ಬೆಂಗಳೂರು: ಅತ್ಯಾಚಾರ, ಹಲ್ಲೆ ಮತ್ತು ವಂಚನೆ ಆರೋಪ ಸಂಬಂಧನಟ ಶೇಷಗಿರಿ ಬಸವರಾಜ್ ಅವರನ್ನು ಮೈಸೂರಿನಲ್ಲಿ ಬಂಧಿಸಿರುವ ಸುಬ್ರಹ್ಮಣ್ಯನಗರ ಠಾಣೆ ಪೊಲೀಸರು ನಗರಕ್ಕೆ ಕರೆತಂದು ವಿಚಾರಣೆ ನಡೆಸುತ್ತಿದ್ದಾರೆ.
'ಬ್ಯಾಂಕ್ನಲ್ಲಿ ಕೆಲಸ ಕೊಡಿಸುವುದಾಗಿ ತನ್ನಿಂದ ಹಣ ಪಡೆದು ವಂಚಿಸಿರುವಶೇಷಗಿರಿ, ಅತ್ಯಾಚಾರವನ್ನೂ ಎಸಗಿದ್ದಾರೆ. ಹಲ್ಲೆ ಕೂಡ ನಡೆಸಿದ್ದಾರೆ' ಎಂದು ಯುವತಿಯೊಬ್ಬರು ಹೋದ ತಿಂಗಳು ದೂರು ನೀಡಿದ್ದರು. ಇದರ ಆಧಾರದಲ್ಲಿ ಪೊಲೀಸರು ಬಂಧಿಸಿದ್ದಾರೆ.
‘ಆರೋಪಿಯು ಯುವತಿಗೆ ಲೈಂಗಿಕ ಕಿರುಕುಳ ನೀಡಿದ್ದ. ಕೆಲಸ ಕೊಡಿಸುವುದಾಗಿ ಹೇಳಿ ಹಣವನ್ನು ಪಡೆದುಕೊಂಡಿದ್ದ. ಹಣ ಹಿಂತಿರುಗಿಸುವಂತೆ ಯುವತಿ ಕೇಳಿದಾಗ ಅವರ ಮೇಲೆ ಹಲ್ಲೆಗೂ ಮುಂದಾಗಿದ್ದ. ಹಲವು ದಿನಗಳಿಂದ ತಲೆಮರೆಸಿಕೊಂಡಿದ್ದ. ದೂರವಾಣಿ ಕರೆಗಳ ಮಾಹಿತಿಯನ್ನು ಆಧರಿಸಿ ಆತನನ್ನು ಮೈಸೂರಿನಲ್ಲಿ ಬಂಧಿಸಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.
‘ಆರೋಪಿಯು ಬ್ಯಾಂಕ್ವೊಂದರಲ್ಲಿ ಉದ್ಯೋಗ ಮಾಡುತ್ತಿದ್ದ. ನಟನಾಗಬೇಕೆಂಬ ಆಸೆಯಿಂದ ಮೂರು ವರ್ಷಗಳ ಹಿಂದೆ ಕೆಲಸ ತೊರೆದಿದ್ದ. ಕನ್ನಡದ ಡಾರ್ಕ್, ಸಸ್ಪೆನ್ಸ್, ಕಿಲಾಡಿಗಳು ಹಾಗೂ ಆಶಿಕಿ–3 ಚಿತ್ರಗಳಲ್ಲಿ ಖಳ ಹಾಗೂ ಪೋಷಕ ನಟನಾಗಿ ಕೆಲಸ ಮಾಡಿದ್ದಾನೆ ಎಂಬುದು ಗೊತ್ತಾಗಿದೆ. ಈತನಿಂದ ಮತ್ತಷ್ಟು ಯುವತಿಯರು ವಂಚನೆಗೆ ಒಳಗಾಗಿರುವ ಸಾಧ್ಯತೆ ಇದೆ. ತನಿಖೆ ಮುಂದುವರಿಸಲಾಗಿದ್ದು, ಆರೋಪಿಯಿಂದ ಇನ್ನಷ್ಟು ಮಾಹಿತಿ ಕಲೆಹಾಕಲಾಗುತ್ತದೆ’ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.