ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲತಾ ಮಂಗೇಶ್ಕರ್ ಕಾಲಾತೀತವಾಗಿ ಗಾನ ಸ್ವರ ಶ್ರೀಮಂತಗೊಳಿಸಿದವರು: ಬೊಮ್ಮಾಯಿ ಸಂತಾಪ

Last Updated 6 ಫೆಬ್ರುವರಿ 2022, 7:32 IST
ಅಕ್ಷರ ಗಾತ್ರ

ಬೆಂಗಳೂರು: ‘ಗಾನ ಸರಸ್ವತಿ ಲತಾ ಮಂಗೇಶ್ಕರ್ ಅವರು ಭಾರತ ದೇಶದ ಸಾರಸ್ವತ ಲೋಕದ ಮಿನುಗುವ ತಾರೆ. ಕಾಲಾತೀತವಾಗಿ ಗಾನ ಸ್ವರವನ್ನು ಶ್ರೀಮಂತಗೊಳಿಸಿದವರು’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

‘ಲತಾ ಮಂಗೇಶ್ಕರ್ ಗಾಯನ ಕೇವಲ ಸಿನಿಮಾ ಕ್ಷೇತ್ರಕ್ಕೆ ಸೀಮಿತವಾಗಿರಲಿಲ್ಲ. ಭಜನೆಗಳು, ದೇಶಭಕ್ತಿ ಗೀತೆಗಳು, ಅದರಲ್ಲೂ ಏ ಮೇರೆ ವತನ್ ಕೆ ಲೋಗೋ ಹಾಡು ಹಿಮಾಲಯದಷ್ಟೇ ಚಿರಸ್ಥಾಯಿ. ಇಂದಿಗೂ ಆ ಹಾಡು ಕೇಳಿದರೆ ಕಣ್ಣಲ್ಲಿ ನೀರು ಹರಿದು, ದೇಶಭಕ್ತಿ ಉಕ್ಕಿ ಹರಿಯುತ್ತದೆ. ಅಷ್ಟು ಪ್ರೇರಣಾದಾಯಕವಾದ ಧ್ವನಿ ಮತ್ತು ಹಾಡುಗಾರಿಕೆ ಅವರದ್ದು’ ಎಂದು ಬೊಮ್ಮಾಯಿ ಸ್ಮರಿಸಿದರು.

‘ಅವರು ಸಾವಿರಾರು ಹಾಡುಗಳನ್ನು ಹಾಡಿ ಗಾನಸುಧೆಯನ್ನೇ ಹರಿಸಿದ್ದಾರೆ. ಎಲ್ಲಿವರೆಗೂ ಭೂಮಿಯ ಮೇಲೆ ಸಂಗೀತ, ಹಾಡುಗಾರಿಕೆ ಇರುತ್ತದೆಯೋ, ಅಲ್ಲಿವವರೆಗೂ ಲತಾ ಮಂಗೇಶ್ಕರ್ ಅವರು ಎಲ್ಲರ ಮನಗಳಲ್ಲಿ, ಹೃದಯಗಳಲ್ಲಿ ನೆಲೆಸಿರುತ್ತಾರೆ. ಅವರ ಹೆಸರು ಚಿರಸ್ಥಾಯಿಯಾಗಿರುತ್ತದೆ’ ಎಂದರು.

‘ಲತಾ ಮಂಗೇಶ್ಕರ್ ಅವರು ಕನ್ನಡದಲ್ಲಿಯೂ ಹಾಡಿದ್ದು, ಕನ್ನಡದ ನಂಟು ಹೊಂದಿದ್ದರು. ಅವರ ಹಾಡುಗಳು ಅತ್ಯಂತ ಪ್ರಸಿದ್ಧವಾಗಿವೆ. ಅವರ ಅಗಲಿಕೆಯಿಂದ ನಮ್ಮೆಲ್ಲರಿಗೂ ಅಪಾರ ದುಃಖವಾಗಿದೆ. ಭಾರತದ ಕೋಗಿಲೆ ಹಾಡನ್ನು ನಿಲ್ಲಿಸಿರುವುದು ದುಃಖದ ಸಂಗತಿ. ನಾವೆಲ್ಲ ಅವರ ಹಾಡು ಕೇಳಿಯೇ ಬೆಳದಿದ್ದು’ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

‘ಅವರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಕುಟುಂಬದವರಿಗೆ ಹಾಗೂ ಅಸಂಖ್ಯ ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿ ಸಿಗಲಿ. ಸಂಗೀತ ಲೋಕದ ತಾರೆಯಾಗಿದ್ದ ಅವರು ಸದಾ ಕಾಲ ಮಿನುಗುತ್ತಿರಲಿ. ಪ್ರತಿಕ್ಷಣವೂ ಅವರ ಹಾಡು ದೇಶದಲ್ಲಿ ಎಲ್ಲಿಯಾದರೂ ಕೇಳಿಬರುತ್ತದೆ. ಪ್ರತಿಕ್ಷಣವೂ ಲತಾ ಮಂಗೇಶ್ಕರ್ ಅವರು ನಮ್ಮ ನೆನೆಪಿನಂಗಳದಲ್ಲಿ ಇರುತ್ತಾರೆ’ ಎಂದು ಅವರು ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT