ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂತರರಾಷ್ಟ್ರೀಯ ಚಲನಚಿತ್ರೋತ್ಸವ | ಮೊದಲ ಪ್ರಶಸ್ತಿಗೆ ₹10 ಲಕ್ಷ ನಗದು: ಶಿಫಾರಸು

Last Updated 14 ಮಾರ್ಚ್ 2023, 15:29 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿ ಪಡೆಯುವ ಸಿನಿಮಾಗಳಿಗೆ ನೀಡುತ್ತಿದ್ದ ನಗದು ಬಹುಮಾನ ಮೂರು ಪಟ್ಟು ಹೆಚ್ಚಳವಾಗಲಿದೆ. ‘ಮೊದಲ ಅತ್ಯುತ್ತಮ ಸಿನಿಮಾ ಪ್ರಶಸ್ತಿ ಪಡೆವ ಚಿತ್ರಕ್ಕೆ ನೀಡುತ್ತಿದ್ದ ನಗದು ಬಹುಮಾನವನ್ನು ₹3 ಲಕ್ಷದಿಂದ ₹10 ಲಕ್ಷಕ್ಕೆ ಏರಿಕೆ ಮಾಡಲು ಅಕಾಡೆಮಿ ಶಿಫಾರಸು ಮಾಡಿದ್ದು, ಇನ್ನೆರಡು ದಿನಗಳಲ್ಲಿ ಆದೇಶ ಬರಲಿದೆ’ ಎಂದು ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಅಶೋಕ್‌ ಕಶ್ಯಪ್‌ ತಿಳಿಸಿದ್ದಾರೆ.

ಮಾರ್ಚ್‌ 23ರಿಂದ ಆರಂಭವಾಗಲಿರುವ 14ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ಕುರಿತು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ‘ಏಷಿಯನ್‌, ಭಾರತೀಯ ಹಾಗೂ ಕನ್ನಡ ಸಿನಿಮಾ ಹೀಗೆ ಮೂರು ವಿಭಾಗಗಳಲ್ಲಿ ಮೊದಲ, ಎರಡನೇ ಮತ್ತು ಮೂರನೇ ಅತ್ಯುತ್ತಮ ಸಿನಿಮಾ ಪ್ರಶಸ್ತಿ ಪಡೆಯುವ ಚಿತ್ರಕ್ಕೆ ಕ್ರಮವಾಗಿ ₹10, ₹5 ಹಾಗೂ ₹3 ಲಕ್ಷ ನಗದು ಬಹುಮಾನವಿರಲಿದೆ. ವಿಧಾನಸೌಧದ ಪೂರ್ವದ್ವಾರದ ಮೆಟ್ಟಿಲುಗಳ ಮೇಲೆ ಮಾರ್ಚ್‌ 23ರಂದು ಸಂಜೆ 6 ಗಂಟೆಗೆ ಚಿತ್ರೋತ್ಸವದ ಉದ್ಘಾಟನೆಯಾಗಲಿದೆ. ಭಾಗವಹಿಸುವ ಅತಿಥಿಗಳ ಪಟ್ಟಿ ಇನ್ನಷ್ಟೇ ಅಂತಿಮವಾಗಬೇಕಿದೆ’ ಎಂದರು.

‘ಖ್ಯಾತ ಸಿನಿಮಾಟೊಗ್ರಾಫರ್‌ ವಿ.ಕೆ.ಮೂರ್ತಿ ಅವರ ಜನ್ಮಶತಮಾನೋತ್ಸವದ ಹಿನ್ನೆಲೆಯಲ್ಲಿ 14ನೇ ಆವೃತ್ತಿಯನ್ನು ಅವರಿಗೆ ಅರ್ಪಿಸಲಾಗಿದೆ. ಅವರ ನಾಲ್ಕು ಸಿನಿಮಾಗಳ ಪ್ರದರ್ಶನವಿರಲಿದೆ. ಕನ್ನಡ ಸಿನಿಮಾ ಸ್ಪರ್ಧಾ ವಿಭಾಗಕ್ಕೆ 108 ಸಿನಿಮಾಗಳು ಬಂದಿದ್ದು, ಗುರುವಾರ ಅಂತಿಮ ಸುತ್ತಿಗೆ ಆಯ್ಕೆಯಾದ 12 ಸಿನಿಮಾಗಳ ಪಟ್ಟಿಯನ್ನು ಚಿತ್ರೋತ್ಸವದ ವೆಬ್‌ಸೈಟ್‌ನಲ್ಲಿ ಪ್ರಕಟಿಸುತ್ತೇವೆ’ ಎಂದರು.

