ಹೊಸಕೋಟೆ: ಜಿದ್ದಾಜಿದ್ದಿನ ರಾಜಕೀಯಕ್ಕೆ ಹೆಸರು ಮಾಡಿದ್ದ ಕ್ಷೇತ್ರದಲ್ಲಿ ಶೇ90.80 ಮತದಾನ ದಾಖಲಾಗಿದೆ. ಕ್ಷೇತ್ರದ ಇಬ್ಬರು ಅಭ್ಯರ್ಥಿಗಳ ಭವಿಷ್ಯ ಮತಪೆಟ್ಟಿಗೆಗಳಲ್ಲಿ ಬಂಧಿಯಾಗಿದೆ. ಈ ಮತಪೆಟ್ಟಿಗಳ ಮೇಲೆ ಬೆಟ್ಟಿಂಗ್ ಜೋರಾಗಿಯೇ ನಡೆದಿದೆ.
ಕ್ಷೇತ್ರದ ಜನರು ತಮ್ಮ ಅಭ್ಯರ್ಥಿಗಳ ಸೋಲು–ಗೆಲುವಿನ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ. ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳು ಚುನಾವಣೆ ಮುಗಿದ ನಂತರ ವಿಶ್ರಾಂತಿಗೆ ಮೊರೆ ಹೋಗಿದ್ದಾರೆ.
ಹಣ, ಭೂಮಿ, ಜಾನುವಾರ ಪಣಕ್ಕೆ: ಕ್ಷೇತ್ರದಾದ್ಯಂತ ಬೆಟ್ಟಿಂಗ್ ಜೋರಾಗಿಯೇ ನಡೆದಿದೆ. ಕಾಂಗ್ರೆಸ್, ಬಿಜೆಪಿ ಎರಡೂ ಪಕ್ಷಗಳ ಕಾರ್ಯಕರ್ತರು ತಮ್ಮದೇ ಗೆಲುವು ಎಂಬಂತೆ ಜಿದ್ದಿಗೆ ಇಳಿದಿದ್ದಾರೆ. ಹಣ, ಜಮೀನು, ಜಾನುವಾರು ಸೇರಿದಂತೆ ವಿವಿಧ ಬೆಲೆ ಬಾಳುವ ವಸ್ತುಗಳನ್ನು ಪಣಕ್ಕಿಡಲು ಸಿದ್ಧರಾಗಿದ್ದಾರೆ.
ಗೆಲುವಿನ ಲೆಕ್ಕಾಚಾರ: ಹೊಸಕೋಟೆ ರಾಜಕಾರಣ ಪಕ್ಷಕ್ಕಿಂತ ವ್ಯಕ್ತಿಗಳ ಮೇಲೆ ನಡೆಯುವಂತದ್ದು. ಇಬ್ಬರೂ ಅಭ್ಯರ್ಥಿಗಳು ಪರಸ್ಪರ ಪಕ್ಷ ಬದಲಿಸಿ ಚುನಾವಣೆ ಎದುರಿಸಿದ್ದಾರೆ.
ಕಾರ್ಯಕರ್ತರ ದೇಗುಲ ದರ್ಶನ: ಚುನಾವಣೆ ಮತ್ತು ಫಲಿತಾಂಶದ ಮಧ್ಯೆ ಎರಡು ದಿನ ಬಿಡುವು ಸಿಕ್ಕಿದ್ದು, ಅಭ್ಯರ್ಥಿಗಳ ಗೆಲುವಿಗಾಗಿ ಕಾರ್ಯಕರ್ತರು ದೇಗುಲ ದರ್ಶನ ಮಾಡುತ್ತಿದ್ದಾರೆ. ಫಲಿತಾಂಶದ ವೇಳೆಗೆ ವಾಪಸ್ ಬರಲು ಯೋಗ್ಯವಾದ ಧಾರ್ಮಿಕ ಸ್ಥಳಗಳಿಗೆ ತೆರಳಿದ್ದಾರೆ. ತಿರುಪತಿ, ಧರ್ಮಸ್ಥಳ, ಕದಿರಿ ಮತ್ತಿತರೆ ಸ್ಥಳಗಳಿಗೆ ಕಾರ್ಯಕರ್ತರು ತೆರಳಿದ್ದಾರೆ.