 2018ರ ಪಂಚಾಯತ್ ಚುನಾವಣೆಯ ಸಮಯ. ಎಡಪಂಥೀಯರನ್ನು ಮಲಗಿಸಿ ಸಿಎಂ ಗಾದಿಗೇರಿ ಎರಡನೇ ಅವಧಿಯನ್ನು ಅನುಭವಿಸುತ್ತಿದ್ದ ಮಮತಾಗೆ ತಮ್ಮೆದುರು ‘ವಿರೋಧ ಪಕ್ಷ’ ಅಸ್ತಿತ್ವದಲ್ಲಿರುವುದು ಅಸಹನೀಯವೆನಿಸಲಾರಂಭಿಸಿತ್ತು. ಅದನ್ನು ನಿವಾಳಿಸಲು ಅವರು ಅನುಸರಿಸಿದ್ದು ಮತ್ತದೇ ಎಡಪಕ್ಷಗಳ ಹಾದಿಯನ್ನೇ. ತಮ್ಮ ಪಕ್ಷದ ‘ಗೂಂಡಾ’ಗಳನ್ನು ಬಿಟ್ಟು ಬೆದರಿಸಿ ಸರಿ ಸುಮಾರು ಶೇ 34 ಸ್ಥಾನಗಳಲ್ಲಿ ಪ್ರತಿ ಪಕ್ಷದ ಅಭ್ಯರ್ಥಿಗಳು ನಾಮಪತ್ರವನ್ನೇ ಸಲ್ಲಿಸದಂತೆ ತಡೆದರು. ಇದು ಬಂಗಾಳದ ಜನರಲ್ಲಿ ವಿಚಿತ್ರ ಆಕ್ರೋಶ ಮೂಡಿಸಿದ್ದು ಸುಳ್ಳಲ್ಲ.</p><p>ಎಡಪಂಥೀಯರು ಮತ್ತು ಕಾಂಗ್ರೆಸ್ ಅನ್ನು ನಿರ್ನಾಮ ಮಾಡುವ ಭರದಲ್ಲಿ ಮಮತಾ ಬೆಳೆಸಿಕೊಂಡ ಅಪಾಯಕಾರಿ ಮನಃಸ್ಥಿತಿಯೆಂದರೆ, ತನಗೆ ವಿರೋಧಿಗಳೇ ಇರಬಾರದೆಂಬುದು. ಹೀಗಾಗಿ ಬಂಗಾಳದಲ್ಲಿ ಪ್ರಬಲ ವಿರೋಧ ಪಕ್ಷವೇ ಇಲ್ಲದೇ, ನಿರ್ವಾತ ಸೃಷ್ಟಿಯಾಗಿಬಿಟ್ಟಿತು. ಹಾಗೆ ಮಮತಾ ಸೃಷ್ಟಿಸಿದ ನಿರ್ವಾತವೇ ಬಂಗಾಳಕ್ಕೆ ಬಿಜೆಪಿಯನ್ನು ಆಹ್ವಾನಿಸಿದಂತಾಗಿತ್ತು.</p><p>ಮಮತಾ ತೀರಾ ಹಠಮಾರಿ ಎನ್ನುವುದು ಬಂಗಾಳಿಗಳಿಗೆ ಗೊತ್ತಿತ್ತು. ಆದರೆ, ಅದನ್ನು ಛಲವೆಂದು ಭಾವಿಸಿದ್ದ ಮಂದಿಗೆ ದೀದಿಯ ಅಂಥ ಮುಖದ ಹಿಂದೆ ಸರ್ವಾಧಿಕಾರದ ಹಪಾಹಪಿಯಿದೆ ಎಂಬುದು ಗೊತ್ತಾಗಲಾರಂಭಿಸುತ್ತಿದ್ದಂತೆ ಪರ್ಯಾಯಕ್ಕಾಗಿ ಹುಡುಕತೊಡಗಿದರು. ಆದರೆ ಅಷ್ಟರಲ್ಲಾಗಲೇ ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಎಡಪಕ್ಷಗಳು ನಿರ್ಮೂಲನವಾಗಿಬಿಟ್ಟಿದ್ದವು. ಸಹಜವಾಗಿ ಬಿಜೆಪಿಯತ್ತ ಮತದಾರರ ಮುಖಹೊರಳಿತ್ತು.