ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಿಚ್ಚನಿಗೆ ಥ್ಯಾಂಕ್ಸ್‌ ಹೇಳಿದ ಜಯಶ್ರೀ

Last Updated 26 ಜುಲೈ 2020, 19:30 IST
ಅಕ್ಷರ ಗಾತ್ರ

ಆತ್ಮಹತ್ಯೆಯಂತಹ ದುಡುಕು ನಿರ್ಧಾರದಿಂದ ಹಿಂದೆ ಸರಿದು ಕುಟುಂಬದವರು ಮತ್ತು ಅಭಿಮಾನಿಗಳ ಆತಂಕ ನಿವಾರಿಸಿದ ನಟಿ ಜಯಶ್ರೀ ರಾಮಯ್ಯ, ಕಷ್ಟಕಾಲದಲ್ಲಿ ಸಂಕಷ್ಟದಿಂದ ಪಾರು ಮಾಡಿದ ಸ್ಯಾಂಡಲ್‌ವುಡ್‌ನ ಅಭಿನಯ ಚಕ್ರವರ್ತಿ ಸುದೀಪ್‌ ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

‘ಸುದೀಪ್‌ ಸರ್‌ ನೀವು ಮತ್ತು ನಿಮ್ಮ ತಂಡ ಜತೆಯಾಗಿ ನನ್ನ ಜೀವ ಉಳಿಸಿದ್ದೀರಿ. ನೀವು ತೋರಿದ ಕಾಳಜಿಗೆ ಧನ್ಯವಾದಗಳು. ನನ್ನ ಪ್ರೀತಿಯ ಸ್ನೇಹಿತರು ಮತ್ತು ಅಭಿಮಾನಿಗಳು ನಿಮ್ಮನ್ನು ತುಂಬಾ ಪ್ರೀತಿಸಲಿದ್ದಾರೆ’ ಎಂದು ಜಯಶ್ರೀ ರಾಮಯ್ಯ ಸಾಮಾಜಿಕ ಜಾಲತಾಣದ ಕಿಚ್ಚನಿಗೆ ಧನ್ಯವಾದಗಳನ್ನು ಹೇಳಿದ್ದಾರೆ.

‘ಐದು ವರ್ಷದವಳಿದ್ದಾಗಲೇ ಅತ್ಯಾಚಾರಕ್ಕೆ ಒಳಗಾಗಿದ್ದೆ. ಹುಡುಗಿಯರಿಂದಲೂ ನನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ. ತಾಯಿಯನ್ನು ನನ್ನ ಅಣ್ಣ ಹೊಡೆಯುತ್ತಾನೆ. ಸುದೀಪ್‌ ಚಾರಿಟಬಲ್‌ ಟ್ರಸ್ಟ್‌ ನನ್ನ ತಾಯಿಯನ್ನು ಸಲಹುವ ಜವಾಬ್ದಾರಿ ತೆಗೆದುಕೊಂಡರೆ, ನಾನು ನಿಶ್ಚಿಂತೆಯಿಂದ ಸಾಯುವೆ. ನನಗೆ ಬದುಕು ಬೇಡ, ಈಗಾಲೇ ಏಳು ಬಾರಿ ಆತ್ಮಹತ್ಯೆಗೆ ಯತ್ನಿಸಿರುವೆ. ನನಗೆ ಕೊರೊನಾ ಬರಲಿ, ಯಾರಾದರೂ ದಯಾಮರಣ ಕೊಡಿಸಿ. ಇದನ್ನು ನಾನು ಪ್ರಚಾರಕ್ಕಾಗಿ ಮಾಡುತ್ತಿಲ್ಲ’ ಎಂದು ಮಾಧ್ಯಮಗಳ ಎದುರು ಅಲವತ್ತುಕೊಂಡಿದ್ದರು.

