ಮುಂಬೈ: ಬಾಲಿವುಡ್ ನಟ ಸಲ್ಮಾನ್ ಖಾನ್ ಅಭಿನಯದ ಹಿಟ್ ಚಿತ್ರ ಭಜರಂಗಿ ಭಾಯಿಜಾನ್ ಎರಡನೇ ಭಾಗ ನಿರ್ಮಾಣವಾಗಲಿದೆ.
ಇದನ್ನು ಸ್ವತಃ ಸಲ್ಮಾನ್ ಖಾನ್ ಖಚಿತಪಡಿಸಿದ್ದಾರೆ. ಈ ಕುರಿತು ಎಸ್.ಎಸ್. ರಾಜಮೌಳಿ ನಿರ್ದೇಶನದ ಬಹುನಿರೀಕ್ಷಿತ 'ಆರ್ಆರ್ಆರ್' ಚಿತ್ರದ ವಿಶೇಷ ಕಾರ್ಯಕ್ರಮದಲ್ಲಿ ಸಲ್ಮಾನ್ ಖಾನ್ ಭಜರಂಗಿ ಭಾಯಿಜಾನ್ ಚಿತ್ರದ ಎರಡನೇ ಭಾಗ ನಿರ್ಮಿಸುವ ಕುರಿತು ಘೋಷಣೆ ಮಾಡಿದರು.
'ರಾಜಮೌಳಿ ಮತ್ತು ಅವರ ತಂದೆ, ಕಥೆಗಾರ ಕೆ.ವೈ. ವಿಜಯೇಂದ್ರ ಪ್ರಸಾದ್ ಅವರೊಂದಿಗೆ ನನಗೆ ಉತ್ತಮ ಬಾಂಧವ್ಯವಿದೆ. ಶೀಘ್ರದಲ್ಲೇ ಭಜರಂಗಿ ಭಾಯಿಜಾನ್-2 ಚಿತ್ರದ ಕೆಲಸವನ್ನು ಪ್ರಾರಂಭಿಸಲಿದ್ದೇವೆ' ಎಂದು ತಿಳಿಸಿದ್ದಾರೆ.
ಕಬೀರ್ ಖಾನ್ ನಿರ್ದೇಶನದ ಭಜರಂಗಿ ಭಾಯಿಜಾನ್ 2015ರಲ್ಲಿ ತೆರೆ ಕಂಡಿತ್ತು.ಆಂಜನೇಯ ಭಕ್ತನಾದ ಪವನ್ ಕುಮಾರ್ ಚತುರ್ವೇದಿ ಪಾತ್ರದಲ್ಲಿ ಸಲ್ಮಾನ್ ಖಾನ್ ನಟಿಸಿದ್ದರು.
ಭಾರತ ಹಾಗೂ ಪಾಕಿಸ್ತಾನ ನಡುವಣ ಉತ್ತಮ ಸಂಬಂಧದ ಕತೆಯನ್ನು ಈ ಚಿತ್ರ ಒಳಗೊಂಡಿದೆ. ಭಾರತದಲ್ಲಿ ತನ್ನ ಪೋಷಕರಿಂದ ಬೇರ್ಪಟ್ಟ ಆರು ವರ್ಷದ ಮೂಕ ಪಾಕಿಸ್ತಾನಿ ಮುಸ್ಲಿಂ ಹುಡುಗಿಯನ್ನು ಪಾಕಿಸ್ತಾನದ ಅವಳ ಸ್ವಂತ ಊರಿಗೆ ವಾಪಸ್ ಕರೆದೊಯ್ಯುವ ಕಥಾ ಹಂದರವನ್ನು ಹೊಂದಿದೆ.
ಈಗ ಎರಡನೇ ಭಾಗವನ್ನು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.
ಏತನ್ಮಧ್ಯೆ ಆರ್ಆರ್ಆರ್ ಚಿತ್ರವು 2022 ಜನವರಿ 7ರಂದು ಬಿಡುಗಡೆಯಾಗಲಿದ್ದು, ಜೂನಿಯರ್ ಎನ್ಟಿಆರ್, ರಾಮ್ಚರಣ್, ಆಲಿಯಾ ಭಟ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.