ಬಾಲಿವುಡ್ನಲ್ಲಿ ಸದ್ಯ ಅತ್ಯಂತ ಬ್ಯುಸಿಯಾಗಿರುವ ನಟಿ ಆಲಿಯಾ ಭಟ್ ಮಾಧ್ಯಮದವರ ಮುಂದೆ ಸತ್ಯವೊಂದನ್ನು ಬಿಚ್ಚಿಟ್ಟರೂ ಯಾರೂ ನಂಬಲು ಸಿದ್ಧರಿರಲಿಲ್ಲ. ಯಾಕೆಂದರೆ ಅವರು ಹೇಳಿದ ಸಂಗತಿಯೇ ಹಾಗಿತ್ತು.
‘ನಿಮ್ಮ ಚಿತ್ರದಲ್ಲಿ ನನಗೊಂದು ಪಾತ್ರ ಕೊಡಿ ಎಂದು ನಾನು ಅಕ್ಷರಶಃ ಗೋಗರೆದಿದ್ದೆ. ಕೊನೆಗೂ ಅವರು ಮನಸ್ಸು ಮಾಡಿ ಆರ್ಆರ್ಆರ್ನಲ್ಲಿ ಒಂದು ಅವಕಾಶ ಕೊಟ್ಟರು’ ಎಂದು ಆಲಿಯಾ ಹೇಳಿದರು.
‘ಒಂದು ದಿನ ವಿಮಾನ ನಿಲ್ದಾಣದಲ್ಲಿ ಅಚಾನಕ್ ಆಗಿ ರಾಜಮೌಳಿ ಸರ್ ಎದುರಾದರು. ಅವರನ್ನು ನೋಡಿದ್ದೇ ಹುಚ್ಚೆದ್ದು ಕುಣಿಯುವಂತಾಯ್ತು. ಓಡಿ ಹೋಗಿ ನನ್ನ ಪರಿಚಯ ಮಾಡಿಕೊಂಡು ನಿಮ್ಮ ಸಿನಿಮಾದಲ್ಲಿ ನಟಿಸುವಾಸೆ ನನಗೆ. ಅದೆಂತಹ ಪಾತ್ರವಾದರೂ, ಎಷ್ಟೋ ಸಣ್ಣ ಪಾತ್ರವಾದರೂ ಸರಿ. ನಾನು ಮಾಡುತ್ತೇನೆ. ದಯವಿಟ್ಟು ನನಗೆ ಅವಕಾಶ ಕೊಡಿ ಎಂದು ಬೇಡಿಕೊಂಡೆ’ ಎಂದು ಆಲಿಯಾ ಹೇಳಿದರು.
ಅವರು ಮುಗುಳ್ನಕ್ಕರು ಅಷ್ಟೇ. ಅಲ್ಲಿಗೆ ನನ್ನ ಆಸೆ ಕಮರಿತು. ಆದರೆ ಅದಕ್ಕೊಂದು ಕಾರಣವಿತ್ತು. ಆರ್ಆರ್ಆರ್ ಚಿತ್ರದಲ್ಲಿ ಆಗಿನ್ನೂ ಫೀಮೇಲ್ ರೋಲ್ ಇರಲೇ ಇಲ್ಲ. ಆಮೇಲೆ ಕತೆ ಬೆಳೆಯಿತು. ಅದಕ್ಕೂ ಅವಕಾಶ ಸೃಷ್ಟಿಯಾಯಿತು.ಈಗ ನೋಡಿದರೆ ನನ್ನ ಕನಸು ನನಸಾಗಿದೆ. ಅವರ ಮೆಗಾಚಿತ್ರದಲ್ಲಿ ನಿಜವಾಗಿಯೂ ನಾನು ನಟಿಸಿದ್ದೇನೆ’ ಎಂದು ಭಾವೋದ್ವೇಗದಿಂದ ಆಲಿಯಾ ಹೇಳಿಕೊಂಡರು.
ಬಾಲಿವುಡ್ನಲ್ಲಿ ಆಲಿಯಾನಷ್ಟು ಬ್ಯುಸಿಯಾಗಿರುವ ನಟಿಯರು ಈಗ ಯಾರೂ ಇಲ್ಲವೆನ್ನಬಹುದು. ‘ಗಲ್ಲಿ ಬಾಯ್;’ ಮತ್ತು ‘ಕಳಂಕ್’ ಚಿತ್ರಗಳಿಗೆ ಉತ್ತಮ ಪ್ರತಿಕ್ರಿಯೆ ಮತ್ತು ಗಳಿಕೆ ಸಾಧ್ಯವಾಗಿದೆ. ‘ಬ್ರಹ್ಮಾಸ್ತ್ರ’, ‘ತಖ್ತ್’, ‘ಸಡಕ್’ ಮತ್ತು ‘ಇನ್ಷ್ಅಲ್ಲಾ’ ಚಿತ್ರಗಳಲ್ಲಿ ತೊಡಗಿಸಿಕೊಂಡಿದ್ದಾರೆ.
‘ಕಳಂಕ್’ , ನಿರೀಕ್ಷೆಯಂತೆ ಬಾಕ್ಸಾಫೀಸ್ ಕೊಳ್ಳೆಹೊಡೆಯಲಿಲ್ಲ. ಆದರೆ ಆಲಿಯಾ ತಮ್ಮ ನಟನೆ ಮತ್ತು ನೃತ್ಯದಿಂದ ಪ್ರೇಕ್ಷಕರ ಮನಗೆದ್ದಿದ್ದಾರೆ. ‘ಎಲ್ಲಾ ಚಿತ್ರಗಳೂ ಗೆಲ್ಲಲೇಬೇಕೆಂದೇನಿಲ್ಲ. ಯಾವಾಗಲೂ ಬಿಸಿಲೇ ಇರಬೇಕು ಎಂದು ಬಯಸುವುದು ತಪ್ಪು, ಕೆಲವೊಮ್ಮೆ ಮಳೆಯನ್ನೂ ಸ್ವಾಗತಿಸಬೇಕಾಗುತ್ತದೆ’ ಎಂದು ಅವರು, ಚಿತ್ರದ ಗಳಿಕೆಯ ಬಗ್ಗೆ ಮಾರ್ಮಿಕವಾಗಿ ಪ್ರತಿಕ್ರಿಯಿಸಿದ್ದಾರೆ.
ದಕ್ಷಿಣ ಭಾರತದ ಚಿತ್ರರಂಗಕ್ಕೆ ರಾಜಮೌಳಿ ಚಿತ್ರದ ಮೂಲಕ ಭರ್ಜರಿ ಎಂಟ್ರಿ ಕೊಟ್ಟಿರುವ ಆಲಿಯಾ ಈಗಾಗಲೇ ತೆಲುಗು ಮಾತನಾಡಲು ಕಲಿಯುತ್ತಿದ್ದಾರೆ. ಮುಂದಿನ ದಿನಗಳಲ್ಲಿಇಲ್ಲಿನ ಇತರ ಭಾಷೆಗಳಿಗೂ ಪಾದ ವಿಸ್ತರಿಸಿಕೊಳ್ಳುತ್ತಾರೋ ಕಾದು ನೋಡಬೇಕಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.