ಬೆಂಗಳೂರು: ಮಿಟೂ ಒಂದು ಉತ್ತಮ ಆಂದೋಲನ. ಅದನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವುದು ನಾಚಿಕೆಗೇಡು ಎಂದು ನಟ, ನಿರ್ದೇಶನ ಅರ್ಜುನ್ ಸರ್ಜಾ ಅಭಿಪ್ರಾಯ ಪಟ್ಟರು.
ವಿಸ್ಮಯ ಸಿನಿಮಾದ ಪ್ರಣಯ ದೃಶ್ಯಗಳ ಚಿತ್ರೀಕರಣದ ವೇಳೆ ಅರ್ಜುನ್ ಸರ್ಜಾ ಇರುಸುಮುರುಸಾಗುವಂತೆ ನಡೆದುಕೊಂಡಿದ್ದಾರೆ ಎಂದು ನಟಿ ಶ್ರುತಿ ಹರಿಹರನ್ ಸುಧಾ ವಾರಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದರು. ತಮ್ಮ ಫೇಸ್ಬುಕ್ ಖಾತೆಯಲ್ಲಿಯೂ ಮಿಟೂ ಅನುಭವಗಳನ್ನು ಬರೆದುಕೊಂಡಿದ್ದಾರೆ. ಈ ಸಂಬಂಧ ಖಾಸಗಿ ಮಾಧ್ಯಮಕ್ಕೆ ಪ್ರತಿಕ್ರಿಯಿಸಿರುವ ಅರ್ಜುನ್ ಸರ್ಜಾ, ಕಾನೂನು ಹೋರಾಟ ನಡೆಸುವುದಾಗಿ ಹೇಳಿದ್ದಾರೆ.
’ಮಿಟೂ ಹುಲಿಬಂತು ಹುಲಿ ಕಥೆಯಾಗಬಾರದು. ಇದರಿಂದ ನಿಜವಾದ ಸಂತ್ರಸ್ತಿರಿಗೆ, ತೊಂದರೆ ಅನುಭವಿಸುತ್ತಿರುವವರಿಗೆ ಸಹಕಾರಿಯಾಗಬೇಕು. ಈ ಆರೋಪ ಕೇಳಿನಗಬೇಕೋ, ಶಾಕ್ ಆಗಬೇಕಾ ತಿಳಿಯುತ್ತಿಲ್ಲ. ಇದು ನನ್ನ ವೃತ್ತಿ ಬದುಕಿನಲ್ಲಿ ಕಪ್ಪು ಚುಕ್ಕಿಯಂತಾಗಿದೆ. ಇಂಥದ್ದು ಬರುತ್ತಿರುತ್ತವೆ....ಆದರೆ, ನನ್ನ ಬಗ್ಗೆ ಸಮಾಜದಲ್ಲಿ ಒಳ್ಳೇ ಭಾವನೆ ಇಟ್ಟುಕೊಂಡಿರುವವರು ಬಹಳಷ್ಟು ಜನರು ಇರುತ್ತಾರೆ. ಅವರಿಗೆ ಉತ್ತರ ಕೊಡಬೇಕಾಗುತ್ತದೆ. ಈ ಹುಡುಗಿ ನನ್ನ ಮೇಲೆ ಇಂಥ ಆರೋಪ ಮಾಡಿದ್ದಾರೆ ಎಂದು ನಂಬಲೂ ಸಾಧ್ಯವಾಗುತ್ತಿಲ್ಲ’ ಎಂದರು.
ಶ್ರುತಿ ಆರೋಪಗಳೇನು? ಇಲ್ಲಿದೆ ವಿವರ
ಅರ್ಜುನ್ ಸರ್ಜಾ ಮಾತು
ಚಿತ್ರದಲ್ಲಿ ಅವರೊಂದಿಗೆ 4–5 ದಿನಗಳ ಚಿತ್ರೀಕರಣ. ನಾನು ನಿರ್ದೇಶಕರೂ ಆಗಿರುವುದರಿಂದ ಇಂಪ್ರುವೈಷೇನನ್ ಮಾಡುತ್ತೇನೆ. ಆದರೆ, ಮಹಿಳೆಯನ್ನು ಮುಟ್ಟಬೇಕು ಎಂದುಕೊಂಡುಅದಕ್ಕಾಗಿಯೇ ಪ್ರಯತ್ನಿಸಿದ್ದೇನೆ ಎಂಬುದು ಸುಳ್ಳು. ಮೀಟೂ ಬಗ್ಗೆ ಗೌರವವಿದೆ. ಯಾವುದೇ ಹೆಣ್ಣಿಗೂ ತೊಂದರೆ ಆಗುವಂತೆ ಮಾಡಿಲ್ಲ ಮಾಡುವುದಿಲ್ಲ. ಮಿಟೂ ಆಂದೋಲವನ್ನು ಒಳ್ಳೆಯದಕ್ಕೆ ಬಳಕೆ ಮಾಡಿಕೊಳ್ಳಬೇಕೆ ಹೊರತು., ಯಾರೋ ಬಂದು ಯಾರ ಇನ್ಯಾರಮೇಲೋ ಆರೋಪಿಸುವುದು ಸರಿಯಲ್ಲ. ಇಂಥದರಿಂದ ಆಂದೋಲದ ಘನತೆಗೆ ಧಕ್ಕೆಯಾಗುತ್ತದೆ.
ಈ ಆರೋಪದ ಬಗ್ಗೆ ನಾನು ಕೇಸ್ ಫೈಲ್ ಮಾಡುತ್ತೇನೆ. ಒಂದೂವರೆ ವರ್ಷ ಆಗಿರಬಹುದು ಸಿನಿಮಾ ಚಿತ್ರೀಕರಣ ಆಗಿ. ಈ ಹುಡುಗಿ ಚೆನ್ನಾಗಿ ಆಕ್ಟ್ ಮಾಡುತ್ತಾರಲ್ಲ.. ಕನ್ನಡ ಚೆನ್ನಾಗಿ ಮಾತಾಡ್ತಾರೆ, ಉತ್ತಮ ನಟನೇ ಮಾಡುತ್ತಾರೆ ಎಂದಷ್ಟೇ ಮಾತನಾಡಿದ್ದೆ. ಸುಮ್ಮನೆ ಮೈಮುಟ್ಟುವುದು ಅವೆಲ್ಲ ನನಗೆ ಬೇಡದ ಸಂಗತಿ.150 ಸಿನಿಮಾಗಳಲ್ಲಿ 50–60 ನಟಿಯರು ನನ್ನೊಂದಿಗೆ ನಟಿಸಿದ್ದಾರೆ. ಇಷ್ಟು ವರ್ಷದ ನಂತರ ಈ ರೀತಿಯ ಒಂದು ಆರೋಪ ಬಂದಿದೆ.ಒಬ್ಬರ ಮೈಯನ್ನುಸುಮ್ಮನೆ ಮುಟ್ಟುವುದು ಎಂದರೇ ಏನು? ಹಾಗೇನಾದರೂ ಆಗಿದ್ದರೆಆಗಲೇ ಪ್ರತಿಭಟಿಸಬೇಕಿತ್ತು. ಯಾರಾದರೆ ಏನು– ’ಕಿಂಗ್ ಈಸ್ ಅಂಡರ್ ಲಾ’ ಎನ್ನುವಂತೆ ಯಾರೇ ಆದರೂ ಅವರ ವಿರುದ್ಧ ಪ್ರತಿಭಟಿಸಬೇಕಿತ್ತು. ಇದು ಹೀಗೆಯೇ ಮುಂದುವರಿದರೆ ಸರಿಯಾಗುವುದಿಲ್ಲ.
