ಮೂವರು ನಾಯಕರು ಮತ್ತು ಮೂವರು ನಾಯಕಿಯರ ನಡುವೆ ಐವರು ಸೈಕೋಗಳು ಎಂಟ್ರಿ ಕೊಟ್ಟಾಗ ಏನೆಲ್ಲಾ ಆಯಿತು ಎನ್ನುವ ಕಥೆಯನ್ನು ಸಸ್ಪೆನ್ಸ್ ಮತ್ತು ಥ್ರಿಲ್ಲರ್ ಜಾಡಿನಲ್ಲಿ ಹೇಳ ಹೊರಟಿದ್ದಾರೆ ನಿರ್ದೇಶಕ ರಾಜೀವ್ ಕೃಷ್ಣ. ಈ ಚಿತ್ರದ ಮೊದಲ ಹಂತದ ಚಿತ್ರೀಕರಣ ಪೂರ್ಣಗೊಂಡಿದ್ದು, ಎರಡನೇ ಹಂತದ ಚಿತ್ರೀಕರಣಕ್ಕೆ ಸಜ್ಜಾಗುತ್ತಿದೆ ಚಿತ್ರತಂಡ.
ಚಿಕ್ಕಬಳ್ಳಾಪುರ ಚಿಂತಾಮಣಿ, ನಂದಿ ಗಿರಿಧಾಮ ಮೊದಲಾದ ಸುಂದರ ತಾಣಗಳಲ್ಲಿ ಮೂದಲ ಹಂತದ ಚಿತ್ರೀಕರಣ ಮಗಿಸಿರುವ ಚಿತ್ರತಂಡ, ಎರಡನೇ ಹಂತದ ಚಿತ್ರೀಕರಣಕ್ಕಾಗಿ ಸವದತ್ತಿ, ಗಜೇಂದ್ರಗಡಕ್ಕೆ ಪ್ರಯಾಣ ಬೆಳಸಲಿದೆ.
ಟೆನ್ಟ್ರೀಸ್ ಫಿಲಂ ಪ್ರೊಡಕ್ಷನ್ ಹೌಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಅಂಜು ಚಿತ್ರದ ಮುಹೂರ್ತ ಚಿಂತಾಮಣಿಯ ಶ್ರೀಪ್ರಸನ್ನ ಆಂಜನೇಯಸ್ವಾಮಿ ದೇವಾಲಯದಲ್ಲಿ ಮುಹೂರ್ತ ಇತ್ತೀಚೆಗಷ್ಟೇ ನೆರವೇರಿತ್ತು. ‘ಖೇಲ್’ ಚಿತ್ರದ ನಿರ್ಮಾಪಕ ಮಾರ್ಕೆಟ್ ಸತೀಶ್ ಚಿತ್ರದ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿ ಚಿತ್ರೀಕರಣಕ್ಕೆ ಚಾಲನೆ ನೀಡಿದರೆ, ‘ಲೆಕ್ಕಾಚಾರ’ ಚಲನಚಿತ್ರದ ನಿರ್ಮಾಪಕ ಆರ್. ಚಂದ್ರು, ಕ್ಯಾಮೆರಾ ಸ್ವಿಚ್ಆನ್ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದರು.
ಬೆಂಗಳೂರಿನಿಂದ ಹೈದರಾಬಾದ್ಗೆ ಸಿನಿಮಾ ಆಡಿಷನ್ಗಾಗಿ ಮೂವರು ನಾಯಕ ನಟರು ಹಾಗೂ ಮೂವರು ನಾಯಕಿಯರು ಪ್ರಯಾಣ ಬೆಳೆಸುತ್ತಾರೆ. ಇವರ ನಡುವೆ ಐವರು ಸೈಕೋಗಳ ಪ್ರವೇಶದಿಂದಾಗಿ ಆ ಆರು ಮಂದಿ ಏನೆಲ್ಲ ತೊಂದರೆ ಅನುಭವಿಸುತ್ತಾರೆ ಮತ್ತು ಅವುಗಳಿಂದ ಪಾರಾಗಲು ಅವರು ಮುಂದೆ ಪಡುವ ಕಷ್ಟಗಳೇನು ಎಂಬುದು ಈ ಚಿತ್ರದ ಕಥಾಹಂದರ. ಇದನ್ನು ಅತ್ಯಂತ ಕುತೂಹಲಕರವಾಗಿ ಕಟ್ಟಿಕೊಡಲಾಗಿದೆ. ನಾಯಕಿಯರಾಗಿ ‘ಬಿಗ್ಬಾಸ್’ ಖ್ಯಾತಿಯ ಸೋನು ಪಾಟೀಲ್, ರಮ್ಯ, ಯಶಸ್ಸಿನಿ, ನಾಯಕ ನಟರಾಗಿ ಊಲಿಬೆಲೆ ರಾಜೇಶ್ರೆಡ್ಡಿ, ರಾಜ್ ಪ್ರತೀಕ್ ಹಾಗೂ ಸಿದ್ಧಾರ್ಥ ತೆರೆ ಹಂಚಿಕೊಂಡಿದ್ದಾರೆ. ಹಿರಿಯ ನಟ ಅಭಿಜಿತ್ ಹಾಗೂ ಜೂನಿಯರ್ ರವಿಚಂದ್ರನ್ ವಿಶೇಷ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.
ರಾಜೇಶ್ ಮುಂಡ್ಕೂರ್, ಆನಂದ್ ರಂಗ್ರೇಜ, ನರಸಾಪುರ ಭಕ್ತರಹಳ್ಳಿ ರವಿ, ರೇಣುಕಾ, ಜೀವನ್, ಶಿವು, ಅಬ್ದುಲ್ ರೆಹಮಾನ್ ತಾರಾಗಣದಲ್ಲಿದ್ದಾರೆ.
ಕಥೆ, ಚಿತ್ರಕಥೆ ರಾಜೇಶ್ ಕೃಷ್ಣ ಅವರದು. ವಿನು ಮನಸು ಅವರ ಸಂಗೀತ, ರಮೇಶ್ ಕೊಯಿರಾ ಛಾಯಾಗ್ರಹಣ, ಮಲ್ಲಿ ಸಂಕಲನ, ಸುರೇಶ್ ಕಂಬಳಿ ಸಾಹಿತ್ಯ, ಶಿವು ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.