ಕುರುಗೋಡು: ಪಟ್ಟಣದಲ್ಲಿ ಮತದಾನ ಜಾಗೃತಿ ಜಾಥಾವನ್ನು ಮಂಗಳವಾರ ಹಮ್ಮಿಕೊಳ್ಳಲಾಗಿತ್ತು.ಪುರಸಭೆ ಕಚೇರಿಯ ಆವರಣದಿಂದ ಪ್ರಾರಂಭಗೊಂಡ ಜಾಥಾ ಮುಖ್ಯ ವೃತ್ತದ ಮೂಲಕ, ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು.
ಜಾಥಾದಲ್ಲಿ ಮತದಾನ ನಮ್ಮ ಹಕ್ಕು, ನಿರ್ಭೀತಿಯಿಂದ ಮತದಾನ ಮಾಡಿ ಸುಭದ್ರ ಸರ್ಕಾರ ರಚನೆಗೆ ಸಹಕರಿಸಿ, ಪವಿತ್ರ ಮತವನ್ನು
ಹಣಕ್ಕಾಗಿ ಮಾರಿಕೊಳ್ಳಬೇಡಿ, ಅರ್ಹರಿಗೆ ಮತ ರಾಜ್ಯಕ್ಕೆ ಹಿತ ಎನ್ನುವ ಘೋಷಣೆಗಳನ್ನು ಕೂಗಿ ಜನರಲ್ಲಿ ಜಾಗೃತಿ ಮೂಡಿಸಿದರು.
ನಂತರ ಮಾತನಾಡಿದ ಅಧಿಕಾರಿ ಶಾಂತಾನಾಯಕ್, ‘ಮೇ 12ರಂದು ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಹಾಗಾಗಿ ಎಲ್ಲರೂ ಮತದಾನ ಪ್ರಕ್ರಿಯೆಲ್ಲಿ ಭಾಗವಹಿಸಬೇಕು ಎಂದು ಜಾಗೃತಿ ಮೂಡಿಸಲಾಗುತ್ತಿದೆ’ ಎಂದರು.
ಜಾಗೃತಿ ಜಾಥಾ ಅಂಗವಾಗಿ, ಸ್ಥಳೀಯ ಮಹಿಳೆಯರಿಗೆ ರಂಗೋಲಿ ಸ್ಪರ್ಧೆ ಏರ್ಪಡಿಸಲಾಗಿತ್ತು. ಕಲಾವತಿ (ಪ್ರಥಮ), ನಾಗರತ್ನ (ದ್ವಿತೀಯ) ಹಾಗೂ ಲಕ್ಷ್ಮಮ್ಮ (ತೃತೀಯ) ಬಹುಮಾನ ಪಡೆದರು. ಸ್ಪರ್ಧೆಯಲ್ಲಿ 18 ಮಂದಿ ಭಾಗವಹಿಸಿದ್ದರು.
ಪುರಸಭೆ ಮುಖ್ಯಾಧಿಕಾರಿ ಡಿ.ಬಿ. ಈರಣ್ಣ, ಸೆಕ್ಟರ್ ಅಧಿಕಾರಿ ಮೇಘನ, ಕಂದಾಯ ಅಧಿಕಾರಿ ಮೆಹಬೂಬ್ ಪಾಷಾ, ಕಚೇರಿ ವ್ಯವಸ್ಥಪಕ ಕೆ.ಅನಂತ ರಾವ್, ಸಮುದಾಯ ಸಂಘಟಿಕ ಬಸವರಾಜ ಹಾಗೂ ಅಂಗನವಾಡಿ ಮೇಲ್ವಿಚಾರಕಿ ಜಹಿರಾ ಬೇಗಂ ಹಾಜರಿದ್ದರು. ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು ಜಾಥಾದಲ್ಲಿ ಭಾಗವಹಿಸಿದ್ದರು.