‘ದೃಶ್ಯ’ ಚಿತ್ರದಲ್ಲಿ ರವಿಚಂದ್ರನ್ ಮಗಳ ಪಾತ್ರದಲ್ಲಿ ನಟಿಸುವ ಮೂಲಕ ಬೆಳ್ಳಿತೆರೆಗೆ ಕಾಲಿಟ್ಟ ಹುಡುಗಿ ಆರೋಹಿ ನಾರಾಯಣ. ನಂತರ ಕೆಲವು ಕಾಲ ಇವರು ತೆರೆಯ ಮೇಲೆ ಕಾಣಿಸಿಕೊಂಡಿರಲಿಲ್ಲ. ‘ಭೀಮಸೇನ ನಳಮಹರಾಜ’ ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸುವುದರೊಂದಿಗೆ ಮತ್ತೆ ನಟನೆಗೆ ಮರಳಿದ್ದರು. ಆ ಚಿತ್ರ ಮುಗಿಯುತ್ತಿದ್ದ ಹಾಗೆಯೇ ಆರೋಹಿ ಇನ್ನೊಂದು ಚಿತ್ರಕ್ಕೆ ಸಹಿ ಮಾಡಿದ್ದಾರೆ.
ಆಕಾಶ್ ಶ್ರೀವತ್ಸ ನಿರ್ದೇಶಿಸುತ್ತಿರುವ ಚಿತ್ರದ ಮುಖ್ಯಪಾತ್ರವೊಂದಕ್ಕೆ ಅವರು ಆಯ್ಕೆಯಾಗಿದ್ದಾರೆ. ರಮೇಶ್ ಅರವಿಂದ್ ಚಿತ್ರದ ನಾಯಕ. ರಾಧಿಕಾ ಚೇತನ್ ಕೂಡ ಇನ್ನೊಂದು ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇನ್ನೂ ಹೆಸರಿಡದ ಈ ಚಿತ್ರದಲ್ಲಿ ಆರೋಹಿ ಮನಃಶಾಸ್ತ್ರಜ್ಞೆಯಾಗಿ ನಟಿಸುತ್ತಿರುವುದು ವಿಶೇಷ. ರಮೇಶ್ ಅರವಿಂದ್ ಮತ್ತು ರಾಧಿಕಾ ಚೇತನ್ ಇಬ್ಬರ ಜತೆಗೂ ತೆರೆಯನ್ನು ಹಂಚಿಕೊಳ್ಳುವ ಪಾತ್ರ ಅವರದಂತೆ.
ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ಆಗಿದ್ದು, ರಮೇಶ್ ಅರವಿಂದ ಅವರು ವಿಭಿನ್ನವಾದ ಲುಕ್ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಆಕಾಶ್ ಮತ್ತು ಅಭಿಜಿತ್ ವೈ.ಆರ್. ಈ ಚಿತ್ರದ ಕಥೆ ಬರೆದಿದ್ದಾರೆ. ಜ್ಯೂಡಾ ಸ್ಯಾಂಡಿ ಸಂಗೀತ ಸಂಯೋಜನೆ ಮಾಡಲಿದ್ದಾರೆ.
ಉಳಿದ ಪಾತ್ರಗಳಲ್ಲಿ ಯಾರು ಕಾಣಿಸಿಕೊಳ್ಳಲಿದ್ದಾರೆ ಎಂಬ ವಿಷಯವನ್ನು ಚಿತ್ರತಂಡ ಇನ್ನೂ ಬಿಟ್ಟುಕೊಟ್ಟಿಲ್ಲ. ಜನವರಿಯಲ್ಲಿ ಚಿತ್ರಕಥೆಯ ಕೆಲಸ ಪೂರ್ತಿಗೊಳಿಸಿ ಲೊಕೆಶನ್ ಹುಡುಕಾಟಕ್ಕಾಗಿ ಹೊರಡುವ ಯೋಜನೆಯಲ್ಲಿ ಆಕಾಶ್ ಇದ್ದಾರೆ.