ಹಳ್ಳಿಗೆ ಟಿವಿ ಬಂದ ಕಾಲಘಟ್ಟದ ಕಥೆ ‘ದೂರದರ್ಶನ’. ತೆರೆಯ ಮೇಲೆ 1980– 90ರ ಜಗತ್ತನ್ನು ಪರಿಚಯಿಸಲು ಮುಂದಾಗಿದ್ದಾರೆ ನಿರ್ದೇಶಕ ಸುಕೇಶ್ ಶೆಟ್ಟಿ. ಈ ಚಿತ್ರದ ನಾಯಕ ಪಾತ್ರಕ್ಕೆ ಬಣ್ಣ ಹಚ್ಚಿರುವವರು ಪ್ರಥ್ವಿ ಅಂಬಾರ್. ಅಯಾನಾ ಈ ಚಿತ್ರದ ನಾಯಕಿ. ನಾಟಕೀಯ, ಹಾಸ್ಯ ಪ್ರಧಾನ ವಸ್ತುವನ್ನು ಈ ಚಿತ್ರ ಹೊಂದಿದೆ. ಇತ್ತೀಚೆಗೆ ಟ್ರೈಲರ್ ಬಿಡುಗಡೆಯಾಗಿದೆ. ಮಾರ್ಚ್ 3ರಂದು ಚಿತ್ರ ತೆರೆ ಕಾಣಲಿದೆ.
ನಾಯಕ ಪೃಥ್ವಿ ಅಂಬಾರ್ ಹೇಳುವಂತೆ, ‘ಈ ಸಿನಿಮಾ ಎಲ್ಲರಿಗೂ ತುಂಬಾ ಹತ್ತಿರವಾಗುತ್ತದೆ. ಒಂದು ಕಾದಂಬರಿ ಓದಿದ ಅನುಭವ ನೀಡುತ್ತದೆ. ಇಲ್ಲಿ ನನ್ನದು ಮನು ಎಂಬ ಪಾತ್ರ. ಬಾಲ್ಯದಲ್ಲಿ ಮಾಡಿದ ತರಲೆ ಎಲ್ಲವನ್ನು ಈ ಚಿತ್ರದಲ್ಲಿ ಕಟ್ಟಿಕೊಡಲಾಗಿದೆ. ನಿರ್ದೇಶಕರು ತುಂಬಾ ಚೆನ್ನಾಗಿ ಈ ಸಿನಿಮಾವನ್ನು ಕಟ್ಟಿಕೊಟ್ಟಿದ್ದಾರೆ. ದೂರದರ್ಶನ ಒಂದು ಒಳ್ಳೆಯ ಕಟೆಂಟ್ ಸಿನಿಮಾ. ಲವ್ ಸ್ಟೋರಿ, ಕಾಮಿಡಿ, ಎಮೋಷನ್ಸ್ ಎಲ್ಲವೂ ಈ ಚಿತ್ರದಲ್ಲಿದೆ’ ಎಂದಿದ್ದಾರೆ.
ನಾಯಕಿಯದ್ದು ಸರಳವಾದ ಹುಡುಗಿಯ ಪಾತ್ರ. ಮೈತ್ರಿ ಈ ಪಾತ್ರದ ಹೆಸರು.
‘ಈ ಚಿತ್ರ ಒಂದು ಊರಿನೊಳಗೆ ಹೋಗಿ ಬಂದ ಅನುಭವ ನೀಡುತ್ತದೆ. ಸಿದ್ಧಸೂತ್ರಗಳಾಚೆ ಈ ಚಿತ್ರ ಇದೆ. ಹೊಸ ವಿಷಯಗಳಿಗೆ ಆದ್ಯತೆ ಕೊಟ್ಟಿದ್ದೇವೆ. ಪ್ರೇಕ್ಷಕ ಪ್ರೋತ್ಸಾಹಿಸುವ ಭರವಸೆ ಇದೆ’ ಎಂದರು ಸುಕೇಶ್.
ರಾಜೇಶ್ ಭಟ್ ಈ ಚಿತ್ರದ ನಿರ್ಮಾಪಕರು. ಕಾರ್ಯಕಾರಿ ನಿರ್ಮಾಪಕ ಉಗ್ರಂ ಮಂಜು ಅವರದ್ದು ಈ ಚಿತ್ರದಲ್ಲಿ ಕಿಟ್ಟಿ ಹೆಸರಿನ ಪಾತ್ರ. 80–90ರ ದಶಕದಲ್ಲಿ ನೋಡುವ ಸ್ನೇಹ, ದ್ವೇಷ ಜೊತೆಗೆ ಕುಟುಂಬದ ಕನಸನ್ನು ನೆರವೇರಿಸುವ ಹುಡುಗನ ಪಾತ್ರವಂತೆ.
ಸುಂದರ್, ಹರಿಣಿ, ದೀಪಕ್ ರೈ ಪಾಣಾಜೆ, ರಘು ರಮಣಕೊಪ್ಪ, ಹುಲಿ ಕಾರ್ತಿಕ್, ಸೂರಜ್ ಮಂಗಳೂರು, ಸೂರ್ಯ ಕುಂದಾಪುರ ಒಳಗೊಂಡ ತಾರಾಗಣ ಚಿತ್ರದಲ್ಲಿದೆ. ಅರುಣ್ ಸುರೇಶ್ ಕ್ಯಾಮೆರಾ ವರ್ಕ್, ಪ್ರದೀಪ್ ಆರ್. ರಾವ್ ಸಂಕಲನ, ನಂದೀಶ್ ಟಿ.ಜಿ. ಸಂಭಾಷಣೆ, ವಾಸುಕಿ ವೈಭವ ಸಂಗೀತ ಚಿತ್ರಕ್ಕಿದೆ.