ಬೆಳಗಾವಿ: ‘ರಾಜ್ಯ ವಿಧಾನಸಭೆ ಚುನಾವಣೆಗೆ ಮಾದರಿ ನೀತಿ ಸಂಹಿತೆ ಘೋಷಣೆಯಾಗಿದ್ದು, ರಾಜಕೀಯ ಕಾರ್ಯಕ್ರಮ ಹಮ್ಮಿಕೊಳ್ಳಲು, ಪ್ರಚಾರ ನಡೆಸಲು ಚುನಾವಣಾ ಅಧಿಕಾರಿಗಳಿಂದ ಕಡ್ಡಾಯವಾಗಿ ಅನುಮತಿ ಪಡೆಯಬೇಕು’ ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಎಸ್.ಜಿಯಾವುಲ್ಲಾ ಹೇಳಿದರು.
ಇಲ್ಲಿನ ತಮ್ಮ ಕಚೇರಿಯಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಅನುಮತಿ ಪಡೆಯದೇ ಪ್ರಚಾರಕ್ಕಿಳಿದರೆ ಅಂತಹವರ ವಿರುದ್ಧ ಕಾನೂನಿನ ಪ್ರಕಾರ ಕ್ರಮಕೈಗೊಳ್ಳಲಾಗುವುದು’ ಎಂದರು.
‘ಏಪ್ರಿಲ್ 17ರಂದು ಚುನಾವಣಾ ಗೆಜೆಟ್ ಅಧಿಸೂಚನೆ ಪ್ರಕಟಣೆಯಾಗಲಿದೆ. ನಾಮಪತ್ರ ಸಲ್ಲಿಕೆಗೆ 24 ಕಡೆಯ ದಿನ, 25ರಂದು ನಾಮಪತ್ರ ಪರಿಶೀಲನೆ, ನಾಮಪತ್ರ ವಾಪಸ್ ಪಡೆಯಲು 27 ಕಡೆಯ ದಿನವಾಗಿರುತ್ತದೆ. ಮೇ 12ರಂದು ಮತದಾನ ನಡೆಯಲಿದ್ದು, 15ರಂದು ಮತ ಎಣಿಕೆ ನಡೆಯಲಿದೆ. ಚುನಾವಣಾ ಪ್ರಕ್ರಿಯೆ ಮೇ 18ಕ್ಕೆ ಕೊನೆಗೊಳ್ಳಲಿದೆ’ ಎಂದು ತಿಳಿಸಿದರು.
‘ಸರ್ಕಾರ, ಜನಪ್ರತಿನಿಧಿಗಳು ಹಾಗೂ ರಾಜಕೀಯ ಪಕ್ಷಗಳ ಪ್ರಚಾರ ಸಾಮಗ್ರಿಗಳು ಹಾಗೂ ಜಾಹೀರಾತುಗಳನ್ನು ಮುಂದಿನ 24 ಗಂಟೆಯೊಳಗೆ ತೆರವುಗೊಳಿಸಬೇಕು. ಚುನಾವಣೆಗೆ ಸಂಬಂಧಿಸಿದಂತೆ ಯಾವುದೇ ರಾಜಕೀಯ ಪಕ್ಷ ಅಥವಾ ಅಭ್ಯರ್ಥಿಗಳು ಜಿಲ್ಲಾ ಚುನಾವಣಾಧಿಕಾರಿಗಳ ನೇತೃತ್ವದ ಮಾಧ್ಯಮ ಪ್ರಮಾಣೀಕರಣ ಹಾಗೂ ಕಣ್ಗಾವಲು ಸಮಿತಿಯ ಅನುಮತಿ ಪಡೆಯದೇ ಯಾವುದೇ ರೀತಿಯ ಜಾಹೀರಾತುಗಳನ್ನು ಮಾಧ್ಯಮಗಳಿಗೆ ನೀಡಬಾರದು. ಒಂದು ವೇಳೆ ಪೂರ್ವಾ
ನುಮತಿ ಪಡೆಯದೇ ಜಾಹೀರಾತು ನೀಡಿದರೆ ನಿಯಮಾವಳಿ ಪ್ರಕಾರ ಕ್ರಮ ತೆಗೆದುಕೊಳ್ಳಲಾಗುವುದು’ಎಂದು ಎಚ್ಚರಿಕೆ ನೀಡಿದರು.
