ಹೊಸಪೇಟೆ (ವಿಜಯನಗರ): ನಟ, ನಿರ್ಮಾಪಕ ಉಪೇಂದ್ರ ಅವರು ಮಂಗಳವಾರ ನಗರದಲ್ಲಿ 'ಯುಐ' ಚಿತ್ರದ ಚಿತ್ರೀಕರಣ ಆರಂಭಿಸಿದರು.
ಚಿತ್ರೀಕರಣಕ್ಕೂ ಮುನ್ನ ಅವರು ನಗರದಲ್ಲಿ ಡಾ. ಪುನೀತ್ ರಾಜಕುಮಾರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಅಲ್ಲಿನೆರೆದಿದ್ದ ಅವರ ಅಭಿಮಾನಿಗಳು ಅವರ ಮೇಲೆ ಹೂಮಳೆಗರೆದರು. ಉಪ್ಪಿ, ಉಪ್ಪಿ ಎಂದು ಘೋಷಣೆ ಕೂಗಿದರು.
ಬಳಿಕ ಮಾತನಾಡಿದ ಉಪೇಂದ್ರ, ಅಪ್ಪು ಅವರ ಪ್ರತಿಮೆಮಾಡಿ ಮಾಲಾರ್ಪಣೆ ಮಾಡಿದರೆ ಸಾಲದು. ಅವರು ಪ್ರತಿಯೊಬ್ಬರನ್ನೂ ಪ್ರೀತಿಸುತ್ತಿದ್ದರು. ಯಾರನ್ನೂ ದ್ವೇಷಿಸುತ್ತಿರಲಿಲ್ಲ. ಅದೇ ರೀತಿ ಎಲ್ಲರೂ ಬದುಕಬೇಕು. ಅವರ ಆದರ್ಶ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಚುನಾವಣೆ ಬರುತ್ತಿದೆ. ನಿಮ್ಮ ಮತ ಮಾರಿಕೊಳ್ಳಬೇಡಿ. ಜಾತಿ, ಧರ್ಮ ನೋಡಿ ಮತ ಹಾಕಬೇಡಿ. ಉತ್ತಮ ವಿಚಾರ ನೋಡಿ ಮತ ಚಲಾಯಿಸಬೇಕೆಂದು ತಿಳಿಸಿದರು.
ನಂತರ ನಗರದ ಮೀರ್ ಆಲಂ ಚಿತ್ರ ಮಂದಿರದ ಆವರಣದಲ್ಲಿ 'ಯುಐ' ಸಿನಿಮಾದ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರು. ಅವರನ್ನು ನೋಡಲು ಅಪಾರ ಜನ ಸೇರಿದ್ದರು. ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.