ಬೆಂಗಳೂರು:ಬಹುನಿರೀಕ್ಷಿತ ‘ಮಣಿಕರ್ಣಿಕಾ: ದಿ ಕ್ವೀನ್ ಆಫ್ ಝಾನ್ಸಿ’ ಚಿತ್ರದ ಟ್ರೇಲರ್ ಮಂಗಳವಾರ ಬಿಡುಗಡೆಯಾಗಿದೆ. ಯುಟ್ಯೂಬ್ಗೆಅಪ್ಲೋಡ್ ಆದ ಎರಡು ಗಂಟೆಗಳಲ್ಲಿ 1.85 ಲಕ್ಷಕ್ಕೂ ಹೆಚ್ಚು ಮಂದಿ 3.19 ನಿಮಿಷಗಳ ಅವಧಿಯ ಟ್ರೇಲರ್ ನೋಡಿ ಮೆಚ್ಚಿಕೊಂಡಿದ್ದಾರೆ. ‘ಮಣಿಕಾರ್ಣಿಕಾ’ (ಝಾನ್ಸಿ ರಾಣಿ ಲಕ್ಷ್ಮೀಬಾಯಿ) ಪಾತ್ರಕ್ಕೆ ಜೀವ ತುಂಬಿರುವ ಕಂಗನಾ ರನೌತ್ರ ಜಬರ್ದಸ್ತ್ ಆ್ಯಕ್ಷನ್ ಮತ್ತು ಡೈಲಾಗ್ಗಳಿಗೆ ಮಾರು ಹೋಗಿದ್ದಾರೆ.
‘ನೀವು ಈ ದೇಶದಲ್ಲಿ ಸಾಮ್ರಾಜ್ಯ ಸ್ಥಾಪಿಸಲು ಬಂದಿದ್ದೀರಿ. ನಾವು ಈ ದೇಶದ ಸೇವೆ ಮಾಡಲು ಹೋರಾಡುತ್ತಿದ್ದೇವೆ’ ಎಂಬ ಡೈಲಾಗ್ ಈ ಟ್ರೇಲರ್ನಲ್ಲಿದೆ. ಇಡೀ ಸಿನಿಮಾದ ದಿಕ್ಕು ಸಹ ಇದೇ ಆಗಿರಬಹುದು ಎಂಬ ಇಣುಕುನೋಟ ನೀಡುವಂತೆ ಈ ಡೈಲಾಗ್ನ ಸಂದರ್ಭ ಚಿತ್ರೀಕರಣಗೊಂಡಿದೆ.
ರಾಧಾಕೃಷ್ಣ ಕರ್ಲಮುಡಿ (ಕ್ರಿಶ್) ನಿರ್ದೇಶನದ ಈ ಚಿತ್ರವು 1857ರಲ್ಲಿ ನಡೆದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಝಾನ್ಸಿಯ ರಾಣಿ ಲಕ್ಷ್ಮೀಬಾಯಿ ವಹಿಸಿದ್ದ ಪಾತ್ರವನ್ನು ಕಟ್ಟಿಕೊಡುತ್ತದೆ. ವೀಕ್ಷಕರ ಮೈನವಿರೇಳಿಸುವ ಹಲವು ದೃಶ್ಯಗಳಿರುವ ಈ ಚಿತ್ರ ಗಣರಾಜ್ಯೋತ್ಸವಕ್ಕೆ ಒಂದು ದಿನ ಮೊದಲು, ಅಂದರೆ ಜ.25, 2019ರಂದು ಏಕಕಾಲಕ್ಕೆ ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ತೆರೆಕಾಣಲಿದೆ.
ರಾಣಿಯಾಗಿ ಪಟ್ಟಾಭಿಷಿಕ್ತಳಾಗುವ ಮೊದಲೇ ಲಕ್ಷ್ಮೀಬಾಯಿಯನ್ನು ರಾಜಮನೆತನದ ಹಿರಿಯರು ಝಾನ್ಸಿಯ ರಕ್ಷಕಳಾಗಿ ಗುರುತಿಸಿದ್ದರು ಎಂಬುದನ್ನು ಟ್ರೇಲರ್ನಲ್ಲಿ ಎದ್ದುಕಾಣುವಂತೆ ಬಿಂಬಿಸಲಾಗಿದೆ. ಬ್ರಿಟಿಷ್ ಪಾತ್ರಧಾರಿಗಳು ಕೆಟ್ಟ ಹಿಂದಿಯಲ್ಲಿ ರಾಜ ಸಂಸ್ಥಾನಕ್ಕೆ ಬೆದರಿಕೆ ಹಾಕಿದರೆ, ರಾಣಿ ಲಕ್ಷ್ಮೀಬಾಯಿಮಾತ್ರ ಶುದ್ಧ ಹಿಂದಿಯಲ್ಲಿ ‘ಭಾರತದ ಮುಂದಿನ ಪೀಳಿಗೆಗೆ ಸ್ವಾತಂತ್ರ್ದದ ಕನಸು ಬಿತ್ತುವ, ಶಿವಾಜಿ ಮಹಾರಾಜರ ಕನಸು ಪುನರುಜ್ಜೀವನಗೊಳಿಸುವ’ ಮಾತು ಆಡುತ್ತಾರೆ.
ಝಾನ್ಸಿಯ ರಾಜ ಗಂಗಾಧರರಾವ್ ಪಾತ್ರದಲ್ಲಿ ಜಿಶುಸೇನ್ ಗುಪ್ತ ಕಾಣಿಸಿಕೊಂಡಿದ್ದಾರೆ. ಕಿರುತೆರೆ ನಟಿ ಅಂಕಿತ ಲೋಖಂಡೆ ಈ ಸಿನಿಮಾ ಮೂಲಕ ಬೆಳ್ಳಿತೆರೆಗೆ ಪದಾರ್ಪಣೆ ಮಾಡಿದ್ದಾರೆ. ಲಕ್ಷ್ಮೀಬಾಯಿಯ ಜೊತೆಗೆ ಹೋರಾಡಿದ ಝಲ್ಕರಿ ಬಾಯಿ ಪಾತ್ರಕ್ಕೆ ಅವರು ಜೀವ ತುಂಬಿದ್ದಾರೆ.
ಮುಂಬೈನಲ್ಲಿ ಮಂಗಳವಾರ ನಡೆದ ಸಮಾರಂಭದಲ್ಲಿ ಟ್ರೇಲರ್ ಬಿಡುಗಡೆ ಮಾಡಲಾಯಿತು. ಸಾಂಪ್ರದಾಯಿಕ ಮರಾಠಿ ಹೆಣ್ಣುಮಕ್ಕಳಂತೆಸೀರೆಯುಟ್ಟಿದ್ದ ಕಂಗನಾ ಕೋಟೆಯಂಥ ಸೆಟ್ನೊಳಗೆ ಡೊಳ್ಳು, ಕಹಳೆಗಳ ಅಬ್ಬರದ ಸದ್ದಿನೊಂದಿಗೆ ರಾಣಿಯ ಗತ್ತಿನಲ್ಲಿ ನಡೆದು ಬಂದು ಎಲ್ಲರ ಗಮನ ಸೆಳೆದರು. ಹಿನ್ನೆಲೆಯಲ್ಲಿ ಶಿವಾಜಿ ಮಹಾರಾಜರ ಪ್ರತಿಮೆ ಇತ್ತು.
ಜೀ ಸ್ಟುಡಿಯೋಸ್ ನಿರ್ಮಾಣದ ‘ಮಣಿಕಾರ್ಣಿಕಾ’ದಲ್ಲಿ ಸುರೇಶ್ ಓಬೆರಾಯ್, ಡನ್ನಿ ಡೆನ್ಝೊಂಗ್ಪಾ, ಅತುಲ್ ಕುಲಕರ್ಣಿ, ಮೊಹಮದ್ ಝೀಶನ್ ಅಯ್ಯುಬ್ ಮತ್ತು ಕುಲ್ಭೂಷಣ್ ಕರಬಂಧ ಬಣ್ಣಹಚ್ಚಿದ್ದಾರೆ. ಗಬ್ಬರ್ ಈಸ್ ಬ್ಯಾಕ್ (2015) ನಿರ್ದೇಶಿಸಿದ್ದ ಕ್ರಿಶ್ಗೆ ಇದು ಎರಡನೇ ಹಿಂದಿ ಸಿನಿಮಾ. ಗಮ್ಯಂ (2008), ವೇದಂ (2010) ಮತ್ತು ಗೌತಮಿಪುತ್ರ ಶಾತಕರ್ಣಿ (2017) ಮೂಲಕ ಕ್ರಿಶ್ ತಮ್ಮ ನಿರ್ದೇಶನ ಸಾಮರ್ಥ್ಯ ಅನಾವರಣಗೊಳಿಸಿದ್ದರು. ‘ಮಣಿಕರ್ಣಿಕಾ’ದಲ್ಲಿ ಅವರು ನಿರ್ದೇಶಕನ ಟೊಪ್ಪಿಯನ್ನುಕಂಗನಾ ಜೊತೆಗೆಹಂಚಿಕೊಂಡಿದ್ದಾರೆ.
‘ಬಾಹುಬಲಿ’ಗೆ ಚಿತ್ರಕತೆ ಬರೆದಿದ್ದ ಕೆ.ವಿ.ವಿಜಯೇಂದ್ರ ಪ್ರಸಾದ್ ‘ಮಣಿಕರ್ಣಿಕಾ’ಗೆ ಕಥೆ ಮತ್ತು ಚಿತ್ರಕತೆ ಬರೆದಿದ್ದಾರೆ. ಗೀತರಚನೆ ಮತ್ತು ಸಂಭಾಷಣೆಯ ಹೊಣೆಯನ್ನು ಪ್ರಸೂನ್ ಜೋಶಿ ನಿಭಾಯಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.