ಶ್ರೀರಂಗಪಟ್ಟಣ: ತಾಲ್ಲೂಕಿನ ಪ್ರಸಿದ್ಧ ರಂಗನತಿಟ್ಟು ಪಕ್ಷಿಧಾಮದಲ್ಲಿ ಅರಣ್ಯ ಇಲಾಖೆ ಮತ್ತು ಮೈಸೂರು ಬರ್ಡ್ಸ್ ವಾಚರ್ಸ್ ಗ್ರೂಪ್ ಸಹಯೋಗದಲ್ಲಿ ಭಾನುವಾರ ಪಕ್ಷಿಗಳ ಗಣತಿ ಕಾರ್ಯ ನಡೆಯಿತು.
ಅಂತರರಾಷ್ಟ್ರೀಯ ವೆಟ್ಲ್ಯಾಂಡ್ ಸದಸ್ಯ ಟಿ.ಕೆ. ರಾಯ್ ಅವರ ನೇತೃತ್ವದಲ್ಲಿ 50ಕ್ಕೂ ಹೆಚ್ಚು ಮಂದಿ ಪಕ್ಷಿಗಳ ಗಣತಿ ನಡೆಸಿದರು. ಮುಂಜಾನೆ 6.30ಕ್ಕೆ ಆರಂಭವಾದ ಗಣತಿ ಕಾರ್ಯ ಅರ್ಧ ದಿನ ನಡೆಯಿತು. ಹಕ್ಕಿಗಳ ಹೆಸರು, ಗೂಡು, ಗೂಡುಗಳು ಇರುವ ಮರದ ಹೆಸರು ಕುರಿತು ಮಾಹಿತಿ ಪಡೆದರು. ದೋಣಿಗಳಲ್ಲಿ ಕುಳಿತು ನಡುಗಡ್ಡೆಗಳ ಬಳಿ ತೆರಳಿ ಪಕ್ಷಿಗಳನ್ನು ವೀಕ್ಷಿಸಿದರು. ಬೈನಾಕುಲರ್ ಮತ್ತು ಕ್ಯಾಮೆರಾ ಮೂಲಕ ಪಕ್ಷಿಗಳ ಚಲನವಲನ ಗಮನಿಸಿದರು.
‘ರಂಗನತಿಟ್ಟು ಪಕ್ಷಿಧಾಮ ತೇವಾಂಶ ವಲಯವಾಗಿದ್ದು, ಸಂತಾನಾಭಿವೃದ್ಧಿಗೆ ಪೂರಕ ವಾತಾವರಣವಿದೆ. ವಿಶ್ವ ಮಟ್ಟದಲ್ಲಿ ಇದನ್ನು ಗುರುತಿಸುವಂತಾಗಬೇಕು. ಹಾಗಾಗಿ ವರ್ಷದಲ್ಲಿ 4 ಬಾರಿ ಪಕ್ಷಿಗಳ ಗಣತಿ ನಡೆಸಲು ಉದ್ದೇಶಿಸಲಾಗಿದೆ. ಹೆಸರಾಂತ ಪಕ್ಷಿ ತಜ್ಞರ ಸಹಕಾರದಲ್ಲಿ ವೈಜ್ಞಾನಿಕವಾಗಿ ಕಾರ್ಯ ನಡೆಯುತ್ತಿದೆ’ ಎಂದು ಮೈಸೂರು ವನ್ಯ ಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಏಡುಕೊಂಡಲು ಹೇಳಿದರು.
ಮೈಸೂರು, ಬೆಂಗಳೂರು, ಹಾಸನ, ಶಿವಮೊಗ್ಗ, ಮಂಡ್ಯ, ಚಾಮರಾಜನಗರ ಇತರ ಜಿಲ್ಲೆಗಳು ಪಕ್ಷಿಪ್ರಿಯರು ಹಾಗೂ ಪಕ್ಷಿ ವಿಜ್ಞಾನಿಗಳು ರಂಗನತಿಟ್ಟಿನಲ್ಲಿ ಸೇರಿದ್ದರು. ಪಕ್ಷಿಗಳ ಗುಂಪು, ವಾಸಸ್ಥಾನ, ವಂಶಾಭಿವೃದ್ಧಿ, ಆಹಾರ ಪದ್ಧತಿ, ವಲಸೆ ಕುರಿತು ಚರ್ಚೆ ನಡೆಸಿದರು.