ಶಿರಸಿ: ವಿಪಕ್ಷಗಳ ಪ್ರಮುಖರು ಯಾರ್ಯಾರು ಬ್ರಷ್ಟರಿದ್ದಾರೆ ಅವರ ಹೆಸರನ್ನು ಹೇಳಲಿ. ಇಡಿ, ಐಡಿ ನಿಮ್ಮ ಬಳಿ ಬರುವ ಬದಲು ಅವರ ಬಳಿ ಹೋಗುತ್ತದೆ ಎಂದು ಪಶ್ಚಿಮ ಬಂಗಾಲ ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ಸುಖುಂ ಮುಜುಂದಾರ್ ಹೇಳಿದರು.
ನಗರದ ಶಾಸಕರ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿ ಆಯೋಜಿಸಿ ಮಾತನಾಡಿದ ಅವರು, ಬಿಜೆಪಿ ಇಡಿ, ಐಡಿಯನ್ನು ದುರ್ಬಳಕೆ ಮಾಡುತ್ತಿದೆ ಎಂದು ವಿಪಕ್ಷಗಳು ಆರೋಪಿಸುತ್ತಿರುವುದರಲ್ಲಿ ಹುರುಳಿಲ್ಲ. ಒಂದೆಡೆ ರಾಹುಲ್ ಗಾಂಧಿ ಕೇರಳಕ್ಕೆ ಭೇಟಿ ನೀಡಿದಾಗ ಅಲ್ಲಿನ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರನ್ನು ಇಡಿ, ಐಡಿ ಮುಟ್ಟುತ್ತಿಲ್ಲ ಎನ್ನುತ್ತಾರೆ. ಪಶ್ಚಿಮ ಬಂಗಾಳದಲ್ಲಿ ಇಡಿ ದಾಳಿಯಾದರೆ ಕಾಂಗ್ರೆಸ್ ನಾಯಕರು ದಾಳಿ ಸಮರ್ಥಿಸುತ್ತಾರೆ. ವಿಪಕ್ಷಗಳ ನಾಯಕರಲ್ಲಿ ಸ್ಪಷ್ಟತೆಯಿಲ್ಲ. ಸರಿಯಾದ ನಿಲುವಿಲ್ಲ. ಹಾಗಾಗಿ ಯಾರ್ಯಾರು ಬ್ರಷ್ಟರಿದ್ದಾರೆ ಅವರ ಹೆಸರನ್ನು ಆಯಾ ಪಕ್ಷಗಳ ನಾಯಕರೇ ಬಹಿರಂಗಪಡಿಸಲಿ. ಆಗ ಇಡಿ, ಐಡಿಗಳು ಬ್ರಷ್ಟರ ಬಳಿಗೆ ತೆರಳುತ್ತವೆ ಎಂದರು.
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 300 ಸ್ಥಾನಕ್ಕಿಂತ ಹೆಚ್ಚು ಸ್ಥಾನಗಳಿಸಲಿದೆ ಎಂದ ಅವರು, ಕಳೆದ ಲೋಕಸಭೆ ಚುನಾವಣೆ ವೇಳೆ ಜನರಿಂದ ತಿರಸ್ಕೃತ, ಬ್ರಷ್ಟಾಚಾರದಲ್ಲಿ ತೊಡಗಿರುವವರೆಲ್ಲ ಸೇರಿ ಮಮತಾ ಬ್ಯಾನರ್ಜಿ ನೇತೃತ್ವದಲ್ಲಿ ಸಭೆ ನಡೆಸಿದ್ದಾರೆ. ಅದರಿಂದ ಬಿಜೆಪಿ ಮೇಲೆ ಪರಿಣಾಮ ಆಗದು. ಪಶ್ಚಿಮ ಬಂಗಾಳದಲ್ಲಿ ಕೂಡ ಹೆಚ್ಚಿನ ಸ್ಥಾನ ಪಡೆಯಲಾಗುವುದು ಎಂದರು.
ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ಸಿದ್ದರಾಮಯ್ಯ ಅವರು ಪ್ರಚಾರಕ್ಕಾಗಿ ಏನು ಬೇಕಾದರೂ ಹೇಳುತ್ತಾರೆ. ಒಡೆದು ಆಳುವ ಮನಸ್ಥಿತಿ ಅವರದ್ದಾಗಿದೆ. ಜಾತಿ, ಭಾಷೆ, ಪ್ರಾದೇಶಿಕತೆಯಲ್ಲಿ ಒಡಕು ತಂದು ಕಾಂಗ್ರೆಸ್ ಮನಸ್ಥಿತಿ ಹೊರಹಾಕಿದ್ದಾರೆ ಎಂದರು. ಪಕ್ಷದ ಪದಾಧಿಕಾರಿಗಳಾದ ಗಣಪತಿ ನಾಯ್ಕ, ನಂದನ ಸಾಗರ್, ಉಷಾ ಹೆಗಡೆ ಇದ್ದರು