</p><p><strong>ದೋಸ್ತ್ ಆಗಿದ್ದ ಬಂಗಾಳದ ‘ದುರ್ಗೆ‘ ದುಶ್ಮನ್ ಆದ ಬಗೆ..</strong></p><p>ಇಲ್ಲಿ ಗಮನಿಸಬೇಕಾದ ವಿಶೇಷವೆಂದರೆ ಇದೇ ಬಿಜೆಪಿಗೆ ಒಂದು ಕಾಲದಲ್ಲಿ ಮಮತಾರ ಟಿಎಂಸಿ ಅತ್ಯಾಪ್ತ ಮಿತ್ರಪಕ್ಷ. ಕೇವಲ ಹದಿನೈದು ವರ್ಷಗಳ ಹಿಂದಿನವರೆಗೂ ಬಿಜೆಪಿ (ಜನಸಂಘ)ಗೆ ತನ್ನ ಸಂಸ್ಥಾಪಕರ ತವರಲ್ಲಿ ಕಾಲೂರಲೂ ಹಿಡಿ ಜಾಗವಿರಲಿಲ್ಲ. ಅಷ್ಟು ಹೆಮ್ಮರವಾಗಿ ವ್ಯಾಪಿಸಿಕೊಂಡಿತ್ತು ಎಡಪಕ್ಷದ ಸಿದ್ಧಾಂತ. ಇಂಥ ಸನ್ನಿವೇಶದಲ್ಲಿ ಆರ್ಎಸ್ಎಸ್ ಮತ್ತು ಬಿಜೆಪಿ ನಾಯಕರ ಪಾಲಿಗೆ ಮಮತಾ ಎಂದರೆ ಸಾಕ್ಷಾತ್ ‘ಬಂಗಾಳದ ದುರ್ಗಾ’ ಆಗಿ ಕಂಡರು. ತಮ್ಮಿಂದ ಒಕ್ಕಲೆಬ್ಬಿಸಲಾಗದ ಎಡಪಂಥೀಯರ ವಿರುದ್ಧದ ಹೋರಾಟಕ್ಕೆ ಬಿಜೆಪಿ, ಬಳಸಿಕೊಂಡದ್ದು ಮಮತಾರನ್ನೇ. ಹೀಗಾಗಿ ಸುದೀರ್ಘ ಅವಧಿಯವರೆಗೆ ಬಿಜೆಪಿ ನೇತೃತ್ವದ ಎನ್ಡಿಎದ ಭಾಗವಾಗಿತ್ತು ಟಿಎಂಸಿ.</p><p>ವಾಜಪೇಯಿ ಸರ್ಕಾರದಲ್ಲಿ ಮಮತಾ ರೈಲ್ವೆಯಂಥ ಪ್ರಮುಖ ಖಾತೆಯ ಹೊಣೆಯನ್ನೂ ಹೊತ್ತಿದ್ದರು. ಆದರೆ ಒಮ್ಮೆ ಬಂಗಾಳದಲ್ಲಿ ಅಧಿಕಾರಕ್ಕೇರುತ್ತಿದ್ದಂತೆ ಪಕ್ಕಾ ಎಡಪಕ್ಷಗಳ ನಾಯಕರಂತೆಯೇ ಮುಸ್ಲಿಂ ಮತ ಬ್ಯಾಂಕ್ ಭದ್ರಪಡಿಸಿಕೊಳ್ಳಲು ಮುಂದಾದ ದೀದಿ ತೆಗೆದುಕೊಂಡ ನಿರ್ಧಾರಗಳು, ಅದೇ ಸಂಘ ಪರಿವಾರ ಮತ್ತು ಬಿಜೆಪಿಯ ಪಾಲಿಗೆ ‘ಹಿಂದೂ ವಿರೋಧಿ’ಯಾಗಿ ಕಾಣತೊಡಗಿದ್ದು ಸಹಜ.</p><p>ಯಾವಾಗ ಗೋಧ್ರೋತ್ತರ ಗಲಭೆ ಆರಂಭವಾಯಿತೋ, ಮಮತಾ ಎನ್ಡಿಎದಿಂದ ದೂರವಾದರು. ಮಾತ್ರವಲ್ಲ, ನರೇಂದ್ರ ಮೋದಿಯವರು ಪ್ರಧಾನಿಯಾದ ಮೇಲಂತೂ ಅವರ ವಿರೋಧಿ ಪಾಳೆಯದ ಪ್ರಭಲ ನಾಯಕಿಯಾದದ್ದು, ರಾಜಕೀಯದ ಸಹಜ ನಡೆ. ಆದರೆ ಮೋದಿ ವಿರೋಧದ ಭರದಲ್ಲಿ ಬಂಗಾಳದ ಪಾರಂಪರಿಕ ದುರ್ಗಾ ವಿಗ್ರಹ ವಿಸರ್ಜನೆಗೆ ನಿರ್ಬಂಧ ಹೇರಿ ಮೊಹರಂ ಮೆರವಣಿಗೆಗೆ ಅವಕಾಶ ನೀಡಿದ್ದು ಮತ್ತು ಮಸೀದಿಯ ಇಮಾಮ್ಗಳಿಗೆ ಭತ್ಯೆ ಘೋಷಿಸಿದ್ದು ಹಿಂದೂ ಮತದಾರರಲ್ಲಿ ಅಸಮಾಧಾನ ಮೂಡಿಸಿತು. ಮಮತಾ ಅವರ ಈ 'ಅತಿ ಓಲೈಕೆ'ಯನ್ನು ಬಿಜೆಪಿ ತನ್ನ 'ಹಿಂದೂತ್ವ' ರಾಜಕಾರಣಕ್ಕೆ ಬಂಡವಾಳ ಮಾಡಿಕೊಂಡಿತು. ಇದರಿಂದಾಗಿ ಬಂಗಾಳದ ರಾಜಕೀಯ ಸಂಪೂರ್ಣವಾಗಿ ಧ್ರುವೀಕರಣಗೊಂಡಿತು.</p><p><strong>ಆಪ್ತರು, ಬಂಧುಗಳ ಸ್ವೇಚ್ಛೆ–ಭ್ರಷ್ಟಾಚಾರ:</strong></p><p>ಟಿಎಂಸಿಯಲ್ಲಿ ಮಮತಾ ನಂತರ ಯಾರು ಎಂಬ ಪ್ರಶ್ನೆ ಬಂದಾಗ, ಅವರು ತಮ್ಮ ಸೋದರಳಿಯ ಅಭಿಷೇಕ್ ಬ್ಯಾನರ್ಜಿ ಅವರನ್ನು ಮುನ್ನೆಲೆಗೆ ತಂದರು. ಇದು ಸಹಜವಾಗಿ ಮುಕುಲ್ ರಾಯ್, ಸುವೇಂದು ಅಧಿಕಾರಿಯಂತಹ, ಟಿಎಂಸಿಯನ್ನು ಬೇರುಮಟ್ಟದಿಂದ ಕಟ್ಟಿದ್ದ ಹಿರಿಯ ನಾಯಕರಲ್ಲಿ ಅಸಹನೆಯನ್ನು ಮೂಡಿಸಿತು. ಇವರೆಲ್ಲರೂ ಅಭಿಷೇಕ್ ಬೆಳವಣಿಗೆಯಿಂದ ಬೇಸತ್ತು ಪಕ್ಷ ತೊರೆದರು. ಸುವೇಂದು ಅಧಿಕಾರಿ ಅವರು ನಂದಿಗ್ರಾಮದಲ್ಲಿ ಮಮತಾ ಅವರನ್ನೇ ಸೋಲಿಸಿದ್ದು ಮಮತಾ ಅವರ ಅಹಂಕಾರಕ್ಕೆ ಬಿದ್ದ ದೊಡ್ಡ ಏಟು.</p><p>ಇನ್ನು ಭ್ರಷ್ಟಾಚಾರದ ವಿಚಾರ. ಆರಂಭದಲ್ಲಿ ಮಮತಾ ಅವರ 'ಹವಾಯಿ ಚಪ್ಪಲಿ ಮತ್ತು ಅಚ್ಚ ಬಿಳಿಯ ಕಾಟನ್ ಸೀರೆ' ಅವರ ಪ್ರಾಮಾಣಿಕತೆಯ ಸಂಕೇತವಾಗಿತ್ತು. ಮಮತಾರ ಸರಳತೆ ಹಾಗೂ ಸಾಮಾನ್ಯ ಬದುಕು ಇಂದಿಗೂ ಪ್ರಸಂಶೆಗೆ ಪಾತ್ರವಾಗುತ್ತದೆ. ಆದರೆ ಅಂಥ ‘ಸರಳತೆ’ಯ ಹಿಂದೆ ಅವರದೇ ಪಕ್ಷದ ನಾಯಕರ ಹಗರಣಗಳು ಮತ್ತು ದೀದಿಯ ಬಂಧುಗಳ ಅಹಮಿಕೆ, ದೌರ್ಜನ್ಯಗಳಿದ್ದವು. ಇವು