‘83’ ಇದು ಸಿನಿಮಾದ ಟೈಟಲ್. ಕ್ರಿಕೆಟ್ ಜೀವಂತವಾಗಿರುವವರೆಗೆ ಈ ‘83’ ಅಂಕಿ ಮರೆಯಲು ಸಾಧ್ಯವೇ ಇಲ್ಲ.ಇದೊಂದು ಮಹತ್ವದ ಇತಿಹಾಸ.
1983ರ ವಿಶ್ವಕಪ್ ಕ್ರಿಕೆಟ್ ಟೂರ್ನಮೆಂಟ್ ಉಪಖಂಡದ ಕ್ರಿಕೆಟ್ ಪ್ರೇಮಿಗಳನ್ನು ಖುಷಿಯ ಉತ್ತುಂಗಕ್ಕೆ ತಂದು ನಿಲ್ಲಿಸಿತ್ತು. ಜಗತ್ತನ್ನೇ ನಿಬ್ಬೆರಗುಗೊಳಿಸಿತ್ತು ಆ ಕ್ಷಣ. ಆ ರೋಚಕ ಇತಿಹಾಸವನ್ನು ಬಾಲಿವುಡ್ ನಿರ್ದೇಶಕ ಕಬೀರ್ಖಾನ್ ಆಪ್ತವಾಗಿ ಕಟ್ಟಿಕೊಡಲಿದ್ದಾರೆ.
ವಿಶ್ವಕಪ್ ಅನ್ನು ದೇಶಕ್ಕೆ ಮೊತ್ತ ಮೊದಲ ಬಾರಿಗೆ ತಂದುಕೊಟ್ಟ ಕೀರ್ತಿ ಅಪ್ರತಿಮ ಆಲ್ರೌಂಡರ್ ಕಪಿಲ್ ದೇವ್ಗೆ ಸಲ್ಲಬೇಕು. ಅದರಲ್ಲಿ ಕನ್ನಡಿಗರಾದ ಸಯ್ಯದ್ ಕಿರ್ಮಾನಿ, ರೋಜರ್ ಬಿನ್ನಿ ಅವರ ಪಾತ್ರವೂ ನಿರ್ಣಾಯಕವಾಗಿತ್ತು.
ಕಪಿಲ್ ದೇವ್ ಸಮರ್ಥ ನಾಯಕತ್ವದಲ್ಲಿ ಭಾರತ ತಂಡ ವಿಶ್ವದ ಘಟಾನುಘಟಿ ತಂಡಗಳನ್ನು ಸೋಲಿಸಿ ವಿಶ್ವಕಪ್ ಎತ್ತಿ ಹಿಡಿದಿತ್ತು.ಭಾರತೀಯ ಕ್ರಿಕೆಟ್ ಶಕ್ತಿಯನ್ನು ವಿಶ್ವಕ್ಕೆ ತೋರಿಸಿದ ಐತಿಹಾಸಿಕ ಕ್ಷಣ ಅದಾಗಿತ್ತು. ಅಂದಿನಿಂದ ವಿಶ್ವ ಕ್ರಿಕೆಟ್ ಭೂಪಟದಲ್ಲಿ ಭಾರತ ಧ್ರುವತಾರೆಯಂತೆ ಕಂಗೊಳಿಸಲಾರಂಭಿಸಿತು. ಅದರ ಒಂದೊಂದು ರೋಚಕ ಕ್ಷಣವನ್ನು ಆಧರಿಸಿ ಈ ಚಿತ್ರ ನಿರ್ಮಾಣಗೊಳ್ಳುತ್ತಿದೆ.
ಕಪಿಲ್ ದೇವ್ ಪಾತ್ರವನ್ನು ರಣವೀರ್ ಸಿಂಗ್ ನಿಭಾಯಿಸುತ್ತಿದ್ದರೆ, ಹೆಸರಾಂತ ವಿಕೇಟ್ಕೀಪರ್ ಕರ್ನಾಟಕದ ಸಯ್ಯದ್ ಕಿರ್ಮಾನಿ ಪಾತ್ರವನ್ನು ಸಾಹಿಲ್ ಖಟ್ಟರ್, ಕೃಷ್ಣಮಾಚಾರಿ ಶ್ರೀಕಾಂತ್ ಪಾತ್ರವನ್ನು ಜೀವಾ,ದಿಲೀಪ್ ವೆಂಗಸರ್ಕರ್ ಪಾತ್ರವನ್ನು ಮರಾಠಿಯ ನಟ ಆದಿನಾಥ್ ಕೊಠಾರೊ ನಿಭಾಯಿಸುತ್ತಿದ್ದಾರೆ.
ಇಡೀ ಚಿತ್ರವನ್ನು ಅದರ ವಾಸ್ತವಿಕ ತಾಣಗಳಲ್ಲಿ ಶೂಟ್ ಮಾಡುವ ಯೋಜನೆ ಚಿತ್ರ ತಂಡಕ್ಕಿದೆ. ಚಿತ್ರದ ಪೂರ್ವ ಸಿದ್ಧತಾ ಕಾರ್ಯಗಳು ಭರದಿಂದ ಸಾಗುತ್ತಿವೆ. ಶೂಟಿಂಗ್ ಮುಂದಿನ ವರ್ಷದ ಆರಂಭದಲ್ಲಿ ಶುರುವಾಗಲಿದೆ ಎನ್ನುತ್ತವೆ ಮೂಲಗಳು. ಈ ಚಿತ್ರ ಹಿಂದಿಯ ಜೊತೆಗೆ ತಮಿಳು, ತೆಲುಗು ಭಾಷೆಯಲ್ಲಿಯೂ ನಿರ್ಮಾಣವಾಗಲಿದೆ.