‘ಸೂಪರ್ ಸ್ಟಾರ್’ ರಜನಿಕಾಂತ್ ಪ್ರಸ್ತುತ ‘ಅಣ್ಣಾತೆ’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾ ನಿರ್ದೇಶಿಸುತ್ತಿರುವುದು ಸಿರುಥೈ ಶಿವ. ಕೊರೊನಾ ಭೀತಿಗೂ ಮೊದಲೇ ಹೈದರಾಬಾದ್ನಲ್ಲಿ ಇದರ ಪ್ರಮುಖ ಭಾಗದ ಚಿತ್ರೀಕರಣ ಪೂರ್ಣಗೊಳಿಸಲಾಗಿದೆ. ಕೆಲವು ದಿನಗಳ ಶೂಟಿಂಗ್ ಅಷ್ಟೇ ಬಾಕಿ ಉಳಿದಿದೆಯಂತೆ.
ಈ ಚಿತ್ರದ ಬಳಿಕ ರಜನಿಕಾಂತ್ ಅವರು ಲೋಕೇಶ್ ಕನಕರಾಜ್ ಆ್ಯಕ್ಷನ್ ಕಟ್ ಹೇಳಲಿರುವ ಚಿತ್ರದಲ್ಲಿ ನಟಿಸುವುದು ಈಗ ಪಕ್ಕಾ ಆಗಿದೆ. ಅಂದಹಾಗೆ ಇದು ತಲೈವ ನಟನೆಯ 169ನೇ ಚಿತ್ರ. ಇದಕ್ಕೆ ಬಂಡವಾಳ ಹೂಡುತ್ತಿರುವುದು ಅವರ ಸ್ನೇಹಿತ ಹಾಗೂ ನಟ ಕಮಲ್ ಹಾಸನ್. ಅವರ ಸ್ವಂತ ಬ್ಯಾನರ್ ಆದ ರಾಜ್ ಕಮಲ್ ಫಿಲ್ಮ್ ಇಂಟರ್ನ್ಯಾಷನಲ್ ಮೂಲಕ ನಿರ್ಮಿಸಲಾಗುತ್ತಿದೆ.
ಈಗಾಗಲೇ, ಈ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಶುರುವಾಗಿವೆ. ಈ ತಿಂಗಳಿನಿಂದಲೇ ಶೂಟಿಂಗ್ ಆರಂಭಿಸಲು ಕಮಲ್ ಹಾಸನ್ ನಿರ್ಧರಿಸಿದ್ದರಂತೆ. ಲಾಕ್ ಡೌನ್ ಪರಿಣಾಮ ಶೂಟಿಂಗ್ ಪ್ರಕ್ರಿಯೆ ತಡವಾಗಿದೆ. ಆಗಸ್ಟ್ ಮೊದಲ ವಾರ ಚಿತ್ರೀಕರಣ ಆರಂಭಿಸಲು ಚಿತ್ರತಂಡ ನಿರ್ಧರಿಸಿದೆ.
ರಜನಿಕಾಂತ್ ಅವರೊಟ್ಟಿಗೆ ಕಮಲ್ ತೆರೆಹಂಚಿಕೊಳ್ಳುತ್ತಾರೆಯೇ ಎಂಬ ಕುತೂಹಲ ಈ ಇಬ್ಬರು ನಟರ ಅಭಿಮಾನಿಗಳಿಗೆ ಕಾಡುತ್ತಿದೆ. ಆದರೆ, ಈ ಬಗ್ಗೆ ಕಮಲ್ ಹಾಸನ್ ಯಾವುದೇ ಮಾಹಿತಿ ಬಹಿರಂಗಪಡಿಸಿಲ್ಲ. ಇಬ್ಬರೂ ತೆರೆಯ ಮೇಲೆ ಮೋಡಿ ಮಾಡಿದರೂ ಅಚ್ಚರಿ ಇಲ್ಲ ಎನ್ನುವುದು ಅವರ ಅಭಿಮಾನಿಗಳ ಲೆಕ್ಕಾಚಾರ.
ಸದ್ಯ ಕಮಲ್ ಅವರು ‘ವೆಟ್ಟಿಯಾಡುವೈಲಿಯಾಡು 2’ ಚಿತ್ರದಲ್ಲಿ ನಟಿಸಲು ಸಜ್ಜಾಗುತ್ತಿದ್ದಾರೆ ಎಂಬ ಸುದ್ದಿ. ಇದಕ್ಕೆ ಗೌತಮ್ ಮೆನನ್ ಆ್ಯಕ್ಷನ್ ಕಟ್ ಹೇಳಲಿದ್ದಾರೆ. ವರ್ಷಾಂತ್ಯಕ್ಕೆ ಈ ಸಿನಿಮಾದ ಚಿತ್ರೀಕರಣ ಆರಂಭವಾಗುವ ನಿರೀಕ್ಷೆಯಿದೆ.