ಇತ್ತೀಚೆಗೆ ನಡೆದ 95ನೇ ಅಕಾಡೆಮಿ(ಆಸ್ಕರ್‌) ಪ್ರಶಸ್ತಿಯಲ್ಲಿ ಅತ್ಯುತ್ತಮ ಚಿತ್ರ ಪ್ರಶಸ್ತಿಯ ಜೊತೆಗೆ ವಿವಿಧ ವಿಭಾಗಗಳಲ್ಲಿ ಏಳು ಆಸ್ಕರ್‌ ಪ್ರಶಸ್ತಿಗಳನ್ನು ಬಾಚಿದ ‘ಎವ್ರಿಥಿಂಗ್‌ ಎವ್ರಿವೇರ್‌ ಆಲ್‌ ಆ್ಯಟ್‌ ಒನ್ಸ್‌’ ಸಿನಿಮಾ ಸೇರಿದಂತೆ ವಿಶ್ವದ ಪ್ರಮುಖ 61 ಸಿನಿಮಾಗಳು ಬೆಂಗಳೂರು ಚಿತ್ರೋತ್ಸವದಲ್ಲಿ ಪ್ರದರ್ಶನ ಕಾಣಲಿವೆ. ಈ ಪೈಕಿ ದಕ್ಷಿಣ ಕೊರಿಯಾದ ಏಳು ಸಿನಿಮಾಗಳು ಇರುವುದು ವಿಶೇಷ. ಜೊತೆಗೆ ಭಾರತೀಯ ಸಿನಿಮಾ ಇತಿಹಾಸದ ಪ್ರಮುಖ ಸಿನಿಮಾಗಳ ಪ್ರದರ್ಶನವೂ ಇರಲಿದ್ದು, ಈ ಪೈಕಿ ಕನ್ನಡದ ‘ಬಂಗಾರದ ಮನುಷ್ಯ’, ‘ಕಸ್ತೂರಿ ನಿವಾಸ’, ಬೂತಯ್ಯನ ಮಗ ಅಯ್ಯು’, ‘ಜನುಮದ ಜೋಡಿ’, ‘ಅಮೆರಿಕ ಅಮೆರಿಕ’ ಸೇರಿದಂತೆ ಆರೇಳು ಸಿನಿಮಾಗಳನ್ನು ವೀಕ್ಷಕರು ಮತ್ತೆ ಬೆಳ್ಳೆತೆರೆಯ ಮೇಲೆ ನೋಡಬಹುದಾಗಿದೆ. ಚಿತ್ರೋತ್ಸವದಲ್ಲಿ ಬಾಕ್ಸ್‌ ಆಫೀಸ್‌ನಲ್ಲಿ ಸದ್ದು ಮಾಡಿದ ಸಿನಿಮಾಗಳನ್ನೂ ಸೇರಿಸಿದಂತೆ ಒಟ್ಟು 35–40 ಕನ್ನಡ ಸಿನಿಮಾಗಳ ಪ್ರದರ್ಶನವಿರಲಿದೆ. ಒಟ್ಟು 50 ದೇಶಗಳ 200 ಅತ್ಯುತ್ತಮ ಚಲನಚಿತ್ರಗಳು 14ನೇ ಆವೃತ್ತಿಯಲ್ಲಿ ಪ್ರದರ್ಶನಗೊಳ್ಳಲಿವೆ.

‘ಮಾಸ್ಟರ್‌ಕ್ಲಾಸ್‌’ನಲ್ಲಿ ‘ಆರ್‌ಆರ್‌ಆರ್‌ ಚಿತ್ರಕಥೆ’ ಕುರಿತು ‘ಬಾಹುಬಲಿ’, ‘ಆರ್‌ಆರ್‌ಆರ್’ ಸಿನಿಮಾ ಚಿತ್ರಕಥೆಗಾರ ಕೆ.ವಿ. ವಿಜಯೇಂದ್ರ ಅವರ ಜೊತೆ ಸಂವಾದವಿರಲಿದೆ. ಜೊತೆಗೆ ಇರಾನ್‌ನ ಖ್ಯಾತ ನಿರ್ದೇಶಕ ಜಾಫರ್‌ ಪನಾಹಿ ಅವರ ಪುತ್ರ ಪನ್ಹಾ ಪನಾಹಿ ಅವರೂ ‘ಮಾಸ್ಟರ್‌ ಕ್ಲಾಸ್‌’ ತೆಗೆದುಕೊಳ್ಳಲಿದ್ದಾರೆ. ನಟ, ನಿರ್ದೇಶಕ ರಿಷಬ್‌ ಶೆಟ್ಟಿ ಹಾಗೂ ನಿರ್ಮಾಪಕ ವಿಜಯ್‌ ಕಿರಗಂದೂರು ಅವರೊಂದಿಗೆ ಸಂವಾದ ಕಾರ್ಯಕ್ರಮವೂ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT