2017ರಲ್ಲಿ ತೆರೆಕಂಡ ‘ಉಪ್ಪು ಹುಳಿ ಖಾರ’ ಸಿನಿಮಾ ಬಳಿಕ ನಟಿ ಮಾಲಾಶ್ರೀ ಅವರು ಸಿನಿಮಾಗಳಿಂದ ಕೊಂಚ ಬಿಡುವು ಪಡೆದುಕೊಂಡಿದ್ದರು. 2021ರಲ್ಲಿ ಪತಿ, ನಿರ್ದೇಶಕ ರಾಮು ಅವರ ಅಕಾಲಿಕ ನಿಧನ ಮಾಲಾಶ್ರೀಯವರನ್ನು ಆಘಾತಕ್ಕೆ ದೂಡಿತ್ತು. ಹೀಗಾಗಿ ಬಣ್ಣದ ಲೋಕದಿಂದ ಕೆಲ ಸಮಯ ದೂರ ಉಳಿದಿದ್ದ ಅವರು ಮತ್ತೆ ತೆರೆಯ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ಅವರ ನಟನೆಯ ‘ನೈಟ್ ಕರ್ಫ್ಯೂ’ ಸಿನಿಮಾದ ಚಿತ್ರೀಕರಣ ಪೂರ್ಣಗೊಂಡಿದ್ದು, ರಿಲೀಸ್ಗೆ ಚಿತ್ರತಂಡ ಸಿದ್ಧತೆ ನಡೆಸಿದೆ.
ಈ ಹಿಂದೆ ‘ಪುಟಾಣಿ ಸಫಾರಿ’ ಸಿನಿಮಾ ನಿರ್ದೇಶನ ಮಾಡಿದ್ದ ರವೀಂದ್ರ ವಂಶಿ ಈ ಚಿತ್ರಕ್ಕೆ ಕಥೆ ಬರೆದು, ನಿರ್ದೇಶನ ಮಾಡಿದ್ದಾರೆ. ಸಿನಿಮಾದ ಬಗ್ಗೆ ಮಾಹಿತಿ ಹಂಚಿಕೊಳ್ಳಲು ಚಿತ್ರತಂಡ ಇತ್ತೀಚೆಗೆ ಸುದ್ದಿಗೋಷ್ಠಿ ಆಯೋಜಿಸಿತ್ತು.
ಮಾಲಾಶ್ರೀ ಮಾತನಾಡಿ, ‘ಈ ಸಿನಿಮಾದ ಕಥೆಯಲ್ಲಿ ಹೊಸತನವಿದೆ. ನಾನು ಇದರಲ್ಲಿ ಡಾಕ್ಟರ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಡಾಕ್ಟರ್ ಪಾತ್ರ ಮಾಡಿದ ಎರಡನೇ ಸಿನಿಮಾವಿದು’ ಎಂದರು. ‘ಹಲವು ಕಾರಣಕ್ಕೆ ಈ ಸಿನಿಮಾ ನನಗೆ ವಿಶೇಷ. ಮಾಲಾಶ್ರೀ ಅವರ ಜೊತೆ ಕೆಲಸ ಮಾಡ್ತಿರೋದು ಖುಷಿ ಕೊಟ್ಟಿದೆ. ಇದೊಂದು ಕ್ರೈಮ್ ಥ್ರಿಲ್ಲರ್. ಕೊರೊನಾ ಕಾಲಘಟ್ಟದಲ್ಲಿ ನಡೆಯುವ ಕಥೆ ಇದಾಗಿದೆ. ನಾನೂ ಕೂಡ ಈ ಸಿನಿಮಾದಲ್ಲಿ ಡಾಕ್ಟರ್ ಪಾತ್ರ ಮಾಡಿದ್ದೇನೆ’ ಎಂದರು ನಟಿ ರಂಜನಿ ರಾಘವನ್.
‘ನೈಟ್ ಕರ್ಫ್ಯೂ ಒಂದು ವಿಶೇಷ ಸಿನಿಮಾ. ಸಿನಿಮಾದಲ್ಲಿ ವಿಶೇಷ ಕಥೆ ಹಾಗೂ ನಿರೂಪಣಾ ಶೈಲಿ ಇದ್ದು, ಸಿನಿಮಾದ ತಾರಾಬಳಗ ಬಹಳ ಚೆನ್ನಾಗಿದೆ. ತಾಂತ್ರಿಕ ವಿಭಾಗವೂ ಉತ್ತಮವಾಗಿದೆ’ ಎಂದು ವಂಶಿ ಮಾಹಿತಿ ನೀಡಿದರು.
ಇದೊಂದು ಆಕ್ಷನ್ ಥ್ರಿಲ್ಲರ್ ಚಿತ್ರವಾಗಿದ್ದು ಮೆಡಿಕಲ್ ಮಾಫಿಯಾ ಕುರಿತಾದ ಕಥೆ ಒಳಗೊಂಡಿದ್ದು, ಪ್ರಮೋದ್ ಶೆಟ್ಟಿ, ಬಲರಾಜ್ವಾಡಿ, ವರ್ಧನ್, ಅಶ್ವಿನ್, ರಂಗಾಯಣ ರಘು, ಸಾಧು ಕೋಕಿಲ, ಮಂಜು ಪಾವಗಡ ಸೇರಿದಂತೆ ಹಲವು ಕಲಾವಿದರು ಸಿನಿಮಾದಲ್ಲಿದ್ದಾರೆ. ಸ್ವರ್ಣಗಂಗಾ ಫಿಲಂಸ್ ಬ್ಯಾನರ್ ಅಡಿಯಲ್ಲಿ ಬಿ.ಎಸ್ ಚಂದ್ರಶೇಖರ್ ಈ ಸಿನಿಮಾವನ್ನು ನಿರ್ಮಿಸಿದ್ದಾರೆ. ಈ ಚಿತ್ರಕ್ಕೆ ಪ್ರಮೋದ್ ಭಾರತೀಯ ಛಾಯಾಗ್ರಹಣ, ಜಾಗ್ವಾರ್ ಸಣ್ಣಪ್ಪ ಸಾಹಸ ನಿರ್ದೇಶನವಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.