ಬೆಂಗಳೂರು: ಸಂದರ್ಶನದ ವೇಳೆ ಪತ್ರಕರ್ತೆಗೆ ಅಶ್ಲೀಲ ಶಬ್ದಗಳಿಂದ ನಿಂದಿಸಿದ ಆರೋಪ ಎದುರಿಸುತ್ತಿರುವ ಮಲಯಾಳ ನಟ ಶ್ರೀನಾಥ್ ಭಾಸಿ ಅವರಿಗೆ ಕೇರಳ ನಿರ್ಮಾಪಕರ ಸಂಘ ತಾತ್ಕಾಲಿಕ ನಿಷೇಧ ಹೇರಿದೆ.
‘ಭಾಸಿ ಅವರನ್ನು ಚಿತ್ರರಂಗದಿಂದ ತಾತ್ಕಾಲಿಕವಾಗಿ ದೂರವಿಡಲು ಮಂಗಳವಾರ ನಡೆದ ಸಂಘದ ಸಭೆಯಲ್ಲಿ ನಿರ್ಧರಿಸಲಾಗಿದೆ. ಆದಾಗ್ಯೂ ಚಿತ್ರೀಕರಣ ಬಾಕಿ ಇರುವ ಚಿತ್ರಗಳಲ್ಲಿ ನಟನೆಗೆ ಅವಕಾಶ ನೀಡಲಾಗಿದೆ’ ಎಂದು ಚಿತ್ರ ನಿರ್ಮಾಪಕರ ಸಂಘದ ಕಾರ್ಯಕಾರಿ ಸದಸ್ಯರು ಹೇಳಿದ್ದಾರೆ.
‘ಚಟ್ಟಂಬಿ’ ಸಿನಿಮಾದ ಪ್ರಚಾರದ ಅಂಗವಾಗಿ ಸೆಪ್ಟೆಂಬರ್ 21ರಂದು ಹಮ್ಮಿಕೊಂಡಿದ್ದ ಸಂದರ್ಶನದ ವೇಳೆ ಶ್ರೀನಾಥ್ ಅವರು ಪತ್ರಕರ್ತೆಯ ವಿರುದ್ಧ ನಿಂದನಾತ್ಮಕ ಪದ ಬಳಸಿದ್ದರು. ಈ ದೃಶ್ಯವಿದ್ದ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು.
ಶ್ರೀನಾಥ್ ವಿರುದ್ಧ ಆನ್ಲೈನ್ ಮಾಧ್ಯಮವೊಂದರ ಪತ್ರಕರ್ತೆ ಮಾರಾಡು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪರಿಣಾಮವಾಗಿ ಭಾಸಿ ಅವರನ್ನು ಬಂಧಿಸಿ, ಬಳಿಕ ಜಾಮೀನಿನ ಮೇಲೆ ಬಿಡುಗಡೆಗೊಳಿಸಲಾಗಿತ್ತು. ಪ್ರಕರಣದ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.