ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾರ್ವಜನಿಕರಿಗೆ ತೊಂದರೆ ಉಂಟು ಮಾಡಿದ ಆರೋಪ: ನಟ ವಿಜಯ್‌ ವಿರುದ್ಧ ಎಫ್‌ಐಆರ್‌

Last Updated 23 ಜನವರಿ 2020, 13:15 IST
ಅಕ್ಷರ ಗಾತ್ರ

ಬೆಂಗಳೂರು:‌ ಹುಟ್ಟುಹಬ್ಬ ಆಚರಣೆಗಾಗಿ ರಸ್ತೆಯಲ್ಲೇ ಪೆಂಡಾಲ್‌ ಹಾಕಿ ಸಾರ್ವಜನಿಕರ ಓಡಾಟಕ್ಕೆ ತೊಂದರೆ ಉಂಟು ಮಾಡಿದ ಆರೋಪದಡಿ ನಟ ದುನಿಯಾ ವಿಜಯ್ (45) ವಿರುದ್ಧ ಗಿರಿನಗರ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

‘ಕಾನ್‌ಸ್ಟೆಬಲ್ ಮಧುಸೂದನ್ ಎಂಬುವರು ನೀಡಿರುವ ದೂರು ಆಧರಿಸಿ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

‘ಗಿರಿನಗರ ಠಾಣೆಯಲ್ಲಿ ಕೆಲಸ ಮಾಡುತ್ತಿರುವ ಕಾನ್‌ಸ್ಟೆಬಲ್ ಮಧುಸೂದನ್ ಅವರು ಇದೇ 19ರಂದು ತಡರಾತ್ರಿ ಠಾಣೆ ವ್ಯಾಪ್ತಿಯಲ್ಲಿ ಗಸ್ತು ತಿರುಗುತ್ತಿದ್ದರು. ದುನಿಯಾ ವಿಜಯ್‌ ಅವರ ಹುಟ್ಟುಹಬ್ಬವಿದ್ದಿದ್ದರಿಂದ ಬನಶಂಕರಿ 3ನೇ ಹಂತದಲ್ಲಿರುವ ಅವರ ಮನೆ ಎದುರಿನ ರಸ್ತೆಯಲ್ಲಿ ಬೃಹತ್ ಪೆಂಡಾಲ್ ಹಾಕಲಾಗಿತ್ತು. ಅಭಿಮಾನಿಗಳೊಂದಿಗೆ ಹುಟ್ಟುಹಬ್ಬ ಆಚರಿಸಿಕೊಳ್ಳಲು ವಿಜಯ್‌ ಸಿದ್ಧತೆ ಮಾಡಿಕೊಂಡಿದ್ದರು.’

‘ಅಪಾಯಕಾರಿ ಆಯುಧ ತಲ್ವಾರ್‌ನಿಂದ ಸಾರ್ವಜನಿಕರ ಎದುರೇ ವಿಜಯ್ ಕೇಕ್ ಕತ್ತರಿಸಿದ್ದರು. ಅವಧಿ ಮೀರಿ ಜೋರಾದ ಶಬ್ದ ಮಾಡುವ ಧ್ವನಿವರ್ಧಕ ಬಳಕೆ ಮಾಡಿದ್ದರು. ಅದರಿಂದ ಅಕ್ಕ–ಪಕ್ಕದ ನಿವಾಸಿಗಳಿಗೆ ಹಾಗೂ ರಸ್ತೆಯಲ್ಲಿ ಹೊರಟಿದ್ದ ಸಾರ್ವಜನಿಕರ ಸಂಚಾರಕ್ಕೆ ತೊಂದರೆ ಉಂಟಾಗಿತ್ತು. ಈ ಸಂಬಂಧ ಕಾನ್‌ಸ್ಟೆಬಲ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ’ ಎಂದು ಪೊಲೀಸರು ಹೇಳಿದರು.

‘ವಿಜಯ್ ಅವರು ನಿರ್ಲಕ್ಷ್ಯದಿಂದ ಹಾಗೂ ಬೇಜವಾಬ್ದಾರಿಯಿಂದ ವರ್ತಿಸಿದ್ದಾರೆ. ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಕಾನ್‌ಸ್ಟೆಬಲ್ ಒತ್ತಾಯಿಸಿದ್ದಾರೆ’ ಎಂದು ಅಧಿಕಾರಿ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT