1921ರಲ್ಲಿ ಕೇರಳದ ಮಲಬಾರ್ ಪ್ರಾಂತ್ಯದಲ್ಲಿ ಬ್ರಿಟಿಷರ ವಿರುದ್ಧ ನಡೆದ ದಂಗೆಯ ನೇತೃತ್ವವಹಿಸಿದ್ದು, ವಾರಿಯನ್ ಕುನ್ನತ್ ಕುಂಜಹಮ್ಮದ್ ಹಾಜಿ. ಮುಸ್ಲಿಂ ಕುಟುಂಬದಲ್ಲಿ ಜನಿಸಿದ ಅವರು, ಆ ಭಾಗದ ಶ್ರೇಷ್ಠ ನಾಯಕರಾಗಿದ್ದರು. ಈಗ ಬೆಳ್ಳಿತೆರೆಯ ಮೇಲೆ ಅವರ ಹೋರಾಟದ ಬದುಕು ಮೂಡಿಬರಲಿದೆ.
ನಟ ಪೃಥ್ವಿರಾಜ್ ಸುಕುಮಾರನ್ ಮತ್ತು ನಿರ್ದೇಶಕ ಆಶಿಕ್ ಅಬು ಕಾಂಬಿನೇಷನ್ನಡಿ ನಿರ್ಮಾಣವಾಗಲಿರುವ ಈ ಚಿತ್ರಕ್ಕೆ ‘ವಾರಿಯಂಕುನ್ನನ್’ ಎಂಬ ಟೈಟಲ್ ಇಡಲಾಗಿದೆ. ಈ ಬಗ್ಗೆ ಪೃಥ್ವಿರಾಜ್ ಅಧಿಕೃತವಾಗಿ ಘೋಷಿಸಿದ್ದಾರೆ. ಅಂದಹಾಗೆ ಅವರೇ ವಾರಿಯನ್ ಕುನ್ನತ್ ಕುಂಜಹಮ್ಮದ್ ಹಾಜಿ ಪಾತ್ರಕ್ಕೆ ಬಣ್ಣ ಹಚ್ಚಲಿದ್ದಾರೆ. ಈ ಸಿನಿಮಾ ಮುಂದಿನ ವರ್ಷ ಸೆಟ್ಟೇರಲಿದೆ.
‘ವಿಶ್ವದ ಹಲವೆಡೆ ಬ್ರಿಟಿಷರು ತನ್ನ ಸಾಮ್ರಾಜ್ಯ ಸ್ಥಾಪಿಸಿದರು. ಅವರ ವಿರುದ್ಧ ಕೇರಳದಲ್ಲಿ ವಾರಿಯನ್ ಕುನ್ನತ್ ಕುಂಜಹಮ್ಮದ್ ಹಾಜಿ ಸೆಣಸಾಟ ನಡೆಸಿದರು. ಸಂಗೀತ ಮತ್ತು ಸಾಹಿತ್ಯದ ಮೂಲಕ ಬ್ರಿಟಿಷರ ವಿರುದ್ಧ ಹೋರಾಟ ನಡೆಸಲು ಜನರನ್ನು ಸಂಘಟಿಸುತ್ತಿದ್ದರು. ಅವರ ಹೋರಾಟ ಇತಿಹಾಸದಲ್ಲಿ ಹುದುಗಿ ಹೋಗಿದೆ. ಆದರೆ, ಅವರ ಸಾಹಸದ ಕಥೆ ಇನ್ನೂ ಜೀವಂತವಾಗಿದೆ. ಮುಂದಿನ ವರ್ಷ ಅವರ ನೂರನೇ ಸ್ಮರಣೋತ್ಸವ. ಅಪ್ಪಟ ಸ್ವಾತಂತ್ರ್ಯಪ್ರೇಮಿಯ ಜೀವನಗಾಥೆಯನ್ನು ತೆರೆಯ ಮೇಲೆ ತರಲು ಉತ್ಸುಕರಾಗಿದ್ದೇವೆ’ ಎಂದು ಪೃಥ್ವಿರಾಜ್ ಫೇಸ್ಬುಕ್ನಲ್ಲಿ ಬರೆದುಕೊಂಡಿದ್ದಾರೆ.