ಟಾಲಿವುಡ್ನ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಅವರ ಅಭಿನಯದ ‘ಅಲಾ ವೈಕುಂಠಪುರಮುಲೊ’ ಸಿನಿಮಾ ಭಾರಿ ಯಶಸ್ಸು ತಂದುಕೊಟ್ಟಿತ್ತು. ಈ ನಟನಿಗೆ ಬರೀ ಆಂಧ್ರ ಪ್ರದೇಶ ಮತ್ತು ತೆಲಂಗಾಣದಲ್ಲಿ ಮಾತ್ರವಲ್ಲ, ಕರ್ನಾಟಕ ಹಾಗೂ ಕೇರಳದಲ್ಲೂ ಭಾರಿ ಸಂಖ್ಯೆಯ ಅಭಿಮಾನಿಗಳಿದ್ದಾರೆ.
ಸದ್ಯ ಅಲ್ಲು ಅರ್ಜುನ್ ಅವರು ಸುಕುಮಾರ್ ನಿರ್ದೇಶನದ ಬಹುಭಾಷಾ ಚಿತ್ರ ‘ಪುಷ್ಪ’ದಲ್ಲಿ ನಟಿಸುತ್ತಿದ್ದಾರೆ.ಚಿತ್ರದಲ್ಲಿ ಅಲ್ಲು ಅರ್ಜುನ್ಗೆ ನಾಯಕಿಯಾಗಿ ನಟಿಸುತ್ತಿರುವವರು ಕನ್ನಡದ ರಶ್ಮಿಕಾ ಮಂದಣ್ಣ. ಕೊರೊನಾ ಹಾವಳಿ ಮುಗಿದ ನಂತರ ಹೈದರಾಬಾದ್ನಲ್ಲಿ ಸೆಟ್ ಹಾಕಿಚಿತ್ರೀಕರಣ ಆರಂಭಿಸಲಾಗುತ್ತದೆ.
ಈಗ ಸುದ್ದಿ ಅದಲ್ಲ! ನಿಜವಾದ ಸುದ್ದಿ ಎಂದರೆ ಅಲ್ಲು ಅರ್ಜುನ್ ಈ ಚಿತ್ರಕ್ಕೆ ತೆಗೆದುಕೊಂಡಿರುವ ಸಂಭಾವನೆ.
‘ಅಲಾ ವೈಕುಂಠಪುರಮುಲೊ’ ಸಿನಿಮಾಕ್ಕೆ ₹25 ಕೋಟಿ ಸಂಭಾವನೆ ಪಡೆದಿದ್ದ ಅಲ್ಲು ಅರ್ಜುನ್, ‘ಪುಷ್ಪ’ ಚಿತ್ರಕ್ಕೆ ತೆಗೆದುಕೊಂಡಿರುವ ಸಂಭಾವನೆ 10 ಕೋಟಿ ರೂಪಾಯಿ.
ಹಾಗೆಯೇ ಅವರ ನಿರ್ಮಾಣ ಸಂಸ್ಥೆ ಗೀತಾ ಆರ್ಟ್ಸ್ ವೈಕಂಠಪುರಮುಲೊ ಚಿತ್ರದ ಗಳಿಕೆಯ ಒಟ್ಟು ಲಾಭದಲ್ಲಿ ಶೇಕಡ 40ರಷ್ಟು ಪಾಲು ಹೊಂದಿತ್ತು. ಈ ಚಿತ್ರವು ಬಾಕ್ಸ್ ಆಫೀಸ್ನಲ್ಲಿ ₹200 ಕೋಟಿಗಿಂತಲೂ ಅಧಿಕ ಗಳಿಕೆ ಮಾಡಿತ್ತು.
ಈಗ ‘ಪುಷ್ಪ’ ಚಿತ್ರಕ್ಕೆ ಅಲ್ಲು ಅರ್ಜುನ್ ಮಾವ ಬಂಡವಾಳ ಹೂಡಿದ್ದಾರೆ. ಹಾಗಾಗಿ ಅವರು ಲಾಭಾಂಶದಲ್ಲಿ ಪಾಲು ಪಡೆಯಲಿದ್ದಾರೆ ಎನ್ನಲಾಗಿದೆ.ಚಿತ್ರದಲ್ಲಿ ಅಲ್ಲು ಅರ್ಜುನ್ ಲಾರಿ ಡ್ರೈವರ್ ಹಾಗೂ ರಶ್ಮಿಕಾ ಮಂದಣ್ಣ ಆತನ ಪತ್ನಿ ಪಾತ್ರದಲ್ಲಿ ನಟಿಸಲಿದ್ದಾರೆ. ರಕ್ತಚಂದನ ಕಳ್ಳ ಸಾಗಾಣಿಕೆ ಮತ್ತು ಲಾರಿ ಡ್ರೈವರ್ ಪುಷ್ಪರಾಜ್ ಜೀವನದಲ್ಲಿ ನಡೆಯುವ ಟ್ರಾಜಿಡಿ ಕತೆ ಇದಾಗಿದೆ.