ನೀತಿ ಸಂಹಿತೆ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಜಿಲ್ಲಾ ಮಟ್ಟದಲ್ಲಿ ಒಬ್ಬ ನೋಡಲ್ ಅಧಿಕಾರಿ ಹಾಗೂ ಜಿಲ್ಲೆಯ ಎಲ್ಲ 18 ವಿಧಾನಸಭಾ ಕ್ಷೇತ್ರಗಳ ಮಟ್ಟದಲ್ಲಿ ಒಬ್ಬರು ನೋಡಲ್ ಅಧಿಕಾರಿಗಳು ಕಾರ್ಯನಿರ್ವಹಿಸಲಿದ್ದಾರೆ.
36 ಲಕ್ಷ ಮತದಾರರು: ‘ಇದುವರೆಗೆ 36,57,541 ಜನರು ಮತದಾರರ ಪಟ್ಟಿಯಲ್ಲಿ ಸೇರ್ಪಡೆಗೊಂಡಿದ್ದಾರೆ. ಅದರಲ್ಲಿ 18,54,485 ಪುರುಷರು ಹಾಗೂ 18,03,056 ಮಹಿಳೆಯರು ಮತದಾರರಾಗಿದ್ದಾರೆ. 18–19ರ ವಯೋ
ಮಾನದ 55,629 ಯುವ ಮತದಾರರು ಮತದಾರರ ಪಟ್ಟಿಗೆ ಸೇರ್ಪಡೆಗೊಂಡಿದ್ದಾರೆ’ ಎಂದು ವಿವರಿಸಿದರು. ‘2013ರಲ್ಲಿ ನಡೆದ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಒಟ್ಟಾರೆ ಶೇ 74.92 ಮತದಾನವಾಗಿತ್ತು ಇದರಲ್ಲಿ ಶೇ 76.86 ಪುರುಷರು ಹಾಗೂ ಶೇ 72.82 ಮಹಿಳೆಯರು ಮತ ಚಲಾಯಿಸಿದ್ದರು’ ಎಂದು ತಿಳಿಸಿದರು.
ವಿವಿಪ್ಯಾಟ್ ಬಳಕೆ: ಜಿಲ್ಲೆಯಲ್ಲಿ ಒಟ್ಟು 6,621 ಬ್ಯಾಲೆಟ್ ಯುನಿಟ್ (ಮತ
ಯಂತ್ರಗಳು), 5,518 ಕಂಟ್ರೋಲ್ ಯೂನಿಟ್ ಹಾಗೂ 5,738 ವಿವಿ
ಪ್ಯಾಟ್ (ಮತದಾನ ಖಾತ್ರಿ ಯಂತ್ರ) ಬಳಸ
ಲಾಗುತ್ತಿದೆ. ಮಾದರಿ ನೀತಿ ಸಂಹಿತೆ ಜಾರಿ
ಗೊಳಿಸಲು 143 ಎಂಸಿಸಿ ತಂಡಗಳು, 62 ಸ್ಟ್ಯಾಟಿಕ್ ಸರ್ವೇಲೆನ್ಸ್ ತಂಡಗಳು, 81 ಫ್ಲೈಯಿಂಗ್ ಸ್ಕ್ವಾಡ್ಗಳು ಕಾರ್ಯ
ನಿರ್ವಹಿಸಲಿವೆ.
