ಗುಲಾಲ್ ಎಂದರೆ ಬಣ್ಣ. ಪಿಂಕ್ ಕಲರ್ಗೆ ಗುಲಾಲ್ ಎನ್ನುತ್ತೇವೆ. ಅದು ಹುಟ್ಟು ಮತ್ತು ಸಾವಿನ ಸಂಕೇತ. ಹುಟ್ಟಿದಾಗ ಖುಷಿಗೆ ಗುಲಾಲ್ ಹಾರಿಸುತ್ತಾರೆ ಹಾಗೆಯೇ ಅಕಾಸ್ಮಾತ್ ವ್ಯಕ್ತಿ ಸತ್ತಾಗಲೂ ಅವರಿಗೆ ಗೌರವ ಸಲ್ಲಿಸಲು ಗುಲಾಲ್ ಎರಚುತ್ತಾರೆ. ಗುಲಾಲ್ ಹುಟ್ಟು ಮತ್ತು ಸಾವಿನ ಸಮ್ಮಿಲನ. ಇವರೆಡನ್ನೂ ಸಂಕೇತಿಸುವ ಬಣ್ಣವೇ ಗುಲಾಲ್. ಸಾವು ಬದುಕಿನಲ್ಲಿ ಎರಗುವ ಕಷ್ಟವಾದರೆ, ಹುಟ್ಟು ಸಂಭ್ರಮವಾಗಿದೆ. ಇವರೆಡನ್ನೂ ಪ್ರತಿನಿಧಿಸುವ ಶೀರ್ಷಿಕೆ ಇಟ್ಟುಕೊಂಡು ಮಾಡಿರುವ ಒಂದು ಹಾಸ್ಯ ಪ್ರಧಾನ ಮನರಂಜನೆಯ ಚಿತ್ರವೇ ಗುಲಾಲ್.ಕಾಂ.
ಸಂಗೀತ ನಿರ್ದೇಶಕ ಶಿವು ಜಮಖಂಡಿ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು, ಆಡಿಯೊವನ್ನು ನಟ ಸಂದೀಪ್ ಮಲಾನಿ ಸುದ್ದಿಗೋಷ್ಠಿಯಲ್ಲಿ ಬಿಡುಗಡೆ ಮಾಡಿ, ಚಿತ್ರತಂಡವನ್ನು ಹರಸಿದರು.
ಪ್ರತಿಯೊಬ್ಬರ ಬದುಕಿನಲ್ಲಿ ಸಾವು–ನೋವು, ಕಷ್ಟ ಸುಖ ಇರುತ್ತದೆ. ಅದರ ಜರ್ನಿಯೇ ಗುಲಾಲ್. ರಾಜ್ಯದ ಐದು ಭಾಗಗಳಿಂದ ಬಂದ ಸ್ನೇಹಿತರು ಒಬ್ಬ ಗುರುವನ್ನು ಆದರ್ಶವಾಗಿ ಇಟ್ಟುಕೊಂಡು ಸಂಗೀತ ಆಲ್ಬಮ್ ನಿರ್ಮಿಸಿರುತ್ತಾರೆ. ಅದು ಎಲ್ಲೆಡೆ ವೈರಲ್ ಆಗಿರುತ್ತದೆ. ಆ ಐವರು ಸ್ನೇಹಿತರ ಜೀವನ ಯಶೋಗಾಥೆಯೇ ಗುಲಾಲ್ನ ಕಥಾಹಂದರ. ಬೆಂಗಳೂರನ್ನು ಕೇಂದ್ರೀಕರಿಸಿ ಚಿತ್ರೀಕರಣ ಮಾಡಲಾಗಿದೆ ಎಂದು ಮಾತು ವಿಸ್ತರಿಸಿದರು ನಿರ್ದೇಶಕ ಶಿವು ಜಮಖಂಡಿ.
‘ಹುಡುಗಿ ಹುಡುಗಿ’ ಎನ್ನುವ ಹಾಡನ್ನು ಉತ್ತರ ಕರ್ನಾಟಕ ಭಾಗದಲ್ಲಿ ಚಿತ್ರೀಕರಿಸಲಾಗಿದೆ. ಚಿತ್ರದಲ್ಲಿ 120 ಕಲಾವಿದರು ಬಣ್ಣ ಹಚ್ಚಿದ್ದಾರೆ. ಚಿತ್ರದಲ್ಲಿ ಹಾಸ್ಯವಷ್ಟೇ ಅಲ್ಲ, ಆ್ಯಕ್ಷನ್ ಕೂಡ ಇದ್ದು ಮೂರು ಫೈಟ್ ದೃಶ್ಯಗಳಿವೆ. ಪ್ರೇಕ್ಷಕರಿಗೆ ಚಿತ್ರ ಮಜ ನೀಡಲಿದೆ ಎನ್ನುವ ಮಾತು ಸೇರಿಸಿದರು.