ಸದ್ದಿಲ್ಲದೇ ಅವರ ಪತನಕ್ಕೆ ಅಡಿಪಾಯ ಹಾಕಿದ್ದು ಸುಳ್ಳಲ್ಲ. ಶಾರದಾ ಮತ್ತು ರೋಸ್ ವ್ಯಾಲಿ ಹಗರಣದಂಥವು ಬಡ ಜನರ ಉಳಿತಾಯದ ಹಣ ಲೂಟಿಗೆ ಸಾಕ್ಷಿಯಾಯಿತು. ಮಾತ್ರವಲ್ಲ, ಪ್ರಕರಣದಲ್ಲಿ ತಪ್ಪಿತಸ್ಥರನ್ನು ರಕ್ಷಿಸಲು ಮಮತಾ ಅವರು ಧರಣಿ ಕುಳಿತಿದ್ದು ಅವರ ಇಮೇಜ್ಗೆ ಧಕ್ಕೆ ತಂದಿತು.</p><p>ಅದರ ಬೆನ್ನಲ್ಲೇ ಬೆಳಕಿಗೆ ಬಂದದ್ದು ನೇಮಕ ಹಗರಣ (SSC Scam). ಶಿಕ್ಷಕರ ನೇಮಕದಲ್ಲಿ ನಡೆದ ಸಾವಿರಾರು ಕೋಟಿ ಹಗರಣ ಮತ್ತು ಪಾರ್ಥ ಚಟರ್ಜಿ ಅವರ ಮನೆಯಲ್ಲಿ ಪತ್ತೆಯಾದ ನಗದು ರಾಶಿ, ಬಂಗಾಳದ ವಿದ್ಯಾವಂತ ಯುವಜನತೆಯನ್ನು ಮಮತಾ ವಿರುದ್ಧ ತಿರುಗಿಬೀಳುವಂತೆ ಮಾಡಿತು.</p><p><strong>ಜನನಾಯಕಿ ಆಗಬೇಕಾಗಿದ್ದ ಮಮತಾ ಸರ್ವಾಧಿಕಾರಿಯಾದದ್ದು </strong></p><p>ಇವನ್ನು ಹದ್ದುಬಸ್ತಿನಲ್ಲಿಡಲು ಮಮತಾ ಕೈಗೊಂಡಿದ್ದು ದೌರ್ಜನ್ಯದ ಕ್ರಮ. ಎಡಪಕ್ಷಗಳು ನಡೆಸಿಕೊಂಡು ಬಂದಿದ್ದ ಹಿಂಸಾಚಾರದ ಸಂಸ್ಕೃತಿಯನ್ನೇ ಮಮತಾ ಸಹ ಮುಂದುವರಿಸಿದರು. ಬಂಗಾಳದಲ್ಲಿ ರಾಜಕೀಯ ಕೊಲೆಗಳು ಮಾಮೂಲಿಯಾದವು. ಎಡಪಕ್ಷದ ಕಾರ್ಯಕರ್ತರನ್ನು ಕೊಂದಂತೆಯೇ ಬಿಜೆಪಿಯ ಕಾರ್ಯಕರ್ತರ ಮೇಲೆ ದಾಳಿ ನಡೆಸಲಾಯಿತು. ಅದರಲ್ಲೂ ಚುನಾವಣೋತ್ತರ ಹಿಂಸಾಚಾರವು ಮಮತಾ ಅವರಿಗೆ ‘ಸರ್ವಾಧಿಕಾರಿ‘ ಎಂಬ ಪಟ್ಟ ತಂದುಕೊಟ್ಟಿತು. ಕೇಂದ್ರದ ತನಿಖಾ ಸಂಸ್ಥೆಗಳಾದ CBI ಮತ್ತು ED ಪ್ರವೇಶಿಸಲು ಇದು ಸುಲಭ ದಾರಿಯಾಯಿತು.