ಬೆಂಗಳೂರು: ದಲಿತರಿಗೂ ರಾಜ್ಯವನ್ನು ಮುನ್ನಡೆಸುವ ಶಕ್ತಿ ಇದೆ. ಆದರೆ, ನಮ್ಮನ್ನು ದುರ್ಬಲರು ಎನ್ನುವ ರೀತಿಯಲ್ಲಿ ಬಿಂಬಿಸಲಾಗಿದೆ ಎಂದು ಬಹಿಷ್ಕೃತ ಹಿತಕಾರಿಣಿ ಸಭಾದ ಅಧ್ಯಕ್ಷ ಡಾ. ಎಚ್.ಆರ್.ಸುರೇಂದ್ರ ಹೇಳಿದರು.
ನಗರದ ಶಾಸಕರ ಭವನದಲ್ಲಿ ಗುರುವಾರ ಬಹಿಷ್ಕೃತ ಹಿತಕಾರಿಣಿ ಸಭಾ ಹಮ್ಮಿಕೊಂಡ ಡಾ. ಬಾಬು ಜಗಜೀವನರಾಂ ಅವರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ದಲಿತರಲ್ಲಿ ಪ್ರತಿಭೆ ಇದೆ. ಆದರೆ ಅದರ ಸದುಪಯೋಗವಾಗುತ್ತಿಲ್ಲ. ಹಾಗಾಗಿ ಸಮುದಾಯದಲ್ಲಿ ಜಾಗೃತಿ ಮೂಡಿಸುವ ಕೆಲಸವಾಗಬೇಕು. ನಾವೆಲ್ಲರೂ ಒಂದೇ ಎಂಬ ಭಾವನೆ ಮೂಡುವಂತಾಗಬೇಕು ಎಂದರು.
ದಲಿತ ದೌರ್ಜನ್ಯ ತಡೆ ಕಾಯ್ದೆ ಇದ್ದಾಗಲೂ ದಲಿತರ ಮೇಲೆ ಹಲ್ಲೆಗಳು ನಡೆಯುತ್ತಿವೆ. ಏಕೆ ಈ ಕಾಯ್ದೆಯನ್ನು ದುರ್ಬಲಗೊಳಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ಅವರು ಪ್ರಶ್ನಿಸಿದರು.
ಆರ್ಪಿಐನ ಎಂ.ವೆಂಕಟಸ್ವಾಮಿ ಮಾತನಾಡಿ, ಅಂಬೇಡ್ಕರ್ ಅವರು ಹುಟ್ಟುಹಾಕಿದ್ದ ಬಹಿಷ್ಕೃತ ಹಿತಕಾರಿಣಿ ಸಭಾವನ್ನು ಬಲಪಡಿಸಿ, ಆ ಮೂಲಕ ದಲಿತ ಒಗ್ಗಟ್ಟಿಗೆ ಶ್ರಮಿಸಬೇಕು ಎಂದರು.
ಸಭಾದ ಕಾರ್ಯದರ್ಶಿ ಮತ್ತು ಸಂಯೋಜಕಿ ಎಸ್. ವಿಜಯಮ್ಮ, ಕಾರ್ಯಾಧ್ಯಕ್ಷ ಮತ್ತು ಸಂಯೋಜಕ ಜೆ.ಸಿ. ಪ್ರಕಾಶ್ ವೇದಿಕೆಯಲ್ಲಿದ್ದರು.