‘ಕೆಮಿಸ್ಟ್ರಿ ಆಫ್ ಕರಿಯಪ್ಪ’ ಚಿತ್ರ ಖ್ಯಾತಿಯ ಎಲ್.ಕುಮಾರ್ ನಿರ್ದೇಶನದ ‘ಕ್ರಿಟಿಕಲ್ ಕೀರ್ತನೆಗಳು’ ಸಿನಿಮಾ ಪೂರ್ಣಗೊಂಡಿದ್ದು, ಅಕ್ಟೋಬರ್ ತಿಂಗಳಲ್ಲಿ ಚಿತ್ರಮಂದಿರಗಳು ಬಾಗಿಲು ತೆರೆದರೆ ಚಿತ್ರವನ್ನು ತೆರೆಕಾಣಿಸಲು ಚಿತ್ರತಂಡ ಸಜ್ಜಾಗಿದೆ.
ಇದೊಂದು ನೈಜ ಘಟನೆ ಆಧಾರಿತ, ಹಾಸ್ಯಮಯ ಚಿತ್ರ.ಐಪಿಎಲ್ ಬೆಟ್ಟಿಂಗ್ ವಿಷಯ ಕೇಂದ್ರವಾಗಿಟ್ಟುಕೊಂಡು ಕಥೆ, ಚಿತ್ರಕಥೆ ಹಾಗೂ ಸಂಭಾಷಣೆಯನ್ನು ಎಲ್.ಕುಮಾರ್ ಹೊಸೆದಿದ್ದಾರೆ. ಬೆಂಗಳೂರು, ಕುಂದಾಪುರ, ಮಂಡ್ಯ, ಬೆಳಗಾವಿಯ ಸುಂದರ ತಾಣಗಳಲ್ಲಿ 35 ದಿನಗಳು ಚಿತ್ರೀಕರಣ ನಡೆಸಲಾಗಿದೆ.
ಚಿತ್ರದಲ್ಲಿ ನಾಯಕ ಮತ್ತು ನಾಯಕಿ ಎನ್ನುವ ನಿರ್ದಿಷ್ಟ ಪಾತ್ರವಿಲ್ಲ. ಕಥೆಯೇ ಚಿತ್ರದಪ್ರಧಾನ ನಾಯಕ ಮತ್ತು ನಾಯಕಿ ಇದ್ದಂತೆ. ರಾಜ್ಯದ ನಾಲ್ಕು ಭಾಗದಲ್ಲಿ ನಡೆಯುವ ನಾಲ್ಕು ಕಥೆಗಳಿವೆ. ಆ ನಾಲ್ಕು ಕಥೆಗಳನ್ನು ಇದರಲ್ಲಿ ಬ್ಲೆಂಡ್ ಮಾಡಿ ತೋರಿಸಲಾಗಿದೆ. ತಬಲಾ ನಾಣಿ,ದೀಪಾ ಜಗದೀಶ್, ಅಪೂರ್ವ, ಅಪೂರ್ವ ಭಾರದ್ವಾಜ್ ಅವರು ಒಂದೊಂದು ಕಥೆಯನ್ನು ಪ್ರತಿನಿಧಿಸಿದ್ದಾರೆ.ಕಾಮಿಡಿಯಷ್ಟೇ ಅಲ್ಲ, ಭಾವುಕತೆಯೂ ಇದೆ. ಚಿತ್ರದಲ್ಲಿ ಮೂರು ಹಾಡುಗಳಿವೆ. ಐಪಿಎಲ್ ಬೆಟ್ಟಿಂಗ್ ಕುರಿತು ವಿಜೇತ್ ರಚಿಸಿರುವ ಹಾಡನ್ನು ಮುಂದಿನ ವಾರ ಬಿಡುಗಡೆ ಮಾಡಲು ಯೋಜನೆ ಹಾಕಿಕೊಂಡಿದ್ದೇವೆ ಎನ್ನುತ್ತಾರೆ ನಿರ್ದೇಶಕ ಎಲ್.ಕುಮಾರ್.
ತಾರಾಗಣದಲ್ಲಿ ಸುಚೀಂದ್ರ ಪ್ರಸಾದ್, ರಾಜೇಶ್ ನಟರಂಗ, ತರಂಗ ವಿಶ್ವ, ಅರುಣ ಬಾಲ್ರಾಜ್, ಧರ್ಮ ದಿನೇಶ್, ರಘು ಪಾಂಡೇಶ್ವರ, ಯಶಸ್ ಅಭಿ, ಗುರುರಾಜ ಹೊಸಕೋಟೆ, ಯಶವಂತ್ ಶೆಟ್ಟಿ,ಮಾಸ್ಟರ್ ಮಹೇಂದ್ರ, ಮಾಸ್ಟರ್ ಪುಟ್ಟರಾಜು ಇದ್ದಾರೆ.
ಕೇಸರಿ ಫಿಲಂ ಕ್ಯಾಪ್ಚರ್ ಲಾಂಛನದಲ್ಲಿ ಕುಮಾರ್ ಮತ್ತು ಅವರ ಸ್ನೇಹಿತರು ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಛಾಯಾಗ್ರಹಣ ಶಿವಸೇನ ಮತ್ತು ಶಿವಶಂಕರ್, ಸಂಗೀತ ವೀರ್ ಸಮರ್ಥ್ ಅವರದು.