ಜೀವ ಕಳೆದುಕೊಳ್ಳುವ ಮಾತು ಆಡಿದ್ದ ನಟಿಗೆ ಬದುಕಿನ ಪಾಠ ಹೇಳಿದ ಸುದೀಪ್‌, ‘ಸಮಸ್ಯೆ ಇದೆ ಎಂದು ಆತ್ಮಹತ್ಯೆ ನಿರ್ಧಾರ ಮಾಡಬಾರದು. ನಿಮಗಿಂತಲೂ ದೊಡ್ಡ ಕಷ್ಟಗಳಲ್ಲಿರುವವರು ಇಲ್ಲಿ ಬದುಕುತ್ತಿದ್ದಾರೆ. ಅವರೆಲ್ಲ ಸಾಯುವ ಮಾತು ಆಡುತ್ತಿಲ್ಲ. ಅವರೆಲ್ಲರ ಸಮಸ್ಯೆಗಳ ಮುಂದೆ ನಿಮ್ಮವು ತೀರಾ ಚಿಕ್ಕ ಸಮಸ್ಯೆಗಳು. ಬದುಕುವ ದಾರಿಗಳು ತುಂಬಾ ಇವೆ’ ಎಂದು ಧೈರ್ಯ ತುಂಬಿದ್ದರು.

ಜಯಶ್ರೀ ಬುಧವಾರ ‘I Quit...’ ಎಂದು ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಮಾಡಿದ ಬಳಿಕ ಯಾರೊಬ್ಬರ ಮೊಬೈಲ್‌ ಸಂಪರ್ಕಕ್ಕೂ ಸಿಕ್ಕಿರಲಿಲ್ಲ. ಇದು ಕನ್ನಡ ಚಿತ್ರರಂಗ ಮತ್ತು ಆಕೆಯ ಅಭಿಮಾನಿಗಳಲ್ಲಿ ಆತಂಕ ಮೂಡಿಸಿತ್ತು.ಬಹಳಷ್ಟು ಜನರು ಆಕೆ ಇರುವ ಸ್ಥಳಕ್ಕೆ ಯಾರಾದರೂ ಹೋಗಿ ಅವರನ್ನು ರಕ್ಷಿಸಿ ಎಂದು ಫೇಸ್‌ಬುಕ್‌ನಲ್ಲಿ ಮೊರೆ ಇಟ್ಟಿದ್ದರು.ಅವರ ಪೋಸ್ಟ್‌ ಗಮನಿಸಿ ತಕ್ಷಣ ಸುದೀಪ್‌ ಅವರು ತಮ್ಮ ಚಾರಿಟಬಲ್‌ ಟ್ರಸ್ಟ್‌ ಸದಸ್ಯರ ಮೂಲಕ ಜಯಶ್ರೀ ಅವರನ್ನು ಸಂಪರ್ಕಿಸಿ, ಬದುಕಿಗೆ ಧೈರ್ಯ ತುಂಬಿದರಂತೆ. ನಂತರ ಜಯಶ್ರಿ ತನ್ನ ಫೇಸ್‌ಬುಕ್‌ನಲ್ಲಿ ‘I'm Alright and safe!! Love you all’ ಎಂದು ಪೋಸ್ಟ್ ಹಾಕಿ, ಅಭಿಮಾನಿಗಳು ಮತ್ತು ಕುಟುಂಬದವರ ಆತಂಕ ನಿವಾರಿಸಿದ್ದರು.

‘ಉಪ್ಪು ಹುಳಿ ಖಾರ’ ಮತ್ತು ‘ಕನ್ನಡ್‌ ಗೊತ್ತಿಲ್ಲ’ ಸೇರಿ ಹಲವು ಸಿನಿಮಾಗಳಲ್ಲಿ ಅಭಿನಯಿಸಿದ್ದ ಜಯಶ್ರೀ, ಕನ್ನಡದ ‘ಬಿಗ್‌ ಬಾಸ್‌ ಸೀಸನ್‌ 3’ರಲ್ಲಿ ಸ್ಪರ್ಧಿಸಿದ್ದರು. ಜಯಶ್ರೀಒಳ್ಳೆಯ ನೃತ್ಯಗಾತಿಯೂ ಹೌದು. ಕೆಲವು ದಿನಗಳ ಹಿಂದೆ ಖಿನ್ನತೆಗೆ ಒಳಗಾಗಿದ್ದರು. ಜಯಶ್ರೀ ಅವರನ್ನು ಸದ್ಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT