ಹಂಸಿನಿ ಕ್ರಿಯೇಷನ್ಸ್ ಲಾಂಛನದಲ್ಲಿ ರಾಘು ಡಿ.ಜಿ ಅವರು ನಿರ್ಮಿಸುತ್ತಿರುವ ‘ವೇಷ’ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ಸದ್ಯದಲ್ಲೇ ಡಬ್ಬಿಂಗ್ ಆರಂಭವಾಗಲಿದೆ. ಜುಲೈ ವೇಳೆಗೆ ಚಿತ್ರ ತೆರೆಗೆ ಬರಲಿದೆ.
ಚಿಕ್ಕಮಗಳೂರು, ತೀರ್ಥಹಳ್ಳಿ, ಶಿವಮೊಗ್ಗ, ಕುಂದಾಪುರ ಹಾಗೂ ಆಗುಂಬೆಯ ಸುಂದರ ಸ್ಥಳಗಳಲ್ಲಿ ‘ವೇಷ’ದ ಚಿತ್ರೀಕರಣ ನಡೆದಿದೆ.
ಕನ್ನಡದ ಕೆಲವು ನಿರ್ದೇಶಕರ ಜೊತೆ ಕಾರ್ಯನಿರ್ವಹಿಸಿರುವ ಹಾಗೂ ಕೆಲವು ಕಿರುಚಿತ್ರಗಳನ್ನು ನಿರ್ದೇಶಿಸಿರುವ ಕೃಷ್ಣ ಈ ಚಿತ್ರದ ನಿರ್ದೇಶಕರು. ಕುತೂಹಲ ಹಾಗೂ ಕೌಟುಂಬಿಕ ಕಥಾಹಂದರ ಹೊಂದಿರುವ ‘ವೇಷ’ಕ್ಕೆ ನಿರ್ದೇಶಕರೇ ಕಥೆ, ಚಿತ್ರಕಥೆ ಬರೆದಿದ್ದಾರೆ.
ಮೂರು ಹಾಡುಗಳಿರುವ ಈ ಚಿತ್ರಕ್ಕೆ ಉತ್ತಮ್ ಸಾರಂಗ್ ಸಂಗೀತ ನೀಡಿದ್ದಾರೆ. ಸುರೇಂದ್ರ ಪಣಿಯೂರ್ ಛಾಯಾಗ್ರಹಣ, ಸನತ್ ಉಪ್ಪುಂದ ಸಂಕಲನ ಹಾಗೂ ಜಾಗ್ವಾರ್ ಸಣ್ಣಪ್ಪ ಅವರು ಸಾಹಸ ನಿರ್ದೇಶನವಿರುವ ‘ವೇಷ’ದ ಸಂಭಾಷಣೆಯನ್ನು ಪವನ್ ಕುಮಾರ್ ಬರೆದಿದ್ದಾರೆ.
ರಘು ನಾಯಕನಾಗಿ ನಟಿಸಿರುವ ಈ ಚಿತ್ರದ ನಾಯಕಿ ಸೌಖ್ಯ ಗೌಡ. ನಿಧಿ ಮಾರೊಲಿ ಮಂಜು ಪಾವಗಡ, ಪ್ರಿಯಾಂಕ ಕಾಮತ್, ವಾಣಿಶ್ರೀ, ಜಯ್ ಶೆಟ್ಟಿ, ಶಿಲ್ಪ ಕುಮಟಾ ತಾರಾಬಳಗದಲ್ಲಿದ್ದಾರೆ.