ಕನ್ನಡದಲ್ಲಿ 250ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಕಿಲ್ಲರ್ ವೆಂಕಟೇಶ್ ಲಿವರ್ ವೈಫಲ್ಯದಿಂದ ಬಳಲುತ್ತಿದ್ದು, ಸಾವು– ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. ಸದ್ಯಕ್ಕೆ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇತ್ತೀಚೆಗೆನಡೆದ ಚಂದನವನ ಅವಾರ್ಡ್ ಕಾರ್ಯಕ್ರಮದಲ್ಲಿ ನಟ ಜಗ್ಗೇಶ್ ಹೆಸರು ಪ್ರಸ್ತಾಪಿಸದೇ ಹಿರಿಯ ಕಲಾವಿದರೊಬ್ಬರು ಒಂದು ದಿನದ ಜೀವನಕ್ಕೂ ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದು ಮಾಧ್ಯಮದವರ ಮುಂದೆ ಹೇಳಿದ್ದರು. ನೂರಾರು ಚಿತ್ರಗಳಲ್ಲಿ ನಟಿಸಿ ಕಲಾಸೇವೆ ಮಾಡಿರುವ ಹಲವು ಕಲಾವಿದರ ಬದುಕು ಈಗ ಸಂಕಷ್ಟದ ಕುಲುಮೆಯಲ್ಲಿ ಬೇಯುತ್ತಿದೆ ಎಂದು ನೋವು ತೋಡಿಕೊಂಡಿದ್ದರು.
ಈಗ ಟ್ವಿಟರ್ನಲ್ಲಿ ವೆಂಕಟೇಶ್ ಅವರ ಸ್ಥಿತಿಯ ಬಗ್ಗೆ ಜಗ್ಗೇಶ್ ಮಾಹಿತಿ ಹಂಚಿಕೊಂಡಿದ್ದಾರೆ. ‘ಕಿಲ್ಲರ್ ವೆಂಕಟೇಶ್ ಇಂದು ಲಿವರ್ ವೈಫಲ್ಯದಿಂದ ಸಾವು ಬದುಕಿನ ಹೋರಾಟ ನಡೆಸುತ್ತಿದ್ದಾನೆ. ಇವನ ವಿಷಯವನ್ನೇ ನಾನು ಚಂದನವನ ಅವಾರ್ಡ್ ವೇದಿಕೆಯಲ್ಲಿ ಮಾತಾಡಿದ್ದು! ನನ್ನ ಕೈಲಾದ ಸಹಾಯ ಮಾಡಿ ಇವನನ್ನು ಉಳಿಸಿಕೊಳ್ಳಲು ಯತ್ನಿಸುತ್ತಿರುವೆ. ಹಿರಿಯ ಕಲಾವಿದರ ಸ್ಥಿತಿ ಕಂಡು ತುಂಬಾ ದುಃಖವಾಯಿತು’ ಎಂದು ಟ್ವೀಟ್ ಮಾಡಿದ್ದಾರೆ.
ವೈಯಕ್ತಿಕವಾಗಿ ಅವನ ಹಾರೈಕೆಗೆ ವಿನಂತಿಸಲು ವಿಕ್ಟೋರಿಯಾ ಆಸ್ಪತ್ರೆಗೆ ಡಾ: ಕಾಣಲು 1.30 ನಾನೆ ಹೋಗುತ್ತಿರುವೆ..ಕಷ್ಟದಲ್ಲಿ ಇರುವ ಚಿತ್ರರಂಗದ ಹಿರಿಯರಿಗೆ ಭುಜಕೊಡುವ ಗುಣ ಇಂದಿನವರು ಅಳವಡಿಸಿಕೊಳ್ಳಲು ನಾಂದಿಹಾಡುವೆ!
— ನವರಸನಾಯಕ ಜಗ್ಗೇಶ್ (@Jaggesh2) February 19, 2020
ವಾ.ಮಂಡಳಿ ಹಾಗು ನಿರ್ಮಾಪಕರ ಸಂಘಕ್ಕೆ ಕೈಜೋಡಿಸಲು ಹೇಳಿರುವೆ!
ವಿಶೇಷ ಕಾಳಜಿ ತೋರಿದರು ಧನ್ಯವಾದಗಳು ಸಾ.ರಾ.ಗೋ..ಭಾ.ಮಾ. https://t.co/m6pLoC7aoC pic.twitter.com/hjHoaPqfXJ
ಜೊತೆಗೆ, ವೆಂಕಟೇಶ್ ಅವರಿಗೆ ಹೆಚ್ಚಿನ ವೈದ್ಯಕೀಯ ನೆರವು ಕಲ್ಪಿಸಲು ಜಗ್ಗೇಶ್ ಮಾಡಿದ ಮನವಿಗೆ ಆರೋಗ್ಯ ಸಚಿವ ಶ್ರೀರಾಮುಲು ಮತ್ತು ಉಪ ಮುಖ್ಯಮಂತ್ರಿ ಅಶ್ವತ್ಥ್ ನಾರಾಯಣ ಸ್ಪಂದಿಸಿದ್ದಾರೆ.
ಕಿಲ್ಲರ್ ವೆಂಕಟೇಶ್ ಅವರು ಒಂದು ಕಾಲದಲ್ಲಿ ಬಹುಬೇಡಿಕೆಯ ನಟ. ಪೋಷಕ ಪಾತ್ರ ಹಾಗೂ ಖಳನಟನಾಗಿಯೂ ಅವರು ನಟಿಸಿದ್ದಾರೆ. ಜಗ್ಗೇಶ್ ಅವರೊಟ್ಟಿಗೆ ‘ರಣಧೀರ’ ಚಿತ್ರದಲ್ಲಿ ಅಭಿನಯಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.