ಮ್ಯೂಸಿಕ್ ಅಕಾಡೆಮಿಯ ‘ಸಂಗೀತ ಕಲಾನಿಧಿ’ ಪ್ರಶಸ್ತಿಗೆ ಬಾಂಬೆ ಜಯಶ್ರೀ ಆಯ್ಕೆ

ಚೆನ್ನೈ: ಇಲ್ಲಿನ ಮ್ಯೂಸಿಕ್ ಅಕಾಡೆಮಿ ನೀಡುವ ಪ್ರತಿಷ್ಠಿತ ‘ಸಂಗೀತ ಕಲಾನಿಧಿ’, ‘ನೃತ್ಯ ಕಲಾನಿಧಿ’, ‘ಸಂಗೀತ ಕಲಾ ಆಚಾರ್ಯ’ ಹಾಗೂ ಟಿಟಿಕೆ ಪ್ರಶಸ್ತಿಗಳನ್ನು ಭಾನುವಾರ ಪ್ರಕಟಿಸಲಾಗಿದೆ.
ಕರ್ನಾಟಕ ಶಾಸ್ತ್ರೀಯ ಗಾಯಕಿ ಬಾಂಬೆ ಜಯಶ್ರೀ ಅವರನ್ನು ‘ಸಂಗೀತ ಕಲಾನಿಧಿ’ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಖ್ಯಾತ ಭರತನಾಟ್ಯ ಹಾಗೂ ಕುಚಿಪುಡಿ ಕಲಾವಿದೆ ವಸಂತಲಕ್ಷ್ಮಿ ನರಸಿಂಹಾಚಾರಿ ಅವರನ್ನು ‘ನೃತ್ಯ ಕಲಾನಿಧಿ’ ಪ್ರಶಸ್ತಿಗೆ, ಪಾಲ್ಕುಳಂಗರ ಅಂಬಿಕಾದೇವಿ ಹಾಗೂ ಕೆ.ಎಸ್.ಕಾಳಿದಾಸ ಅವರನ್ನು ‘ಸಂಗೀತ ಕಲಾ ಆಚಾರ್ಯ’ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಖ್ಯಾತ ತಾಳವಾದ್ಯ ಕಲಾವಿದ ತಂಜಾವೂರಿನ ತಿರುನಾಗೇಶ್ವರಂ ಟಿ.ಆರ್. ಸುಬ್ರಮಣಿಯಮ್ ಹಾಗೂ ಸರಗೂರುನಾಥ ಒದುವಾರ್ ಅವರನ್ನು ಟಿಟಿಕೆ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ‘ಸಂಗೀತಶಾಸ್ತ್ರಜ್ಞ’ ಪ್ರಶಸ್ತಿಗೆ ಡಾ.ಎ.ಎಸ್.ಪದ್ಮನಾಭನ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಅಕಾಡೆಮಿ ಅಧ್ಯಕ್ಷ ಎನ್.ರವಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಪ್ರಶಸ್ತಿಗಳನ್ನು 2024ರ ಜನವರಿ 1 ಹಾಗೂ 3ರಂದು ಪ್ರದಾನ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.
ಮ್ಯೂಸಿಕ್ ಅಕಾಡೆಮಿಯ 97ನೇ ವಾರ್ಷಿಕ ಸಂಗೀತ ಸಮ್ಮೇಳನ ಹಾಗೂ ಕಛೇರಿಗಳು ಬರುವ ಡಿಸೆಂಬರ್ 15ರಿಂದ 2024ರ ಜನವರಿ 1ರವರೆಗೆ ನಡೆಯಲಿವೆ. ವಿದುಷಿ ಬಾಂಬೆ ಜಯಶ್ರೀ ಅವರು ಈ ಸಮ್ಮೇಳನದ ಅಧ್ಯಕ್ಷತೆ ವಹಿಸುವರು.
ಅಕಾಡೆಮಿ ಆಯೋಜಿಸುವ 17ನೇ ವಾರ್ಷಿಕ ನೃತ್ಯೋತ್ಸವ ಜನವರಿ 3ರಂದು ನಡೆಯಲಿದ್ದು, ಈ ಕಾರ್ಯಕ್ರಮದಲ್ಲಿ ‘ನೃತ್ಯ ಕಲಾನಿಧಿ’ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.