ಚಾಮರಾಜನಗರ: ರಮೇಶ್ ರೆಡ್ಡಿ, ಪ್ರಸಿದ್ಧ್ ಸಿನಿಮಾಸ್ ಸಂಸ್ಥೆ ನಿರ್ಮಿಸುತ್ತಿರುವ, ಪ್ರಸಿದ್ಧ್ ಅವರು ನಿರ್ದೇಶಿಸುತ್ತಿರುವ ‘ಬಹದ್ದೂರು ಗಂಡು’ ಚಲನಚಿತ್ರ ಚಿತ್ರೀಕರಣಕ್ಕೆ ಸೋಮವಾರ ನಗರದ ಚಾಮರಾಜೇಶ್ವರ ದೇವಾಲಯದಲ್ಲಿ ಚಾಲನೆ ದೊರೆಯಿತು.
ನಿರ್ಮಾಪಕ ರಮೇಶ್ ರೆಡ್ಡಿ ಅವರು ಕ್ಲಾಪ್ ಮಾಡಿದರೆ, ಡಿವೈಎಸ್ಪಿ ಪ್ರಿಯದರ್ಶಿನಿ ಸಾಣೆಕೊಪ್ಪ ಅವರು ಕ್ಯಾಮೆರಾಗೆ ಚಾಲನೆ ನೀಡಿ ಶುಭಾಶಯ ಕೋರಿದರು.
ಕಿರುತೆರೆಯ ನಟ ಕಿರಣ್ರಾಜ್ ಅವರು ನಾಯಕರಾಗಿ ನಟಿಸುತ್ತಿರುವ ಚಿತ್ರದಲ್ಲಿ, ಯಶ ಶಿವಕುಮಾರ್ ಅವರು ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ.
ಗ್ರಾಮೀಣ ಸೊಗಡಿನ ಕಥಾಹಂದರವುಳ್ಳ ಚಿತ್ರದ ಬಹುಪಾಲು ಚಿತ್ರೀಕರಣಚಾಮರಾಜನಗರದ ಜಿಲ್ಲೆಯ ವಿವಿಧ ಕಡೆಗಳಲ್ಲಿ ನಡೆಯಲಿದೆ. 30 ದಿನಗಳ ಕಾಲ ಚಿತ್ರೀಕರಣ ನಡೆಸಲು ಚಿತ್ರತಂಡ ಸಿದ್ಧತೆ ನಡೆಸಿದೆ. ಚಾಮರಾಜೇಶ್ವರ ದೇವಾಲಯದಲ್ಲಿ ಒಂಬತ್ತು ದಿನಗಳ ಕಾಲ ಚಿತ್ರೀಕರಣ ನಡೆಯಲಿದೆ. ಉಳಿದಂತೆ ಸತ್ತೇಗಾಲ, ಯಳಂದೂರು, ವಡ್ಡಗೆರೆ ಸೇರಿದಂತೆ ಹಲವು ಕಡೆಗಳಲ್ಲಿ ಚಿತ್ರೀಕರಣ ನಡೆಯಲಿದೆ.
ಮಳವಳ್ಳಿ ಸಾಯಿಕೃಷ್ಣ ಚಿತ್ರಕ್ಕೆ ಸಂಭಾಷಣೆ ಬರೆದಿದ್ದಾರೆ. ಚಾಮರಾಜನಗರದವರೇ ಆದ ಕಿಟ್ಟಿ ಕೌಶಿಕ್ ಛಾಯಾಗ್ರಹಣದ ಹೊಣೆ ಹೊತ್ತಿದ್ದಾರೆ. ಗುಮ್ಮಿನೇನಿ ವಿಜಯ್ಬಾಬು ಅವರು ಸಂಗೀತ ನೀಡಲಿದ್ದಾರೆ.