</p><p>ಮಮತಾ ಬ್ಯಾನರ್ಜಿ ಅವರು ಕಮ್ಯುನಿಸ್ಟರ ವಿರುದ್ಧ ಹೋರಾಡಿ ಅಧಿಕಾರಕ್ಕೆ ಬಂದಾಗ ಅವರು ಚಲಾವಣೆಗೆ ತಂದದ್ದು ‘ಪರಿಬೋರ್ತನ್‘ (ಬದಲಾವಣೆ) ಎಂಬ ಪದವನ್ನು. ಆದರೆ ಅವರು ತಂದ ‘ಬದಲಾವಣೆ’ ಕೇವಲ ಮುಖಗಳಿಗೆ ಸೀಮಿತವಾಗಿತ್ತೇ ವಿನಾ ವ್ಯವಸ್ಥೆಗೆ ಅದು ಅನ್ವಯವಾಗಲೇ ಇಲ್ಲ. ಕಮ್ಯುನಿಸ್ಟರು ಬಳಸಿದ್ದ ಅದೇ ದಬ್ಬಾಳಿಕೆ ಮನಃಸ್ಥತಿಯನ್ನೇ ಮಮತಾ ಕೂಡ ಬಳಸಿದರು. ಯಾವ ದಬ್ಬಾಳಿಕೆಯಿಂದ ಜನ ಬೇಸತ್ತಿದ್ದರೋ ಅದೇ ಮುಖವನ್ನು ಮಮತಾ ಸಹ ಪ್ರದರ್ಶಿಸುತ್ತ ಅಧಿಕಾರ ದುರ್ಬಳಕೆಗೆ ಇಳಿದರೋ, ಸಹಜವಾಗಿ ಆಕೆಯ ಪತನದ ದಾರಿ ತೆರೆದುಕೊಳ್ಳತೊಡಗಿತ್ತು.</p><p>ಸಿಪಿಎಂ ಭದ್ರಕೋಟೆಯಾಗಿದ್ದ 'ಕೇಡರ್' (ಕಾರ್ಯಕರ್ತರ ಪಡೆ) ಅಂದು ಭಯದಿಂದ ಅಥವಾ ಅನಿವಾರ್ಯದಿಂದ ಟಿಎಂಸಿ ಸೇರಿತ್ತು. ಆದರೆ ಈಗ ಅದೇ ಶಿಸ್ತಿನ ಪಡೆ ಬಿಜೆಪಿಯತ್ತ ವಾಲಿದ್ದರಲ್ಲಿ ಅಚ್ಚರಿ ಕಾಣುತ್ತಿಲ್ಲ.</p><p>ಈಗ ಅವರು 'ಇಂಡಿಯಾ' ಮೈತ್ರಿಕೂಟದ ಒಳಗೂ ಇಲ್ಲ, ಹೊರಗೂ ಇಲ್ಲದಂತಹ ಸ್ಥಿತಿಯಲ್ಲಿದ್ದಾರೆ. ಏಕೆಂದರೆ ಉಪರಾಷ್ಟ್ರಪತಿ ಚುನಾವಣೆಯಲ್ಲಿ ತಟಸ್ಥರಾಗಿದ್ದು ಮತ್ತು ಆರ್ಎಸ್ಎಸ್ ಬಗ್ಗೆ ಸಾಫ್ಟ್ ಕಾರ್ನರ್ ತೋರಿಸಿದ್ದು ವಿರೋಧ ಪಕ್ಷಗಳ ಒಕ್ಕೂಟದಲ್ಲಿ ಅವರ ಬಗ್ಗೆ ಸಂಶಯ ಮೂಡಿಸಿತು. ಒಂದು ಕಡೆ ಬಿಜೆಪಿಯನ್ನು ವಿರೋಧಿಸುತ್ತಲೇ, ಮತ್ತೊಂದು ಕಡೆ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಅವರಿಗೆ ಅನುಕೂಲ ಮಾಡಿಕೊಡುವ ನಡೆಗಳು ಅವರ ರಾಜಕೀಯ ಅಸ್ಥಿರತೆಯ ಪ್ರತೀಕವಾಗಿ ಕಾಣತೊಡಗಿತ್ತು. ‘ಸ್ವಯಂ ಲಾಭಕ್ಕಾಗಿ, ಅಧಿಕಾರಕ್ಕಾಗಿ ಮಮತಾ ಏನನ್ನು ಬೇಕಾದರೂ ಮಾಡುತ್ತಾರೆ. ಆಕೆಗೊಂದು ಸಿದ್ಧಾಂತವೇ ಇಲ್ಲ’ ಎಂಬ ಅನಿಸಿಕೆ ದಟ್ಟವಾಯಿತು. ಹೀಗಾಗಿ ರಾಷ್ಟ್ರೀಯ ಮಟ್ಟದ ಮಹತ್ವಾಕಾಂಕ್ಷೆಯು ಅವರ ಪ್ರಾದೇಶಿಕ ಹಿಡಿತವನ್ನೂ ಸಡಿಲಗೊಳಿಸಿದೆ. ಇದು ಮಮತಾ ಅವರ 'ರಾಜಕೀಯ ಸ್ವಯಂಕೃತ ಅಪರಾಧ'ವಲ್ಲದೆ ಮತ್ತೇನೂ ಅಲ್ಲ.