ಬೆಂಗಳೂರು: ಯಶ್ ಅಭಿನಯದ ‘ಕೆಜಿಎಫ್’ ಚಿತ್ರದ ಪ್ರದರ್ಶನಕ್ಕೆ ಬೆಂಗಳೂರಿನ ನಗರ ಸಿವಿಲ್ ನ್ಯಾಯಾಲಯವು ಗುರುವಾರ ಮಧ್ಯಂತರ ತಡೆಯಾಜ್ಞೆ ನೀಡಿದೆ ಎಂದು ಬೆಂಗಳೂರಿನ ಕಾನೂನು ಸಲಹಾ ಸಂಸ್ಥೆ ‘ಏಕಲವ್ಯ ಅಸೋಸಿಯೇಟ್ಸ್’ನ ವಕೀಲ ಕೆ. ರಘುನಾಥ ತಿಳಿಸಿದ್ದಾರೆ. ಈ ಚಿತ್ರ ಶುಕ್ರವಾರ ತೆರೆಗೆ ಬರಬೇಕಿತ್ತು.
‘ಶ್ರೀ ರಾಜೇಶ್ವರಿ ಕಂಬೈನ್ಸ್’ನ ಮಾಲೀಕ ಜಿ. ವೆಂಕಟೇಶ್ ಎಂಬುವವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ಈ ತಡೆಯಾಜ್ಞೆ ನೀಡಿದೆ. ಪ್ರತಿವಾದಿಗಳಾದ ವಿಜಯ್ ಕಿರಗಂದೂರು (ಕೆಜಿಎಫ್ ಚಿತ್ರದ ನಿರ್ಮಾಪಕ) ಹಾಗೂ ಆರ್ಯ ಫಿಲಂಸ್ ಮಾಲೀಕ ಆರ್. ಲಕ್ಮೀನಾರಾಯಣ ಗೌಡ ಅವರು ಕೋರ್ಟ್ಗೆ ಹಾಜರಾಗುವವರೆಗೂ ತಡೆಯಾಜ್ಞೆ ಜಾರಿಯಲ್ಲಿ ಇರುತ್ತದೆ ಎಂದು ಆದೇಶದಲ್ಲಿ ಹೇಳಲಾಗಿದೆ. ಮುಂದಿನ ವಿಚಾರಣೆಯನ್ನು ಜನವರಿ 7ಕ್ಕೆ ನಿಗದಿ ಮಾಡಲಾಗಿದೆ.
ಆದರೆ, ಇದಕ್ಕೆ ಪ್ರತಿಕ್ರಿಯೆ ನೀಡಿರುವ ‘ಕೆಜಿಎಫ್’ ನಿರ್ಮಾಪಕರಾದ ‘ಹೊಂಬಾಳೆ ಫಿಲಂಸ್’, ‘ಕೋರ್ಟ್ನಿಂದ ನಮಗೆ ಯಾವುದೇ ತಡೆಯಾಜ್ಞೆ ಬಂದಿಲ್ಲ. ಪ್ರದರ್ಶನ ನಿಗದಿಯಂತೆ ನಡೆಯಲಿದೆ. ಗೊಂದಲ ಬೇಡ’ ಎಂದು ಹೇಳಿದೆ.