ಮುಂಬೈ: ತೌತೆ ಚಂಡಮಾರುತದ ಮಳೆಯಲ್ಲಿ ನೃತ್ಯ ಮಾಡಿ, ಉರುಳಿ ಬಿದ್ದ ಮರದ ಮೇಲೆ ನಿಂತು ಫೋಟೊಶೂಟ್ ಮಾಡಿಸಿಕೊಂಡಿದ್ದ ಬಾಲಿವುಡ್ ನಟಿ ದೀಪಿಕಾ ಸಿಂಗ್ ಅವರು ಟ್ರೋಲ್ಗೆ ಗುರಿಯಾಗಿದ್ದಾರೆ.
ದೀಪಿಕಾ ಸಿಂಗ್ ಅವರು ಮನೆಯ ಬಳಿ ರಸ್ತೆಯ ಮಧ್ಯೆ ಉರುಳಿ ಬಿದ್ದಿದ್ದ ಮರದ ಮೇಲೆ ನಿಂತು ಫೋಟೊಶೂಟ್ ಮಾಡಿಸಿಕೊಂಡಿದ್ದರು. ಜತೆಗೆ, ಮಳೆಯಲ್ಲಿ ನೃತ್ಯವನ್ನೂ ಮಾಡಿದ್ದರು. ಇದರ ಫೋಟೊ ಮತ್ತು ವಿಡಿಯೊಗಳನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದರು.
ಇದಾದ ಕೆಲವೇ ಗಂಟೆಗಳಲ್ಲಿ ಫೋಟೊಗಳು ವೈರಲ್ ಆಗಿದ್ದವು. ಸಂಕಷ್ಟದ ಸಂದರ್ಭದಲ್ಲಿ ಜನರಲ್ಲಿ ಅರಿವು ಮೂಡಿಸಿ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕಿದ್ದ ನಟಿ ಈ ರೀತಿ ವರ್ತಿಸಿರುವುದಕ್ಕೆ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದರು.
ಚಂಡಮಾರತದಿಂದಾಗಿ ಗುಜರಾತ್, ಕೇರಳ, ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಜನರು ಸಂಕಷ್ಟ ಎದುರಿಸಿದ್ದಾರೆ. ಇಂತಹ ಸಮಯದಲ್ಲಿ ನೀವು ಮಳೆಯಲ್ಲಿ ಡ್ಯಾನ್ಸ್ ಮಾಡುವುದು ಸೂಕ್ತವೆನಿಸುತ್ತಿಲ್ಲ ಎಂದು ನೆಟ್ಟಿಗರು ಸಾಮಾಜಿಕ ಜಾಲತಾಣದಲ್ಲಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಘಟನೆ ಸಂಬಂಧ ದೀಪಿಕಾ ವಿಷಾದ ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮೇ 2014ರಲ್ಲಿ ದೀಪಿಕಾ ಸಿಂಗ್, ನಿರ್ದೇಶಕ ರೋಹಿತ್ ರಾಜ್ ಗೋಯಲ್ ಅವರೊಂದಿಗೆ ವಿವಾಹವಾಗಿದ್ದಾರೆ.