ಚಿರಂಜೀವಿ ಸರ್ಜಾ ನಾಯಕನಾಗಿ ನಟಿಸಿದ ಮೊದಲ ಚಿತ್ರ ‘ವಾಯುಪುತ್ರ’. ಈಗ ವೃತ್ತಿಬದುಕಿನಲ್ಲಿ ಒಂದು ದಶಕ ಪೂರೈಸಿದ ಖುಷಿಯಲ್ಲಿದ್ದಾರೆ. ಜೊತೆಗೆ, ಸಾಲು ಸಾಲು ಚಿತ್ರಗಳಲ್ಲಿ ಅವರು ಬ್ಯುಸಿ. ಅವರುಇದೇ ವರ್ಷ ನಟಿಸಿದ ‘ಸಿಂಗ’ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಅಷ್ಟೊಂದು ಗರ್ಜಿಸಲಿಲ್ಲ. ಹಾಗೆಂದು ಅವರಿಗೆ ಅವಕಾಶಗಳೂ ಕಡಿಮೆಯಾಗಿಲ್ಲ.
ಪ್ರಸ್ತುತ ಚಿರು ‘ರಾಜಮಾರ್ತಾಂಡ’, ‘ಶಿವಾರ್ಜುನ’, ‘ಖಾಕಿ’, ‘ರಣಂ’, ‘ಕ್ಷತ್ರಿಯ’ ಹೀಗೆ ಹಲವು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ರೊಮ್ಯಾಂಟಿಕ್ ಆ್ಯಕ್ಷನ್ ಚಿತ್ರ ‘ಶಿವಾರ್ಜುನ’ ಚಿತ್ರದ ಶೂಟಿಂಗ್ ಪೂರ್ಣಗೊಂಡಿದೆ. ಶೀಘ್ರವೇ, ಪ್ರಾದೇಶಿಕ ಚಲನಚಿತ್ರ ಪ್ರಮಾಣೀಕರಣ ಮಂಡಳಿ ಮುಂದೆ ಹೋಗಲು ಚಿತ್ರತಂಡ ನಿರ್ಧರಿಸಿದೆ. ಚಿತ್ರದಲ್ಲಿ ಅವರದು ಹೈವೋಲ್ಟೇಜ್ ಪಾತ್ರವಂತೆ. ಇದೊಂದು ಕಮರ್ಷಿಯಲ್ ಪ್ಯಾಕೇಜ್ ಸಿನಿಮಾ. ಕುಟುಂಬ ಸಮೇತ ನೋಡುವ ಚಿತ್ರ ಎಂದು ಸಿನಿಮಾ ತಂಡ ಹೇಳಿಕೊಂಡಿದೆ.
ಈ ಚಿತ್ರ ನಿರ್ದೇಶಿಸಿರುವುದು ಶಿವತೇಜಸ್. ಅವರೇ ಚಿತ್ರಕಥೆ ಬರೆದಿದ್ದಾರೆ. ಈ ಹಿಂದೆ ಅವರು ‘ಮಳೆ’, ಧೈರ್ಯಂ’ ಮತ್ತು ‘ಲೌಡ್ ಸ್ಪೀಕರ್’ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದರು. ಸುರಾಗ್ ಸಂಗೀತ ಸಂಯೋಜಿಸಿದ್ದಾರೆ. ಸಾಧುಕೋಕಿಲ ಹಿನ್ನೆಲೆ ಸಂಗೀತ ನೀಡಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಹಲವು ವರ್ಷಗಳಿಂದ ನಿರ್ಮಾಣ ನಿರ್ವಾಹಕರಾಗಿ ಕಾರ್ಯ ನಿರ್ವಹಿಸುತ್ತಿರುವ ಶಿವಾರ್ಜುನ ಅವರೇ ಇದಕ್ಕೆ ಬಂಡವಾಳ ಹೂಡಿದ್ದಾರೆ. ನಿರ್ಮಾಪಕರ ಹೆಸರೇ ಈ ಸಿನಿಮಾದ ಟೈಟಲ್ ಆಗಿರುವುದು ವಿಶೇಷ.
ಛಾಯಾಗ್ರಹಣ ಎಚ್.ಸಿ. ವೇಣು ಅವರದು. ಕೆ.ಎಂ. ಪ್ರಕಾಶ್ ಅವರ ಸಂಕಲನವಿದೆ. ರವಿವರ್ಮ, ವಿನೋದ್, ಥ್ರಿಲ್ಲರ್ ಮಂಜು ಅವರ ಸಾಹಸ ನಿರ್ದೇಶನವಿದೆ. ಮುರಳಿ ನೃತ್ಯ ನಿರ್ದೇಶಿಸಿದ್ದಾರೆ. ಯೋಗರಾಜ್ ಭಟ್, ಕವಿರಾಜ್, ವಿ. ನಾಗೇಂದ್ರಪ್ರಸಾದ್ ಅವರ ಗೀತ ಸಾಹಿತ್ಯವಿದೆ. ಅಮೃತಾ ಅಯ್ಯಂಗಾರ್ ಮತ್ತು ಅಕ್ಷತಾ ನಾಯಕಿಯರು. ಉಳಿದಂತೆ ತಾರಾ, ಅವಿನಾಶ್, ಕಿಶೋರ್, ಕುರಿ ಪ್ರತಾಪ್, ದಿನೇಶ್ ಮಂಗಳೂರು, ಸಾಧುಕೋಕಿಲ, ರವಿ ಕಿಶನ್, ತರಂಗ ವಿಶ್ವ, ಶಿವರಾಜ್ ಕೆ.ಆರ್. ಪೇಟೆ, ನಯನಾ ತಾರಾಗಣದಲ್ಲಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.