ತೆಲುಗು ಚಿತ್ರರಂಗ ಮತ್ತು ನಟ ರಾಜಶೇಖರ್ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದ ‘ಅರ್ಜುನ’ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದ್ದರೂ ಚುನಾವಣೆಯ ಖೆಡ್ಡಾದಲ್ಲಿ ಬಿದ್ದಿದೆ.
ಸೆನ್ಸಾರ್ ಮಂಡಳಿ ಯು/ಎ ಪ್ರಮಾಣಪತ್ರವನ್ನೂ ನೀಡಿದ್ದು, ಚಿತ್ರ ಇನ್ನೇನು ಬಿಡುಗಡೆಯಾಗಬೇಕು ಎನ್ನುವಷ್ಟರಲ್ಲಿ ಬ್ರೇಕ್ ಬಿದ್ದಿರುವ ಕಾರಣ ಚುನಾವಣೆಯ ಬಳಿಕವೇ ತೆರೆಕಾಣಬೇಕಿದೆ.
ಇತ್ತೀಚೆಗಷ್ಟೇ ಚಲನಚಿತ್ರ ಕಲಾವಿದರ ಸಂಘದ ಅಧ್ಯಕ್ಷರ ಸ್ಥಾನಕ್ಕೆ ಚುನಾಯಿತರಾಗಿರುವ ರಾಜಶೇಖರ್ಗೆ ‘ಅರ್ಜುನ’ ಮಹತ್ವದ ಸಿನಿಮಾವಾಗಿತ್ತು. ಹಾಗಾಗಿ ವಿತರಕರಿಗಾಗಿ ವಿಶೇಷ ಪ್ರದರ್ಶನವನ್ನೂ ಏರ್ಪಡಿಸಿದ್ದರು.
ರಾಜಶೇಖರ್ ದ್ವಿಪಾತ್ರದಲ್ಲಿ ನಟಿಸಿರುವ ಚಿತ್ರವಿದು. ತಂದೆ ಮತ್ತು ಮಗನ ಪಾತ್ರದಲ್ಲಿ ಅವರು ಉತ್ತಮ ಅಭಿನಯ ನೀಡಿದ್ದಾರೆ ಎಂಬುದು ಪೂರ್ವಪ್ರದರ್ಶನ ನೋಡಿದವರ ಪ್ರಶಂಸೆ.
ಮರಿಯಮ್ ಜಕಾರಿಯಾ ಮತ್ತು ಸಾಕ್ಷಿ ಗುಲಾಟಿ ಈ ಚಿತ್ರದ ನಾಯಕಿಯರು. ಕಣ್ಮಣಿ ನಿರ್ದೇಶನದ ಈ ಚಿತ್ರಕ್ಕೆ ಬಂಡವಾಳ ಹೂಡಿರುವುದು ಹ್ಯಾಪಿ ಮೂವೀಸ್ ಬ್ಯಾನರ್. ವಂದೇಮಾತರಂ ಶ್ರೀನಿವಾಸ್ ಸಂಗೀತ ನೀಡಿದ್ದು, ಮಧು ನಾಯ್ಡು ಸಿನಿಮಾಟೊಗ್ರಾಫರ್ ಆಗಿ ದುಡಿದಿದ್ದಾರೆ.