ಇಡೀ ಭಾರತದಲ್ಲಿ ನಾಲ್ಕು ಭಾಷೆಗಳಲ್ಲಿ ನನಗೆ ಗೊತ್ತಿರುವವರು ಇದ್ದಾರೆ. ಇದನ್ನು ಸುಮ್ಮನೆ ಬಿಟ್ಟು ಸಾಗಬೇಕು ಅನಿಸುತ್ತೆ. ಆದರೆ, ಈಗ ಕಾಲ ಬದಲಾಗಿದೆ. ಸುಮ್ಮನೆ ಇದ್ದರೆ; ಕೆಲವರು ನನ್ನದೇ ತಪ್ಪು ಎಂದು ತಿಳಿಯುತ್ತಾರೆ. ಅವರಿಗಾಗಿ ಮಾತನಾಡುತ್ತಿದ್ದೇನೆ. ವಿಸ್ಮಯ ಸಿನಿಮಾದಲ್ಲಿ ಇದ್ದದ್ದು ಚಿಕ್ಕ ಇಂಟಿಮೇಟ್ ಸೀನ್ ಅಷ್ಟೇ; ಡೈಲಾಗ್ ಇಂಪ್ರುವೈಸೇನ್ ಮಾತ್ರ ಮಾಡಿದ್ದು. ಚಿತ್ರೀಕರಣ ಪ್ರಾರಂಭಕ್ಕೂ ಮುನ್ನ ನಿರ್ದೇಶಕರು ಕಥೆ ಹೇಳಿದಾಗಲೇ ಎಷ್ಟೋ ದೃಶ್ಯಗಳನ್ನು ಬೇಡ ಎಂದಿದ್ದೆ.ಪ್ರಣಯದ ದೃಶ್ಯಗಳನ್ನು ತೆಗೆದರೇ ನಾನು ಸಿನಿಮಾ ಮಾಡುತ್ತೇನೆ ಎಂದಿದ್ದೆ. ಗಂಡ–ಹೆಂಡತಿ ಎಂಬ ಕಾರಣಕ್ಕೆ ಕೆಲವಷ್ಟೇ ಇಟ್ಟುಕೊಂಡೆ. ಕಥೆಗೆ ಸಂಬಂಧ ಇಲ್ಲದಂಥ ದೃಶ್ಯಗಳು ಸಿನಿಮಾಗೆ ಬೇಕಾಗಿಲ್ಲ ಎಂದು ನಿರ್ದೇಶಕರಿಗೆ ಹೇಳಿದ್ದೆ.
ಸಂದರ್ಭವನ್ನು ಬಳಸಿಕೊಂಡು ಹುಡುಗಿಯನ್ನು ಇಟ್ಟುಕೊಳ್ಳುವ ದುರ್ಬುದ್ಧಿ, ನೀಚ ಬುದ್ಧಿ ನನಗಿಲ್ಲ.ಅಂಥ ಸೀನ್ ಮಾಡುವುದಿಲ್ಲ ಎಂಬುದು ನನ್ನ ಕಿವಿಗೆ ಬಿದ್ದಿದ್ದರೆ ಆ ಸೀನನ್ನೇ ತೆಗೆಸಿ ಹಾಕಿಬಿಡುತ್ತಿತ್ತೆ. ಮುಜುಗರ ಹೆಣ್ಣಿಗೆ ಮಾತ್ರವೇ ಇರುತ್ತದೆಯೇ, ಗಂಡಸರಿಗೆ ಇರುವುದಿಲ್ಲವೇ?ಹುಡುಗಿಯರು ಈಥರ ಇರುತ್ತಾರೆಯೇ? ನನ್ನ ಮೇಲೆಯೇ ಏಕೆ ಆರೋಪ ಮಾಡುತ್ತಿದ್ದಾರೆ. ಈ ಹುಡುಗಿ ಆತ್ಮಸಾಕ್ಷಿಯಾಗಿ ಇದನ್ನೆಲ್ಲ ಹೇಳಿರಲು ಸಾಧ್ಯವಿಲ್ಲ. ಈ ರೀತಿಯ ಆಂದೋಲವನ್ನು ದುರುಪಯೋಗ ಪಡಿಸಿಕೊಳ್ಳಬೇಡಿ.ನನ್ನ ಕೆಲಸಗಳೇ ಬಹಳಷ್ಟು ಇರುತ್ತದೆ. ಒಂದು ಕ್ಷಣವೂ ಪುರುಸೊತ್ತು ಇರುವುದಿಲ್ಲ.
ಎಷ್ಟೋ ಬಡ, ಅನಾಥ ಮಕ್ಕಳ ಮೇಲೆ ದೌರ್ಜನ್ಯ ನಡೆಯುತ್ತಿದೆ. ಇದಕ್ಕಾಗಿ ಏನಾದರೂ ಮಾಡಿ. ಯಾರೋ ತಬ್ಬಿಕೊಳ್ಳಲು ಬಂದರು ಎಂಬುದರಿಂದ ಏನು ಸಾಧಿಸುತ್ತೀರಿ. ರಿಹರ್ಸಲ್ ಮಾಡಿದರೇ ತಪ್ಪು ಎಂದರೆ, ಸಿನಿಮಾ ಮಾಡಲೂ ಸಾಧ್ಯವಿಲ್ಲ. ನನ್ನ ಮಗಳನ್ನೂ ಸಿನಿಮಾ ಚಿತ್ರೀಕರಣಗಳಲ್ಲಿ ಕರೆದುಕೊಂಡು ಹೋಗಿದ್ದೇನೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.