58 ಚೆಕ್ಪೋಸ್ಟ್: ‘ಗೋವಾ ಹಾಗೂ ಮಹಾರಾಷ್ಟ್ರ ರಾಜ್ಯಗಳ ಗಡಿಗೆ ಹೊಂದಿಕೊಂಡಂತೆ 58 ಚೆಕ್ಪೋಸ್ಟ್
ಗಳನ್ನು ಸ್ಥಾಪಿಸಲಾಗಿದೆ. ಅಕ್ರಮ ಹಣ, ಮದ್ಯ ಮತ್ತಿತರ ವಸ್ತುಗಳ ಸಾಗಾಣಿಕೆ ತಡೆಗಟ್ಟಲು ಸಹಕಾರಿಯಾಗಲಿದೆ’ ಎಂದು ಜಿಲ್ಲಾ ಚುನಾವಣಾಧಿಕಾರಿ ತಿಳಿಸಿದರು.
ಮದುವೆ, ಜಾತ್ರೆಗೂ ಅನುಮತಿ ಅಗತ್ಯ:
‘ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಸಾವಿರಾರು ಜನರು ಒಂದೇ ಕಡೆ ಸೇರುವಂತಹ ಜಾತ್ರೆ ಹಾಗೂ ದೊಡ್ಡ ಪ್ರಮಾಣದ ಮದುವೆ ಸಮಾರಂಭಗಳ ಬಗ್ಗೆ ಜಿಲ್ಲಾ ಚುನಾವಣಾಧಿಕಾರಿಗಳ ಗಮನಕ್ಕೆ ತಂದು
ಅವರಿಂದ ಅನುಮತಿ ಪಡೆಯಬೇಕು’ ಎಂದರು.
‘ಮತದಾನ ಸುಗಮವಾಗಿ ನಡೆಸುವ ಉದ್ದೇಶದಿಂದ ಮತದಾರರ ಅನುಕೂಲಕ್ಕಾಗಿ ಜಿಲ್ಲೆಯ ಎಲ್ಲ ಮತಗಟ್ಟೆಗಳಿಗೆ ರ್ಯಾಂಪ್, ನೀರು, ವಿದ್ಯುತ್ ಹಾಗೂ ಶೌಚಾಲಯ ಸೇರಿದಂತೆ ಎಲ್ಲ ಬಗೆಯ ಮೂಲಸೌಕರ್ಯಗಳನ್ನು ಒದಗಿಸಲಾಗಿದೆ’ ಎಂದು ತಿಳಿಸಿದರು.
ಎಡಿಸಿ ಡಾ. ಎಚ್.ಬಿ. ಬೂದೆಪ್ಪ ಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ಚುನಾವಣಾ ಕೈಪಿಡಿ: ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಪ್ರಕಟಿಸಿರುವ
ವಿಧಾನಸಭಾ ಚುನಾವಣಾ ಹಿನ್ನೋಟ 1957–2013 ಎಂಬ ಚುನಾವಣಾ ಕೈಪಿಡಿ
ಯನ್ನು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಎಸ್. ಜಿಯಾವುಲ್ಲಾ ಬಿಡುಗಡೆಗೊಳಿಸಿದರು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರಾದ ಗುರುನಾಥ ಕಡಬೂರ ಉಪಸ್ಥಿತರಿದ್ದರು.
266 ಮಂದಿ ತೃತೀಯ ಲಿಂಗಿಗಳು
‘ತೃತೀಯ ಲಿಂಗಿಗಳು ಪುರುಷ ಅಥವಾ ಮಹಿಳೆ ಎಂದು ಘೋಷಿಸಿಕೊಂಡಿದ್ದಾರೆ. ಆದ್ದರಿಂದ ಪ್ರಸ್ತುತ ಮತದಾರರ ಪಟ್ಟಿಯಲ್ಲಿ ಕೇವಲ 266 ತೃತೀಯ ಲಿಂಗಿಗಳು ಇದ್ದಾರೆ. ಅವರು ಸ್ವಯಂಪ್ರೇರಣೆಯಿಂದ ತೃತೀಯಲಿಂಗಿಗಳು ಎಂದು ಘೋಷಿಸಿದಾಗ ಮಾತ್ರ ಹಾಗೆ ಪರಿಗಣಿಸಬಹುದು’ ಎಂದು ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ ರಾಮಚಂದ್ರನ್ ಅವರು ವಿವರಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.