ಹಾಡುಗಳ ಅಬ್ಬರ:
‘ಬದುಕೇ ನೀನೇಕೆ ಹೀಗೆ’ ಹಾಡನ್ನುಮೆಹಬೂಬ ಸಾಬ್ ಹಾಡಿದ್ದು, ಚಿತ್ರದ ಶೀರ್ಷಿಕೆ ಗೀತೆಯನ್ನು ಸಂತೋಷ್ ವೆಂಕಿ ಹಾಡಿದ್ದಾರೆ.ಮಹೇಶ್ ಬಿಸ್ಲೆಹಳ್ಳಿ ಟೈಟಲ್ ಸಾಂಗ್ ಬರೆದಿದ್ದಾರೆ. ಶಿವು ಜಮಖಂಡಿ ಗಣೇಶನ ಸ್ತುತಿಯನ್ನುರ್ಯಾಪ್ ಹಾಡಿನಂತೆ ಹಾಡಿದ್ದಾರೆ. ‘ಜಿಂದಗಿ ನಿನ್ನಿಂದಲೇ’ ಹಾಡನ್ನು ಶಶಿಕಲಾ ಸುನೀಲ್ ಮತ್ತು ಸಂತೋಷ್ ವೆಂಕಿ ಹಾಡಿದ್ದಾರೆ. ಇನ್ನೊಂದು ಪ್ರಮುಖ ಜಾನಪದ ಶೈಲಿಯ ಹಾಡನ್ನು ನಿರ್ಮಾಪಕ ಹವಾಲ್ದಾರ್ ಹಾಡಿದ್ದಾರೆ. ಎಲ್ಲ ಹಾಡುಗಳು ಕೇಳಲು ಹಿತವಾಗಿದ್ದು,ಹಾಡುಗಳ ಹಕ್ಕನ್ನುಜೀ ಮ್ಯೂಸಿಕ್ ಕಂಪನಿ ಖರೀದಿಸಿದೆ. ಚಿತ್ರದ ಹಾಡುಗಳನ್ನು ಶಂಕರ್ನಾಗ್ ಅವರಿಗೆ ಚಿತ್ರತಂಡ ಅರ್ಪಿಸಿದೆ.
ತಬಲಾ ನಾಣಿ,ಹೊಗಳುವವರ ಮಾತಿಗೆ ಮರಳಾದರೆ, ದಾರಿ ತಪ್ಪಿಸುವವರ ಮಾತು ಕೇಳಿದರೆ ಬದುಕು ಹೇಗೆ ಹಾಳಾಗುತ್ತದೆ ಎನ್ನುವುದನ್ನು ಈ ಚಿತ್ರದಲ್ಲಿ ತುಂಬಾ ಚೆನ್ನಾಗಿ ಹೇಳಲಾಗಿದೆ. ಹಾಗೆಯೇ ರಾಮಸೇತುವೆ ಕಟ್ಟಲು ಅಳಿಲು ಸೇವೆ ಸಲ್ಲಿಸಿದಂತೆ ಈ ಚಿತ್ರತಂಡದಲ್ಲಿರುವ ಪ್ರತಿಯೊಬ್ಬರು ಸಮಯದ ಪರಿವೆ ಮರೆತು ಚಿತ್ರಕ್ಕಾಗಿ ಕೆಲಸ ಮಾಡಿದ್ದಾರೆ ಎಂದರು.
ಇದನ್ನೂ ಓದಿ:ನಗೆಬಳಗದ ಭರ್ಜರಿ ಹಾಸ್ಯ
ನಿರ್ಮಾಪಕರಾದ ಡಾ.ಗೋಪಾಲಕೃಷ್ಣ ಹವಾಲ್ದಾರ್ ಮತ್ತುಧನಂಜಯ ಎಚ್. ಈ ಚಿತ್ರಕ್ಕೆ ಜಂಟಿಯಾಗಿ ಬಂಡವಾಳ ಹೂಡಿದ್ದಾರೆ.ನೃತ್ಯ ನಿರ್ದೇಶನ ಹೈಟ್ ಮಂಜು, ಛಾಯಾಗ್ರಹಣಮುಂಜಾನೆ ಮಂಜು ಅವರದ್ದು. ಸಾಸಹ ನಿರ್ದೇಶನ ಬಂಡೆ ಚಂದ್ರು ಅವರದ್ದು.
ಚಿತ್ರದ ಪ್ರಮುಖ ಪಾತ್ರವಾದ ಗುರುವಿನ ಪಾತ್ರದಲ್ಲಿ ತಬಲಾ ನಾಣಿ ನಟಿಸಿದ್ದರೆ, ಐವರು ಸ್ನೇಹಿತರ ಪಾತ್ರಗಳಲ್ಲಿ ನಾಯಕರಾಗಿ ಬಿಗ್ ಬಾಸ್ ಖ್ಯಾತಿಯ ದಿವಾಕರ್, ಸದಾನಂದ ಖಾಲಿ, ಜೋಕರ್ ಹನುಮಂತು, ಶಂಕರ್, ಮಲ್ಲೇಶ್ ಸೂರ್ಯ ನಟಿಸಿದ್ದಾರೆ. ನಾಯಕಿಯರಾಗಿ ನೇತ್ರಾ, ಪೂಜಾ ಮೈಸೂರು, ಸೋನು ಪಾಟೀಲ್, ರಾಜೇಶ್ವರಿ, ಮೋಹನ್ ಜುನೇದಾ, ಅನಿತಾ ಸೂರ್ಯವಂಶಿ ಮುಖ್ಯಭೂಮಿಕೆಯಲ್ಲಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.