ನಿರ್ದೇಶಕ ವಿಠಲ ಭಟ್ಟರು ತಮ್ಮನ್ನು ಆವರಿಸಿದ್ದ ಹ್ಯಾಂಗೋವರ್ಅನ್ನು ಸಿನಿಮಾ ವೀಕ್ಷಕರಿಗೆ ವರ್ಗಾಯಿಸಲು ಮುಂದಾಗಿದ್ದಾರೆ! ತಾವೊಬ್ಬರೇ ಏಕೆ ಹ್ಯಾಂಗೋವರ್ ಅನುಭವಿಸಬೇಕು, ಅದನ್ನು ವೀಕ್ಷಕರೂ ಅನುಭವಿಸಲಿ ಎಂಬ ಕಾರಣಕ್ಕಿರಬಹುದು!
ಅವರು ನಿರ್ದೇಶಿಸಿರುವ ‘ಹ್ಯಾಂಗೋವರ್’ ಚಿತ್ರ ಜೂನ್ನಲ್ಲಿ ತೆರೆಗೆ ಬರಲಿದೆಯಂತೆ. ‘ಈ ಸಮಾಜ ಮತ್ತು ತಂದೆ-ತಾಯಿ ನಮಗೆ ಕೊಟ್ಟ ಸ್ವಾತಂತ್ರ್ಯವನ್ನು ದುರುಪಯೋಗ ಮಾಡಿಕೊಳ್ಳದೇ ಯೌವನವನ್ನು ಜವಾಬ್ದಾರಿಯುತವಾಗಿ ಅನುಭವಿಸಿ ಎಂಬ ಸಂದೇಶ ಈ ಸಿನಿಮಾದಲ್ಲಿ ಯುವಕರಿಗೆ ಇದೆ. ಜೊತೆಯಲ್ಲೇ, ಸಸ್ಪೆನ್ಸ್-ಥ್ರಿಲ್ಲರ್ ಕಥಾಹಂದರ ಕೂಡ ಸಿನಿಮಾದಲ್ಲಿ ಇದೆ’ ಎಂದು ಸಿನಿತಂಡ ಹೇಳಿದೆ.
ಮೂವರು ಹುಡುಗರು ಮತ್ತು ಮೂವರು ಹುಡುಗಿಯರು ಕಾಕ್ಟೇಲ್ ಪಾರ್ಟಿಯೊಂದನ್ನು ಮುಗಿಸಿ ನಾಯಕನ ಫಾರ್ಮ್ಹೌಸ್ಗೆ ಬಂದು ಮಲಗುತ್ತಾರೆ. ಅವರು ಬೆಳಿಗ್ಗೆ ಎದ್ದು ನೋಡುವಾಗ, ಒಬ್ಬಳು ಹುಡುಗಿ ಕೊಲೆಯಾಗಿರುತ್ತಾಳೆ. ಈ ಕೊಲೆಯ ಸುತ್ತ ನಡೆಯುವ ಕಥೆಯೇ ಹ್ಯಾಂಗೋವರ್ ಸಿನಿಮಾದ ತಿರುಳು. ಕುಡಿದ ಹ್ಯಾಂಗೋವರ್ನಲ್ಲಿ ಮಾಡಿದ ಕಿತಾಪತಿಯ ಕಥೆಯನ್ನು ರಿವರ್ಸ್ ಸ್ರ್ಕೀನ್ಪ್ಲೇ ತಂತ್ರ ಬಳಸಿ ಹೇಳಲಿದ್ದಾರಂತೆ ವಿಠಲ್ ಭಟ್.
‘ಯಾರು ಕೊಲೆ ಮಾಡಿರಬಹುದು?’ ಎಂಬ ಕುತೂಹಲವು ಚಿತ್ರದ ಕೊನೆಯ ಹಂತದವರೆಗೂ ವೀಕ್ಷಕರಲ್ಲಿ ಉಳಿದುಕೊಂಡಿರುತ್ತದೆ ಎನ್ನುವುದು ಚಿತ್ರತಂಡದ ಭರವಸೆ. ಚಿತ್ರದ ಸಂಗೀತ ನಿರ್ದೇಶನ ವೀರ್ ಸಮರ್ಥ್ ಅವರದ್ದು. ಚೇತನ್ ಬಹದ್ದೂರ್ ಮತ್ತು ಕೃಷ್ಣ ರಿಟ್ಟಿ ಅವರ ಸಾಹಿತ್ಯ ಚಿತ್ರಕ್ಕಿದೆ.
ಭರತ್, ರಾಜ್, ಚಿರಾಗ್, ಮಹತಿ ಭಿಕ್ಷು, ಸಹನ್ ಮೊನ್ನಮ್ಮ, ನಂದಿನಿ ನಟರಾಜ್ ಚಿತ್ರದ ಮುಖ್ಯಭೂಮಿಕೆಯಲ್ಲಿ ಅಭಿನಯಿಸಿದ್ದಾರೆ. ಶಫಿ, ಅಶ್ವಥ್ ನೀನಾಸಂ, ಕೆ.ಎಸ್. ಶ್ರೀಧರ್, ಯತಿರಾಜ್, ಕೈಲಾಶ್ ತಾರಾಗಣದಲ್ಲಿ ಇದ್ದಾರೆ. ಮೈಸೂರು, ಬೆಂಗಳೂರು ಮತ್ತು ಊಟಿಯಲ್ಲಿ ಚಿತ್ರೀಕರಣ ನಡೆದಿದೆ.