‘ಕಳೆದ ವರ್ಷ ಲಾಕ್ಡೌನ್ ಘೋಷಿಸಿದ ಸಂದರ್ಭದಲ್ಲಿ ತೀವ್ರ ಸಂಕಷ್ಟದಲ್ಲಿದ್ದ ಚಲನಚಿತ್ರೋದ್ಯಮದ ಹಾಗೂ ಕಿರುತೆರೆಯ ಕಾರ್ಮಿಕರು, ಕಲಾವಿದರು, ತಂತ್ರಜ್ಞರ ಸಂಕಷ್ಟಕ್ಕೆ ಸ್ಪಂದಿಸಿ ದಿನಸಿ ಪದಾರ್ಥಗಳ ಕಿಟ್ ಪಡೆಯಲು ₹3,000 ಮೌಲ್ಯದ 6,000 ರಿಲಯನ್ಸ್ ಕೂಪನ್ಗಳನ್ನು ನೀಡಿ ನೆರವಾಗಿದ್ದೀರಿ. ಸದ್ಯದ ಪರಿಸ್ಥಿತಿಯಲ್ಲಿ ಎರಡನೇ ಅಲೆಯಿಂದಾಗಿ ಇಡೀ ರಾಜ್ಯದ ಜನತೆ ಸಂಕಷ್ಟಕ್ಕೆ ಒಳಗಾಗಿರುತ್ತಾರೆ. ಪ್ರತಿ ದಿನದ ಸಂಭಾವನೆಗಾಗಿ ದುಡಿಯುವ ಕನ್ನಡ ಚಲನಚಿತ್ರೋದ್ಯಮ ಹಾಗೂ ಕಿರುತೆರೆಯ ಹಲವು ಕಾರ್ಮಿಕರು, ಕಲಾವಿದರು ಕೋವಿಡ್ನಿಂದ ನಿಧನರಾಗಿದ್ದಾರೆ. ಇನ್ನೂ ಹಲವರು ಸೋಂಕಿನಿಂದ ಬಳಲುತ್ತಿದ್ದಾರೆ. ಹೀಗಾಗಿ ಅವರ ಕುಟುಂಬದ ನಿತ್ಯದ ಜೀವನ ನಿರ್ವಹಣೆ ದುಸ್ತರವಾಗಿದೆ. ಸರ್ಕಾರವು, ಕಳೆದ ಬಾರಿಯಂತೆ ಈ ಬಾರಿಯೂ ಚಲನಚಿತ್ರೋದ್ಯಮದ ಹಾಗೂ ಕಿರುತೆರೆಯ ಕಾರ್ಮಿಕರು, ಕಲಾವಿದರು, ತಂತ್ರಜ್ಞರುಗಳಿಗೆ ದಿನಸಿ ಪದಾರ್ಥಗಳನ್ನು ಖರೀದಿಸಲು ₹5 ಸಾವಿರ ಮೌಲ್ಯದ 6 ಸಾವಿರ ಕೂಪನ್ಗಳನ್ನು ವಿತರಿಸುವ ಯೋಜನೆ ಘೋಷಿಸಬೇಕು’ ಎಂದು ಪತ್ರದಲ್ಲಿ ಸುನೀಲ್ ಪುರಾಣಿಕ್ ಉಲ್ಲೇಖಿಸಿದ್ದಾರೆ.