ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಕಾಶವಾಣಿ ಮಂಗಳೂರು... ಓದುತ್ತಿರುವವರು ನಿರೀಕ್ಷಾ ಶೆಟ್ಟಿ..!

Last Updated 20 ಏಪ್ರಿಲ್ 2020, 11:49 IST
ಅಕ್ಷರ ಗಾತ್ರ

ಇದೇನಿದು ಮಂಗಳೂರು ಆಕಾಶವಾಣಿಯಲ್ಲಿ ಹೊಸ ನಿರೂಪಕಿಯನ್ನು ಪರಿಚಯ ಮಾಡಿಸುತ್ತಿದ್ದಾರೆ ಅಂತ ಅಂದುಕೊಂಡ್ರಾ? ಖಂಡಿತಾ ಇಲ್ಲ. ಇದು ‘ಸ್ಯಾಂಡಲ್‌ವುಡ್‌‘ನಲ್ಲಿ ತಯಾರಾಗುತ್ತಿರುವ ಹೊಸ ಸಿನಿಮಾದ ಕಥೆ. ಸಿನಿಮಾ ಹೆಸರೇ ‘ಆಕಾಶವಾಣಿ ಮಂಗಳೂರು‘. ಕರಾವಳಿಯ ಬೆಡಗಿ ನಿರೀಕ್ಷಾಶೆಟ್ಟಿ ಈ ಸಿನಿಮಾದಲ್ಲಿ ನಾಯಕಿಯಾಗಿ ಅಭಿಯನಿಸುತ್ತಿದ್ದಾರೆ.

ದಕ್ಷಿಣ ಕನ್ನಡದ ಪುತ್ತೂರಿನ ನಿರೀಕ್ಷಾ ಶೆಟ್ಟಿ, ಕೋಸ್ಟಲ್‌ವುಡ್‌ ಸಿನಿಪ್ರಿಯರಿಗೆ ಪರಿಚಿತ ಮುಖ. ಇವರು ನಾಯಕಿಯಾಗಿ ನಟಿಸಿದ್ದ ಕಿಶೋರ್‌ ಮೂಡಬಿದ್ರೆ ನಿರ್ದೇಶನದ ತುಳು ಭಾಷೆಯ ‘ಅಪ್ಪೆ ಟೀಚರ್‌’ ಸಿನಿಮಾ ಭಾರಿ ಜನಪ್ರಿಯತೆ ಗಳಿಸಿತ್ತು. ಇವರು ‘ಆಟಿಡೊಂಜಿ ದಿನ’, ‘ರಡ್‌ ಎಕ್ರೆ’ ಸೇರಿದಂತೆ ನಾಲ್ಕೈದು ತುಳು ಸಿನಿಮಾಗಳಲ್ಲಿ ಪ್ರಮುಖ ಪಾತ್ರಗಳಿಗೆ ಬಣ್ಣ ಹಚ್ಚಿದ್ದಾರೆ. ಕೆಲವು ಧಾರಾವಾಹಿಗಳಲ್ಲೂ ನಟಿಸಿದ್ದಾರೆ. ಈಗ ಗುರುಚರಣ್‌ ರಚಿಸಿ, ನಿರ್ದೇಶಿಸುತ್ತಿರುವ ‘ಆಕಾಶವಾಣಿ ಮಂಗಳೂರು’ ಸಿನಿಮಾದಲ್ಲಿ ನಟ ಆನಂದ್‌ ಗಣೇಶ್‌ಗೆ ಜೋಡಿಯಾಗಿ ನಟಿಸುತ್ತಿದ್ದಾರೆ.

ಶಾಲಾ ದಿನಗಳಿಂದಲೂ ಸಾಂಸ್ಕೃತಿಕ ಹಾಗೂ ಸಾಹಸ ಚಟುವಟಿಕೆಗಳಲ್ಲಿ ಮುಂದಿದ್ದ ನಿರೀಕ್ಷಾ, ಕಾಲೇಜು ದಿನಗಳಲ್ಲಿ ರಾಷ್ಟ್ರೀಯ ಸೇವಾ ಯೋಜನೆಯಲ್ಲಿ ಪಾಲ್ಗೊಳ್ಳುತ್ತಿದ್ದರು. 2017ರ ಗಣರಾಜ್ಯೋತ್ಸವದ ಸಂದರ್ಭದಲ್ಲಿ ದೆಹಲಿಯಲ್ಲಿ ನಡೆದ ಆರ್ಮಿ ಪರೇಡ್‌ನಲ್ಲಿ ಧ್ವಜವಂದನೆ ಸಲ್ಲಿಸಿದ್ದರು. ಪ್ರಧಾನಿ ನರೇಂದ್ರ ಮೋದಿ ಹಾಗೂ ಅಂದಿನ ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಅವರ ಉಪಸ್ಥಿತಿಯಲ್ಲಿ ತುಳು ಯಕ್ಷಗಾನದ ‘ಮಾಯಕಡೊಂಜಿ ಪೊಣ್ಣ ಗಾಳಿ ಬೀಜಿಂಡ್‌ಗೆ’ ಎಂಬ ಹಾಡಿಗೆ ಯಕ್ಷಗಾನ ಶೈಲಿಯ ನಾಟ್ಯ ಪ್ರದರ್ಶನ ನೀಡಿದ್ದರು.

