ವಾಷಿಂಗ್ಟನ್ : ಜಲಮೂಲಗಳ ಅಸಮರ್ಪಕ ನಿರ್ವಹಣೆ ಮತ್ತು ನೀರಿನ ಅತಿ ಬಳಕೆಯಿಂದ ಭಾರತದಲ್ಲಿ ಶುದ್ಧ ನೀರಿನ ಪ್ರಮಾಣ ಕ್ಷೀಣಿಸುತ್ತಿರುವುದನ್ನು ನಾಸಾದ ಉಪಗ್ರಹ ಪತ್ತೆ ಮಾಡಿದೆ.
ಭೂಮಿಯ ಮೇಲೆ ಮಾನವ ಚಟುವಟಿಕೆಗಳ ಕುರಿತು ಉಪಗ್ರಹದಿಂದ ಪಡೆದಿರುವ ದತ್ತಾಂಶಗಳನ್ನು ನಾಸಾದ ಗೊಡಾರ್ಡ್ ಬಾಹ್ಯಾಕಾಶ ಕೇಂದ್ರದ ವಿಜ್ಞಾನಿಗಳು ವಿಶ್ಲೇಷಿಸಿದ್ದಾರೆ. ಶುದ್ಧನೀರಿನ ಪ್ರಮಾಣ ಯಾವ ಪ್ರದೇಶಗಳಲ್ಲಿ ಮತ್ತು ಹೇಗೆ ಕಡಿಮೆಯಾಗುತ್ತಿದೆ ಎಂಬುದನ್ನು ಗುರುತಿಸಿರುವ ಅಧ್ಯಯನ ಲೇಖನವನ್ನು ‘ನೇಚರ್’ ಪತ್ರಿಕೆ ಪ್ರಕಟಿಸಿದೆ.
ಹವಾಮಾನ ಬದಲಾವಣೆ, ನೈಸರ್ಗಿಕ ಪ್ರಕ್ರಿಯೆಗಳು ಹಾಗೂ ಅಸಮರ್ಪಕ ನೀರಿನ ನಿರ್ವಹಣೆಯಿಂದಾಗಿ ಶುಷ್ಕ ಭೂಮಿ ಮತ್ತಷ್ಟು ಶುಷ್ಕವಾಗುತ್ತಿದೆ ಎಂದು ಅಧ್ಯಯನ ಹೇಳಿದೆ.
ಭಾರತದ ಉತ್ತರ ಮತ್ತು ಪೂರ್ವಭಾಗ, ಮಧ್ಯಪ್ರಾಚ್ಯ, ಕ್ಯಾಲಿಫೋರ್ನಿಯಾ ಹಾಗೂ ಆಸ್ಟ್ರೇಲಿಯಾದಲ್ಲಿ ಅತಿಯಾದ ನೀರಿನ ಬಳಕೆಯಿಂದ ಶುದ್ಧ ನೀರಿನ ಪ್ರಮಾಣ ಕಡಿಮೆಯಾಗಿದೆ ಎಂದು ‘ದಿ ಗಾರ್ಡಿಯನ್’ ಕೂಡ ವರದಿ ಮಾಡಿದೆ.
ಭಾರತದ ಉತ್ತರ ಭಾಗದಲ್ಲಿ ಗೋಧಿ ಮತ್ತು ಭತ್ತದ ಬೆಳೆಗಳಿಗೆ ಹೆಚ್ಚು ನೀರು ಬಳಸುವ ಕಾರಣದಿಂದ ಅಂತರ್ಜಲ ಮಟ್ಟ ಹೆಚ್ಚಿನ ಪ್ರಮಾಣದಲ್ಲಿ ಕುಸಿದಿದೆ ಎಂದು ವರದಿ ಹೇಳಿದೆ.