ಹುಬ್ಬಳ್ಳಿ: ‘ದೇವದಾಸಿ ಪದ್ಧತಿ ಕುರಿತ ‘ದೇವದಾಸಿಯರು’ ಸಿನಿಮಾವು ಜನವರಿ ಮೊದಲ ವಾರದಲ್ಲಿ ರಾಜ್ಯದಾದ್ಯಂತ ಬಿಡುಗಡೆಯಾಗಲಿದೆ’ ಎಂದು ಚಿತ್ರದ ನಿರ್ದೇಶಕ ಹಾಗೂ ನಿರ್ಮಾಪಕ ಸ್ವಾತಿ ಅಂಬರೀಶ್ ಹೇಳಿದರು.
‘ಸಿನಿಮಾವು ವಿಜಯಲಕ್ಷ್ಮಿ ರೆಡ್ಡಿ ಅವರ ‘ದೇವದಾಸಿಯರು’ ಕಾದಂಬರಿ ಆಧಾರಿತವಾಗಿದೆ. ಸಾಮಾಜಿಕ ವಿಷಯದ ಈ ಚಿತ್ರವನ್ನು, ಕಮರ್ಷಿಯಲ್ ಅಂಶಗಳೊಂದಿಗೆ ನಿರ್ಮಾಣ ಮಾಡಲಾಗಿದೆ. ಚಿತ್ರಕ್ಕೆ ಪವನ್ ಕುಮಾರ್ ಛಾಯಾಗ್ರಹಣ ಮತ್ತು ಸತೀಶ್ ಆರ್ಯನ್ ಸಂಗೀತ ನಿರ್ದೇಶನವಿದೆ’ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
‘ಚಿತ್ರದಲ್ಲಿ ಮೂರು ಹಾಡುಗಳಿವೆ. ಉತ್ತರ ಕರ್ನಾಟಕ ಭಾಗದಲ್ಲೇ ಬಹುತೇಕ ಶೂಟಿಂಗ್ ಮಾಡಲಾಗಿದೆ. ಚಿತ್ರದ ಬಜೆಟ್ ₹80 ಲಕ್ಷ ಆಗಿದ್ದು, 70 ಚಿತ್ರಮಂದಿರಗಳಲ್ಲಿ ಸಿನಿಮಾವನ್ನು ಬಿಡುಗಡೆ ಮಾಡಲಾಗುವುದು’ ಎಂದರು.
ನಟಿ ಸಂಜನಾ ರೆಡ್ಡಿ ಮಾತನಾಡಿ, ‘ತನು ಮತ್ತು ತಾರೆ ಎಂಬ ದ್ವಿಪಾತ್ರಗಳಲ್ಲಿ ನಾನು ನಟಿಸಿದ್ದು, ಚಿತ್ರವು ಚನ್ನಾಗಿ ಮೂಡಿ ಬಂದಿದೆ. ಸಾಮಾಜಿಕ ಅನಿಷ್ಠವಾದ ದೇವದಾಸಿ ಪದ್ದತಿಯ ಬದಲಾದ ರೂಪಗಳನ್ನು ನಿರ್ದೇಶಕರು ಮನ ಮುಟ್ಟುವಂತೆ ಹೇಳಿದ್ದಾರೆ’ ಎಂದು ಅನುಭವ ಹಂಚಿಕೊಂಡರು.