ಮುಂಬೈ: ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆಆರ್ಯನ್ ಖಾನ್ ಅವರು ಪ್ರತಿ ವಾರ ಎನ್ಸಿಬಿ ಕಚೇರಿಗೆ ತೆರಳಿ ಸಹಿ ಹಾಕುವ ಅವಶ್ಯಕತೆ ಇಲ್ಲವೆಂದು ಬಾಂಬೆ ಹೈಕೋರ್ಟ್ ಹೇಳಿದೆ.
ಐಷಾರಾಮಿ ಹಡಗಿನಲ್ಲಿ ಡ್ರಗ್ಸ್ ಪಾರ್ಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್ಯನ್ ಖಾನ್ ಅವರು ಪ್ರತಿ ಶುಕ್ರವಾರ ಎನ್ಸಿಬಿ ಕಚೇರಿಗೆ ತೆರಳಿ ಸಹಿ ಹಾಕಬೇಕಿತ್ತು. ಈ ಷರತ್ತಿನಿಂದ ಬಿಡುಗಡೆ ಮಾಡುವಂತೆ ಬಾಂಬೆ ಹೈಕೋರ್ಟ್ಗೆ ಆರ್ಯನ್ ಖಾನ್ ಮನವಿ ಸಲ್ಲಿಸಿದ್ದರು.
‘ಆರ್ಯನ್ ಅವರು ಪ್ರತಿ ವಾರ ಎನ್ಸಿಬಿ ಕಚೇರಿಗೆ ಹಾಜರಾಗುವ ಅವಶ್ಯಕತೆ ಇಲ್ಲ. ಆದರೆ, ದೆಹಲಿಯ ವಿಶೇಷ ತನಿಖಾ ತಂಡವು ಆರ್ಯನ್ಗೆ ಸಮನ್ಸ್ ನೀಡಿದಾಗಲೆಲ್ಲಾ ಅವರು ದೆಹಲಿ ಕಚೇರಿಗೆ ಹಾಜರಾಗಬೇಕು‘ ಎಂದು ನ್ಯಾಯಾಲಯ ಹೇಳಿದೆ.
ಮುಂಬೈ ಕರಾವಳಿಯಲ್ಲಿ ಐಷಾರಾಮಿ ಹಡಗಿನ ಮೇಲೆ ದಾಳಿ ನಡೆಸಿದ ನಂತರ ಅಕ್ಟೋಬರ್ 3 ರಂದು ಆರ್ಯನ್ ಖಾನ್ ಅವರನ್ನು ಎನ್ಸಿಬಿ ಬಂಧಿಸಿತ್ತು.22 ದಿನಗಳ ಬಳಿಕ ಅಕ್ಟೋಬರ್ 30ರಂದು ಜೈಲಿನಿಂದ ಅವರನ್ನು ಬಿಡುಗಡೆ ಮಾಡಲಾಗಿತ್ತು.