</p><p><strong>ದೀದಿ ಸ್ಥಿತಿ ಬಿಜೆಪಿಗೆ ಎಚ್ಚರಿಕೆಯ ಗಂಟೆ</strong></p><p>ಒಟ್ಟಾರೆಯಾಗಿ ರಾಜಕೀಯದ ‘ಬೂಮರಾಂಗ್‘ ಪರಿಣಾಮವು ಸ್ಪಷ್ಟವಾಗಿ ಎದ್ದು ಕಾಣುತ್ತಿದೆ. ರಾಜಕೀಯದಲ್ಲಿ ಅತಿಯಾದ ಸೇಡು, ಅಹಂಕಾರ, ದೌರ್ಜನ್ಯ, ಭ್ರಷ್ಟಾಚಾರ ಇಂಥವುಗಳು ಯಾವತ್ತಿಗೂ ಅಪಾಯಕಾರಿ. ಬಿಹಾರ, ಉತ್ತರಪ್ರದೇಶದಂಥ ರಾಜ್ಯಗಳಲ್ಲಿ ಇದು ಸಾಕಷ್ಟು ಬಾರಿ ಸಾಬೀತಾಗಿದೆ. ‘ದೀದಿ’ ಎಂಬ ಜನಪ್ರಿಯ ಸಂಬೋಧನೆ ಗಳಿಸಿದ್ದ ಮಮತಾ ಬ್ಯಾನರ್ಜಿ ಸಹ ಇದೇ ಸಾಲಿಗೆ ಸೇರಿದ್ದು ದುರದೃಷ್ಟಕರ.</p><p>ಕೊನೆಯಲ್ಲಿ ಹೇಳಲೇಬೇಕಾದ್ದು, ಇತಿಹಾಸದ ಪಾಠ ಈಗ ಬಿಜೆಪಿಗೂ ಅನ್ವಯವಾಗುತ್ತಿದೆ. ರಾಜಕೀಯ ಮಹತ್ವಾಕಾಂಕ್ಷೆ ತಪ್ಪಲ್ಲ. ಆದರೆ ಪ್ರತಿಪಕ್ಷಗಳೇ ಇರಬಾರದು ಎಂಬ ಮನಃಸ್ಥಿತಿಗೆ ಎಲ್ಲೋ ಒಂದು ಕಡೆ ಬಿಜೆಪಿಯೂ ಹೊರತಾಗಿಲ್ಲ. ರಚನಾತ್ಮಕ ಪ್ರತಿಪಕ್ಷ ಪ್ರಜಾಪ್ರಭುತ್ವದ ಮೂಲಭೂತ ಅಗತ್ಯ. ಇವತ್ತು ದೇಶದಾದ್ಯಂತ ಬಹುತೇಕ ಎಲ್ಲೆಡೆ ಯಾವುದಾದರೊಂದು ರೀತಿಯಲ್ಲಿ ಅಧಿಕಾರ ಹಿಡಿಯಬೇಕೆಂಬ ಧೋರಣೆಯಲ್ಲಿರುವ ಭಾಜಪಕ್ಕೆ ತಕ್ಷಣಕ್ಕೆ ಬೇಕಿರುವುದು ಅದರ ಎದುರೊಂದು ವಸ್ತುನಿಷ್ಠ ಪ್ರತಿಪಕ್ಷ. ಅದನ್ನು ಮನಗಂಡರೆ ಬಂಗಾಳದಲ್ಲಿ ಕಾಂಗ್ರೆಸ್, ಎಡಪಕ್ಷಗಳು, ಟಿಎಂಸಿ ನಂತರ ಇದೀಗ ಅಧಿಕಾರದ ಪಾಳಿಗೆ ಬಂದಿರುವ ಬಿಜೆಪಿ ಸಹ ಮತ್ತೊಂದು ಸುದೀರ್ಘ ಅಧಿಕಾರ ನಡೆಸಬಹುದು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>