ಕಾಲೇಜು ದಿನಗಳಲ್ಲೇ ಫ್ಯಾಷನ್‌ ಲೋಕದಲ್ಲಿ ಸಕ್ರಿಯರಾಗಿದ್ದ ಅವರು ಸೌಂದರ್ಯ ಸ್ಪರ್ಧೆಗಳಲ್ಲಿ ಭಾಗವಹಿಸಿ, ‘ಮಿಸ್‌ ಬಂಟ್‌’ ‘ಮಿಸ್‌ ಮಲ್ನಾಡ್‌‘, ‘ಪ್ರಿನ್ಸೆಸ್‌ ಆಫ್‌ ಪರ್ಲ್‌ ಸಿಟಿ‘ ಮೊದಲಾದ ಕಿರೀಟಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ನಂತರ ನಟನೆಯತ್ತ ಹೊರಳಿದಾಗ ಅವರನ್ನು ಕೈಬೀಸಿ ಕರೆದಿದ್ದು ತುಳು ಚಿತ್ರರಂಗ. ಮೊದಲ ಚಿತ್ರ ‘ಅಪ್ಪೆ ಟೀಚರ್‌’ ಶತ ದಿನ ಪೂರೈಸಿದ್ದು ಸಿನಿಮಾ ಕ್ಷೇತ್ರದಲ್ಲಿ ಅವರ ಆತ್ಮವಿಶ್ವಾಸವನ್ನು ಹೆಚ್ಚಿಸಿತು.

ನಿರೀಕ್ಷಾ, ಸದ್ಯ ಬೆಂಗಳೂರಿನಲ್ಲಿದ್ದಾರೆ. ಕಲರ್ಸ್‌ ಕನ್ನಡದ ’ಮೂರು ಗಂಟು’ ಧಾರಾವಾಹಿಯಲ್ಲಿ ನೆಗೆಟಿವ್‌ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಅವರಿಗೆ ಸಿನಿಮಾ, ಕಿರುತೆರೆ ಎರಡರಲ್ಲಿಯೂ ಮುಂದುವರಿಯುವ ಆಸೆ ಇದೆ. ಭಿನ್ನ ಭಿನ್ನ ಪಾತ್ರಗಳಲ್ಲಿ ನಟಿಸುವ ಹಂಬಲವಿದೆ. ‘ನಾನು ನಟಿಸಿದ ಎಲ್ಲಾ ಚಿತ್ರಗಳಲ್ಲಿ ಭಿನ್ನ ಛಾಯೆಯಿರುವ ಪಾತ್ರಗಳೇ ದೊರೆತಿವೆ‘ ಎನ್ನುತ್ತಾರೆ ಅವರು.

‘ಬಣ್ಣದ ಲೋಕದಲ್ಲಿ ಫಿಟ್‌ನೆಸ್ ಬಗ್ಗೆ ಕಾಳಜಿ ಮಾಡಬೇಕು‘ ಎಂದು ಹೇಳುವ ನಿರೀಕ್ಷಾ, ವರ್ಕೌಟ್‌ಗಾಗಿ ಜಿಮ್‌ಗೆ ಹೋಗುತ್ತಿದ್ದರು. ‘ಈಗ ಕ್ವಾರಂಟೈನ್‌ ಆಗಿರುವುದರಿಂದ ಮನೆಯಲ್ಲೇ ವ್ಯಾಯಾಮ ಮಾಡುತ್ತೇನೆ. ಆಹಾರ ವಿಷಯದಲ್ಲೂ ಕಟ್ಟುನಿಟ್ಟು ಪಾಲಿಸುತ್ತೇನೆ. ಸತ್ವಯುತ ಆಹಾರ ಸೇವನೆ, ಹೆಚ್ಚು ನೀರು ಕುಡಿಯುವುದು ನನ್ನ ಸೌಂದರ್ಯದ ಗುಟ್ಟು’ ಎನ್ನುತ್ತಾರೆ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT