‘ಟಗರು’ ಚಿತ್ರದ ‘ಡಾಲಿ’ ಖ್ಯಾತಿಯ ಧನಂಜಯ್ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಅವರು ಖಳನಟನಾಗಿ ನಟಿಸಿರುವ ‘ಪೊಗರು’ ಮತ್ತು ‘ಯುವರತ್ನ’ ಸಿನಿಮಾಗಳು ಇನ್ನೂ ಬಿಡುಗಡೆಯಾಗಬೇಕಿದೆ.
‘ದುನಿಯಾ’ ವಿಜಯ್ ನಟನೆಯ ‘ಸಲಗ’ದಲ್ಲೂ ಅವರು ಪೊಲೀಸ್ ಅಧಿಕಾರಿಯ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಈ ನಡುವೆಯೇ ಕಾಲಿವುಡ್ನ ನಿರ್ದೇಶಕ ಎಸ್.ಡಿ. ವಿಜಯ್ ಮಿಲ್ಟನ್ ನಿರ್ದೇಶಿಸಲಿರುವ ಹೊಸ ಚಿತ್ರದಲ್ಲಿ ಅವರು ಶಿವರಾಜ್ಕುಮಾರ್ ಜೊತೆಗೆ ನಟಿಸುತ್ತಿರುವುದು ಖಾತ್ರಿಯಾಗಿದೆ. ಬೆಂಗಳೂರಿನ ಭೂಗತ ದೊರೆಯಾಗಿದ್ದ ಎಂ.ಪಿ. ಜಯರಾಜ್ ಪಾತ್ರಕ್ಕೂ ಅವರು ಬಣ್ಣ ಹಚ್ಚುತ್ತಿದ್ದಾರೆ. ಇದಕ್ಕಾಗಿ ಅವರು ತಯಾರಿ ಆರಂಭಿಸಿದ್ದಾರೆ. ಈ ಸಿನಿಮಾಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿರುವುದು ಶೂನ್ಯ.
ಗುಜ್ಜಲ್ ಪುರುಷೋತ್ತಮ್ ಮತ್ತು ಧನಂಜಯ್ ಅವರೇ ಬಂಡವಾಳ ಹೂಡಿರುವ ‘ಬಡವ ರಾಸ್ಕಲ್’ ಚಿತ್ರದ ಶೂಟಿಂಗ್ ಕ್ಲೈಮ್ಯಾಕ್ಸ್ ಹಂತದಲ್ಲಿದೆ. ಕೋವಿಡ್–19 ಪರಿಣಾಮ ಇದರ ಶೂಟಿಂಗ್ ಸ್ಥಗಿತಗೊಂಡಿದೆ. ಸರ್ಕಾರದ ಮಾರ್ಗಸೂಚಿ ನೋಡಿಕೊಂಡು ಮತ್ತೆ ಶೂಟಿಂಗ್ ಆರಂಭಿಸುವುದು ಚಿತ್ರತಂಡದ ಇರಾದೆ.
ಈಗ ರೋಹಿತ್ ಪದಕಿ ನಿರ್ದೇಶನದ ಯೋಗಿ ಜಿ. ರಾಜ್ ಹಾಗೂ ಕಾರ್ತಿಕ್ ಗೌಡ ನಿರ್ಮಾಣದ ಹೊಸ ಚಿತ್ರದಲ್ಲಿ ಧನಂಜಯ್ ನಟಿಸುತ್ತಿರುವುದು ಪಕ್ಕಾ ಆಗಿದೆ. ಈ ಚಿತ್ರಕ್ಕೆ ‘ರತ್ನನ್ಪ್ರಪಂಚ’ ಎಂಬ ಟೈಟಲ್ ಇಡಲಾಗಿದೆ. ವರಮಹಾಲಕ್ಷ್ಮಿ ಹಬ್ಬದಂದು ಈ ಸಿನಿಮಾ ಘೋಷಣೆಯಾಗಿರುವುದು ವಿಶೇಷ. ಇದಕ್ಕೆ ಶ್ರೀಷ ಕೂದುವಳ್ಳಿ ಅವರ ಛಾಯಾಗ್ರಹಣ ಇರಲಿದೆ. ಅಜನೀಶ್ ಲೋಕನಾಥ್ ಸಂಗೀತ ಸಂಯೋಜಿಸಲಿದ್ದಾರೆ. ಸಂಕಲನ ನಿರ್ವಹಣೆ ದೀಪು ಎನ್. ಕುಮಾರ್ ಅವರದ್ದು.
‘ಈ ಶುಭದಿನದಂದು ನಿಮ್ಮೊಡನೆ ಈ ಖುಷಿ ವಿಷಯವನ್ನು ಹಂಚಿಕೊಳ್ಳುತ್ತಿದ್ದೇವೆ. ಹರಸಿ. ಎಲ್ಲರಿಗೂ ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು’ ಎಂದು ಧನಂಜಯ್ ಟ್ವೀಟ್ ಮಾಡಿದ್ದಾರೆ.
ರೋಹಿತ್ ಪದಕಿ ನಿರ್ದೇಶನದ, ಯೋಗಿ ಜಿ ರಾಜ್ ಹಾಗು ಕಾರ್ತಿಕ್ ಗೌಡ ನಿರ್ಮಾಣದ ನಮ್ಮ ಹೊಸ ಚಿತ್ರ ‘ರತ್ನನ್ ಪ್ರಪಂಚ’. ಈ ಶುಭದಿನದಂದು ನಿಮ್ಮೊಡನೆ ಈ ಖುಷಿ ವಿಷಯವನ್ನು ಹಂಚಿಕೊಳ್ಳುತ್ತಿದ್ದೇವೆ. ಹರಸಿ.ಎಲ್ಲರಿಗು ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು. @Karthik1423 @YOGIGRAJ #Ratnanprapancha pic.twitter.com/UkcZB7cDqc
— Dhananjaya (@Dhananjayaka) July 31, 2020
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.